My Stories are universal

My Story Book

Kodagina Ganesh

ನನ್ನೊಳಗಿನ ಕಥೆಗಳು

ಕೊಡಗಿನ ಗಣೇಶ್

ನನ್ನೊಳಗಿನ ಕತೆಗಳು

ಕೊಡಗಿನ ಗಣೇಶ್

My Story Book

Kodagina Ganesh
Story Book Cover

ಪರಿಚಯ (Introduction)

ಪುಸ್ತಕಗಳು ಮಾನವನ ಮನಸ್ಸಿನ ಅಂತರಾಳದಿಂದ ಹುಟ್ಟುವ ಭಾವನೆಗಳ ಸುಂದರ ಪ್ರತಿಬಿಂಬ. ಒಂದು ಕತೆ ಅಥವಾ ಕವಿತೆ ಕೇವಲ ಪದಗಳ ಸಾಲಾಗಿರದೆ, ಅದು ಅನುಭವಗಳ, ನೆನಪುಗಳ ಮತ್ತು ಜೀವನದ ನಿಜಸ್ವರೂಪದ ಅಭಿವ್ಯಕ್ತಿ. ಈ ಇ–ಪುಸ್ತಕದಲ್ಲಿರುವ ಕಥೆಗಳು ಮತ್ತು ಕವಿತೆಗಳು ಅಂಥವೇ ಅನೇಕ ಚಿಂತನೆಗಳ, ಭಾವನೆಗಳ ಮತ್ತು ಬದುಕಿನ ಕ್ಷಣಗಳ ಸಂಗ್ರಹವಾಗಿದೆ.

“My Story Book” ಮತ್ತು “My Poem Book” ಎಂಬ ಈ ಇ–ಪುಸ್ತಕಗಳು ಓದುಗರನ್ನು ಬದುಕಿನ ವಿವಿಧ ಅನುಭವಗಳ ಕಡೆಗೆ ಕರೆದುಕೊಂಡು ಹೋಗುವ ಪ್ರಯತ್ನವಾಗಿದೆ. ಕೆಲ ಕಥೆಗಳು ಬದುಕಿನ ಸಣ್ಣಸಣ್ಣ ಘಟನೆಗಳಿಂದ ಹುಟ್ಟಿವೆ; ಕೆಲವು ಕವಿತೆಗಳು ಮನಸ್ಸಿನ ಆಳದಿಂದ ಹೊರಬಂದ ಭಾವನೆಗಳ ಪ್ರತಿಧ್ವನಿಯಾಗಿದೆ. ಓದುಗರಿಗೆ ಚಿಂತನೆಗೆ ಆಹ್ವಾನ ನೀಡುವುದು ಮತ್ತು ಮನಸ್ಸಿಗೆ ಸ್ಪರ್ಶಿಸುವುದು ಈ ಬರಹಗಳ ಉದ್ದೇಶ.

ಈ ಇ–ಪುಸ್ತಕವು ಕೇವಲ ಬರಹಗಳ ಸಂಗ್ರಹವಲ್ಲ; ಇದು ಕಲಿಕೆಯ ಒಂದು ಪ್ರಯಾಣವೂ ಹೌದು. ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು, ಕಡಿಮೆ ಕೋಡಿಂಗ್ ತಿಳುವಳಿಕೆಯಲ್ಲಿಯೇ ಈ ಡಿಜಿಟಲ್ ಪುಸ್ತಕವನ್ನು ರೂಪಿಸುವ ಪ್ರಯತ್ನ ಮಾಡಲಾಗಿದೆ. ಇದರಿಂದ ಓದುಗರಿಗೆ ಕಥೆಗಳು ಮತ್ತು ಕವಿತೆಗಳು ಸುಲಭವಾಗಿ ತಲುಪುವಂತೆ ಮಾಡಲಾಗಿದೆ.ಈ ಪುಸ್ತಕವನ್ನು ಓದುತ್ತಿರುವ ಪ್ರತಿಯೊಬ್ಬ ಓದುಗರಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಓದು, ಅಭಿಪ್ರಾಯ ಮತ್ತು ಪ್ರೋತ್ಸಾಹವೇ ಈ ಬರವಣಿಗೆಗೆ ಹೊಸ ಸ್ಪೂರ್ತಿ ನೀಡುತ್ತದೆ.

✍️ಲೇಖಕರ ಬಗ್ಗೆ (About Author)

aboutgk image

ಈ ಇ–ಪುಸ್ತಕದ ಲೇಖಕರು ಕೊಡಗಿನ ಗಣೇಶ್, ಸ್ನಾತಕೋತ್ತರ ಪದವೀಧರರು. ಇವರು ಸಾಹಿತ್ಯ, ಭಾಷೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶಿಷ್ಟ ಅನುಭವ ಹೊಂದಿದ್ದಾರೆ. ತಮ್ಮ ವೃತ್ತಿ ಜೀವನದ ಆರಂಭದಲ್ಲಿ “ಸಿಡಿಲು” ಮತ್ತು “ಸುದ್ದಿ ಸ್ವಾಗರ್ಯ” ಪತ್ರಿಕೆಗಳಲ್ಲಿ ಸಂಪಾದಕರಾಗಿ ಅನೇಕ ವರ್ಷಗಳು ಸೇವೆ ಸಲ್ಲಿಸಿದ್ದಾರೆ. ನಂತರ ವಿಡಿಯೋ ಡಾಕ್ಯುಮೆಂಟರ್ ಆಗಿ ಕೆಲಸ ಮಾಡಿ ತಮ್ಮದೇ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ಮಂದಿಗೆ ಉದ್ಯೋಗಾವಕಾಶಗಳನ್ನು ನೀಡಿದರು. ಭಾಷೆಗಳ ಮೇಲಿನ ಅಪಾರ ಆಸಕ್ತಿಯಿಂದ ಅವರು ಅನೇಕ ವಿದೇಶಿ ಭಾಷೆಗಳನ್ನು ಕಲಿತು, ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಕಂಪನಿಗಳ ಎಂಜಿನಿಯರ್‌ಗಳಿಗೆ ಆ ಭಾಷೆಗಳನ್ನು ಬೋಧಿಸಿದ್ದಾರೆ. ಭಾರತದಲ್ಲಿ ಅತ್ಯಧಿಕ ವಿದೇಶಿ ಭಾಷೆಗಳನ್ನು ಕಲಿತು ಅವುಗಳನ್ನು ಬೋಧಿಸಿರುವ ಕೆಲವೇ ಕೆಲ ಭಾಷಾ ಪರಿಣಿತರಲ್ಲಿ ಇವರೂ ಒಬ್ಬರು. ಇವರು ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಡಚ್, ಡ್ಯಾನಿಶ್, ಸ್ವೀಡಿಷ್, ನಾರ್ವೇಜಿಯನ್, ಫಿನ್ನಿಷ್, ಇಟಾಲಿಯನ್ ಮತ್ತು ಪೋರ್ಚಗೀಸ್ ಸೇರಿದಂತೆ ಅನೇಕ ಯುರೋಪಿಯನ್ ಭಾಷೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಜೊತೆಗೆ ಕೊರಿಯನ್, ಜಪಾನೀಸ್, ಥಾಯ್ ಹಾಗೂ ಹಲವಾರು ಭಾರತೀಯ ಭಾಷೆಗಳಲ್ಲಿಯೂ ಉತ್ತಮ ಜ್ಞಾನ ಹೊಂದಿದ್ದಾರೆ. ಇವರು ಅನೇಕ ಕಂಪೆನಿಗಳ ಉನ್ನತಾಧಿಕಾರಿಗಳಿಗೆ Business English ತರಬೇತಿ ನೀಡಿದ್ದು, ನೂರಾರು ವಿದ್ಯಾರ್ಥಿಗಳಿಗೆ IELTS ತರಬೇತಿ ನೀಡಿ ವಿದೇಶಗಳಲ್ಲಿ ಓದಲು

ಮತ್ತು ಕೆಲಸ ಮಾಡಲು ಮಾರ್ಗದರ್ಶನ ನೀಡಿದ್ದಾರೆ. ಇವರು ಹಲವಾರು ದೇಶಗಳನ್ನು ಸಂಚರಿಸಿ ಅಂತರಾಷ್ಟ್ರೀಯ ಅನುಭವವನ್ನು ಪಡೆದಿದ್ದಾರೆ. ಓದುವುದು, ಕಥೆ–ಕವಿತೆ ಬರೆಯುವುದು, ಲಾಂಗ್ ಡ್ರೈವ್ ಮಾಡುವುದು, ವಿವಿಧ ಅಡುಗೆಗಳನ್ನು ತಯಾರಿಸುವುದು, ಕಲಿಸುವುದು, ಕೃಷಿ ಹಾಗೂ ಹೂದೋಟ ಮಾಡುವುದು ಇವರ ಪ್ರಮುಖ ಹವ್ಯಾಸಗಳು. ಇತ್ತೀಚೆಗೆ ಕೋಡಿಂಗ್ ಕಲಿತು ತಮ್ಮದೇ ಬರಹಗಳಾದ ಕಥೆ, ಕವನ, ಲೇಖನ ಮತ್ತು ಕವಿತೆಗಳನ್ನು ಒಳಗೊಂಡ ಇ–ಪುಸ್ತಕವನ್ನು ಸ್ವತಃ ನಿರ್ಮಿಸಿದ್ದಾರೆ. ಈ ಡಿಜಿಟಲ್ ಪುಸ್ತಕವು ಸಾಮಾಜಿಕ ಜಾಲತಾಣಗಳ ಮೂಲಕ ಓದುಗರನ್ನು ತಲುಪಲು ಹೆಚ್ಚು ಸುಲಭ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. -ಮುಂದಿನ ಪುಟಕ್ಕೆ...

ಮುನ್ನುಡಿ →

aboutgk image

ನಮ್ಮ ಮನಸ್ಸಿನೊಳಗಿನ ಭಾವನೆಗಳು ಅಕ್ಷರ ರೂಪ ಕಂಡು ಕೊಂಡಾಗ ಅವಕ್ಕೆ ಜೀವ ಬಂದು ಓಡಾಡತೊಡಗುತ್ತವೆ. ಅನೇಕ ವರ್ಷಗಳಿಂದ ಹಾಗೆ ಬರೆದ ಅಕ್ಷರಗಳು ಅಲ್ಲಲ್ಲಿ ಚದುರಿ ಬಿದ್ದಿದ್ದವು, ಅವುಗಳಿಗೆ ಒಂದು ಹೊಸ ಆಯಾಮ ಕೊಟ್ಟು ಪುಸ್ತಕ ರೂಪದಲ್ಲಿ ಹೊರತರಬೇಕೆಂದು ಕೊಂಡಾಗ ನನಗೆ ನೆನಪಾದದ್ದು ಡಿಜಿಟಲ್ ಪುಸ್ತಕಗಳು (e-books), ಇವು ಭೌತಿಕ ಪುಸ್ತಕಗಳ ಎಲೆಕ್ಟ್ರಾನಿಕ್ ಆವೃತ್ತಿಗಳಾಗಿದ್ದು, ಇ-ರೀಡರ್‌ಗಳು, ಟ್ಯಾಬ್ಲೆಟ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಓದಬಹುದು. ಇವುಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು, ಕೊಂಡೊಯ್ಯಬಹುದು ಮತ್ತು ಹುಡುಕಬಹುದು. ಇ-ಲೈಬ್ರರಿ (eBook Library)ಗಳ ಮೂಲಕ ಶಿಕ್ಷಣ ಮತ್ತು ಜ್ಞಾನಾರ್ಜನೆಗೆ ಇವು ಅತ್ಯಂತ ಅನುಕೂಲಕರವಾಗಿವೆ ಎಂಬುದು. ಅದರ ಫಲವೇ ಈ ಪ್ರಯತ್ನ.ಇಲ್ಲಿ ನನ್ನ ಎಲ್ಲಾ ಕತೆ, ಕವನ, ಮುಖ್ಯ ಲೇಖನಗಳ ಆಗರವೇ ಅಡಗಿದೆ. ನಾವು e-books ತಯಾರಿಸಲು ಹಲವಾರು ವಿಷಯಗಳು ಗೊತ್ತಿರಬೇಕಾಗುತ್ತದೆ. ಕೋಡಿಂಗ್, ವಿನ್ಯಾಸ ಇತ್ಯಾದಿಗಳನ್ನು ಸತತ ಒಂದು ತಿಂಗಳಿನಿಂದ ಕಲಿತು ಅದನ್ನು ತಯಾರು ಮಾಡುತ್ತಿದ್ದೇನೆ. ಒಂದೆರಡು ತಿಂಗಳಲ್ಲಿ ಸಂಪೂರ್ಣ ಡಿಜಿಟಲ್ ಪುಸ್ತಕ ಆಸಕ್ತ ಓದುಗರ ಮೊಬೈಲ್ ಮತ್ತು ವೆಬ್ಸೈಟ್ ಗಳಲ್ಲಿ ದೊರೆಯಲಿವೆ. “My Story Book” ಮತ್ತು “My Poem Book” ಎಂಬ ಈ ಇ–ಪುಸ್ತಕವು ಬದುಕಿನ ವಿವಿಧ ಅನುಭವಗಳು, ಭಾವನೆಗಳು ಮತ್ತು ಚಿಂತನೆಗಳಿಂದ ಮೂಡಿಬಂದ ಕಥೆಗಳು ಹಾಗೂ ಕವಿತೆಗಳ ಸಂಕಲನವಾಗಿದೆ. ಜೀವನದ ಸಣ್ಣಸಣ್ಣ ಘಟನೆಗಳು,

ಮನಸ್ಸಿನಲ್ಲಿ ಮೂಡುವ ಅನೇಕ ಭಾವನೆಗಳು ಮತ್ತು ಸಮಾಜದಲ್ಲಿ ಕಾಣುವ ನೈಜ ಕ್ಷಣಗಳು ಈ ಬರಹಗಳಿಗೆ ಸ್ಪೂರ್ತಿಯಾಗಿವೆ. ಈ ಡಿಜಿಟಲ್ ಪುಸ್ತಕವು ಓದುಗರಿಗೆ ಕಥೆಗಳು ಮತ್ತು ಕವಿತೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ನಿರ್ಮಿಸಲಾಗಿದೆ. ಓದುವ ಪ್ರಕ್ರಿಯೆ ಸರಳವಾಗಿದ್ದು, ಪ್ರತಿಯೊಂದು ಪುಟವೂ ಓದುಗರನ್ನು ಹೊಸ ಚಿಂತನೆಗಳ ಕಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತದೆ. ಈ ಪುಸ್ತಕದ ಪ್ರತಿಯೊಂದು ಸಾಲು ಓದುಗರ ಮನಸ್ಸಿಗೆ ಒಂದು ಸಣ್ಣ ಸ್ಪರ್ಶವಾಗಲಿ ಎಂಬ ಆಶಯ. - ಪರಮೇಶ್ವರ ಗುರುಸ್ವಾಮಿ. -ಮುಂದಿನ ಪುಟಕ್ಕೆ...

1️⃣. ಹಸಿವುಂಡು ನಡೆಯುತ್ತಾ

ಆಗಾಗ ಏನಾದರೊಂದು ಬರೆಯೋಣವೆಂದು ಯೋಚಿಸುತ್ತಿರುತ್ತೇನೆ, ಆದರೆ ಒಂದಲ್ಲಾ ಒಂದು ತಗಲಾಕಿ ಕೊಂಡು ಮೂಡನ್ನೇ ಹಾಳು ಮಾಡಿ ಬಿಡುತ್ತವೆ. ಪೂರ್ತಿ ದಿನ ಕುಳಿತುಕೊಂಡರೆ ಪುಟಗಟ್ಟಲೆ ಬರೆದು ಬಿಸಾಕಿ ಬಿಡಬಹುದು, ಆದರೆ ಪೂರ್ತಿ ದಿನ ಸಿಗೋದೇ ಕಷ್ಟ.

ನೇಣಿನಲ್ಲಿ, ನೀರಿನಲ್ಲಿ, ಬೆಂಕಿಯಲ್ಲಿ, ಗಾಳಿಯಲ್ಲಿ, ಸಾವನ್ನು ಹುಡುಕುವವರು, ನೋವಿನಲ್ಲಿ, ಭಯದಲ್ಲಿ, ಅವಮಾನದಲ್ಲಿ, ಹತಾಶೆಯಲ್ಲಿ, ಕೋಪದಲ್ಲಿ, ಸಾವನ್ನು ಅಪ್ಪಿಕೊಳ್ಳುವವರು ಒಮ್ಮೆ ಯೋಚಿಸಿ! ಸಾವು ನಿಮ್ಮನ್ನು ಹುಡುಕಲಿಲ್ಲ, ನೀವೇಕೆ ಸಾವ ಹುಡುಕಿ ಹೊರಡುತ್ತೀರಿ?

ಬೆಳ್ಳಂಬೆಳಿಗ್ಗೆ ಮೈದುಂಬಿಕೊಂಡ ಬವಣೆಗಳ ನಡುವೆ ಬದುಕುವ ಛಲ, ಆಗುತ್ತಿದ್ದ ಅವಮಾನಗಳು, ದುಃಖ-ದುಮ್ಮಾನ, ಹಸಿವಿನ ಸಂಕಟ, ಎದೆಗುಂದಿದ ಹೃದಯ, ಎಲ್ಲದರ ನಡುವೆ ಕಾಡುತ್ತಿದ್ದ ಒಂಟಿತನ, ಖರ್ಚಿಗಿಲ್ಲದ ಹಣ, ಕಿತ್ತು ಬರುತ್ತಿದ್ದ ಪಾದರಕ್ಷೆಗಳು, ಮಾಸಿದ ಬಟ್ಟೆಗಳು, ಎಣ್ಣೆ ಕಾಣದ ನೆತ್ತಿ.... ಇವುಗಳನ್ನೆಲ್ಲಾ ಮೀರಿ ಸಿಗರೇಟೊಂದನು ಹಚ್ಚಿ ಕುಕ್ಕನಳ್ಳಿಯ ಕೆರೆಯ ಏರಿಯ ಮೇಲೆ ನಡೆಯುತ್ತಾ ಹೋಗುತ್ತಿದ್ದರೆ..ಗಾಳಿಯ ರಭಸಕ್ಕೆ ದಡೆಗೆ ಬಂದು ಅಪ್ಪಳಿಸುವ ಅಲೆಗಳು, ಅಲ್ಲಲ್ಲಿ ನೀರು ಕೋಳಿಗಳು, ಬೆಳ್ಳಕ್ಕಿಗಳು, ಮೀನುಗಳನ್ನು ಬೇಟೆಯಾಡುತ್ತಾ ಈಜುತಿರಲು, ಮೇಲಿಂದ ಹಾರಿ ಬಂದು ಲಬಕ್ಕೆಂದು ದೊಡ್ಡ ಮೀನುಗಳನ್ನು ತನ್ನ ಕಾಲ್ಬೆರಳುಗಳ ನಡುವೆ ಸಿಕ್ಕಿಸಿ ಹಾರಿ ಹೋಗುವ ಹದ್ದುಗಳು, ದೂರದಲ್ಲೆಲ್ಲೋ ತನ್ನ ಪೊಟರೆಯ ಗೂಡಲ್ಲಿ ಮರಿಗಳ ಹಸಿವಿನ ಆಕ್ರಂದನ ತಣಿಸಲು ಕೊಕ್ಕಿನ ತುಂಬಾ ಮರಿ ಮೀನುಗಳ ಹೆಕ್ಕಿ ಹೆಕ್ಕಿ ತುಂಬಿದ ಬಾಯಿಯೊಂದಿಗೆ ಹಾರಿ ಹೋಗುತ್ತಿರುವ ಮಿಂಚುಳ್ಳಿಗಳು, ದಡದ ಅಂಚಿನಲ್ಲಿ ಈಜಾಡುತ್ತಾ ಬಂದು ಹೋಗುವ ಕೇಜಿ ಗಾತ್ರದ ಮೀನುಗಳು, ಕೆರೆ ಮೂಲೆಯಲ್ಲಿ ಬಹಿರ್ದೆಸೆಗೆ ಹೋದವರು ಸ್ವಚ್ಛಗೊಳಿಸಿ ಸಾಗುತ್ತಿರೆ...

ಬಲಬದಿಯ ಏರಿಯ ಅಂಚಿಗೆ ಅಲ್ಲಲ್ಲಿ ಕಟ್ಟಿದ್ದ ಉದ್ದವಾದ ವಿಶ್ರಾಂತಿ ಕುರ್ಚಿಗಳ ಮೇಲೆ ಬಾಹುಗಳಲಿ, ತೆಕ್ಕೆಗಳಲಿ, ತುಟಿಗಳಲಿ, ಎದೆಗಳಲಿ ಬಿದ್ದಿರುವ ಪ್ರೇಮಿಗಳು, ಕೆರೆ ಏರಿಯ ಕಾಲ್ದಾರಿಯಲ್ಲಿ ಕೈಕಾಲು ದೇಹಕ್ಕೆ ಶಕ್ತಿ ತುಂಬಲು ಬಿರಬಿರನೆ ನಡೆವ ತರುಣ ತರುಣಿಯರು, ಮದ್ಯ ವಯಸಿನ ಪುರುಷ ಪುರುಷಿಯರು, ವಾಯು ವಿಹಾರಕ್ಕೆಂದು ಊರುಗೋಲು ಹಿಡಿದು ನಡೆಯುತ್ತಿರುವ ವಯಸ್ಸು ಮೀರುತ್ತಿರುವ ದಂಪತಿಗಳು, ಈ ಎಲ್ಲರ ಆಟಾಟೋಪಗಳನ್ನು ನೋಡುತ್ತಾ, ಸಿಗರೇಟಿನ ಬುಡಕ್ಕೆ ತುಟಿ ಕೊಟ್ಟು ದಮ್ಮು ಎಳೆದು ಮೂಗಿನ ಹೊಳ್ಳೆಗಳಿಂದ ಹೊಗೆ ಬಿಡುತ್ತಾ ಸಾಗುತ್ತಾ ಕುಕ್ಕರಹಳ್ಳಿ ಕೆರೆ ದಂಡೆಯ ಕೊನೇ ಭಾಗದಲ್ಲಿ ಪ್ರೇಮಿಗಳ ಕುರ್ಚಿಯ ಮೇಲೆ ಕೂರೋಣವೆಂದು ಕೊಂಡರೂ, ಅಲ್ಲಿ ಕುಳಿತು ಪ್ರೇಮಿಗಳಿಗೇಕೆ ನಿರಾಶೆ ಮಾಡುವುದೆಂದು ಕೊಳ್ಳುತ್ತಾ ಅನತಿ ದೂರದಲ್ಲಿದ್ದ ಆಲದ ಮರದ ಕಡೆ ನಡೆದೆ. -ಮುಂದಿನ ಪುಟಕ್ಕೆ...

ಈ ಆಲದ ಮರದ ಬೀಳಲು ಬೇರುಗಳಲ್ಲಿ ಚುನ್ನಾಟವಾಡುತ್ತಿರುವ ಅಳಿಲುಗಳು, ಹತ್ತಿ ಇಳಿದು ಮೇಲೇರಿ ಮರದ ಕೊಂಬೆಗಳ ನಡುವೆ ಪ್ರೇಮಿಸಿ ಚಂಗನೆ ನೆಗೆಯುತ್ತಾ ಮರದ ತುಂಬೆಲ್ಲಾ ಓಡಾಡುತ್ತಿರುವುದನ್ನು ಕಣ್ತುಂಬಿಕೊಂಡು ಆಲದ ಮರದ ಬುಡದಲ್ಲಿ ಕುಳಿತು ಮುಗಿದ ಸಿಗರೇಟಿನ ತುಂಡನ್ನು ನೆಲಕ್ಕೆ ತಿವಿದು ಬೆಂಕಿಯಾರಿಸಿ, ಕಾಲು ಚಾಚಿ, ಮರಕ್ಕೊರಗಿ ಹಾಯಾಗಿ ವಿಶ್ರಮಿಸಿ ಕೊಳ್ಳಲು ತೊಡಗುತ್ತಿರೆ, ಹಾಳಾದ ಹೊಟ್ಟೆ ತಾಳ ಹಾಕಲು ಶುರುಮಾಡುತ್ತದೆ. ಅಂಗಡಿಯಲ್ಲಿ ಸಿಗರೇಟು ಕೊಳ್ಳುವುದರ ಬದಲು ಬನ್ನು ಬಾಳೆಹಣ್ಣು ಕೊಂಡಿದ್ದಿದ್ದರೆ ಹಸಿವಿಗೆ ಬ್ರೇಕ್ ಬಿದ್ದಿರುತ್ತಿತ್ತು, ಆದರೆ ನನ್ನ ಆಯ್ಕೆ ಸಿಗರೇಟೇ ಆಗಿತ್ತು!. 'ಹಸಿವಿನಲ್ಲೂ ಸಿಗರೇಟೇ' ಎಂದು ಕೇಳಲು ಬಳಿಯಲ್ಲಿ ಯಾರೂ ಇರಲಿಲ್ಲ. ಆ ಹಸಿವಿನಲ್ಲೇ ದಣಿವಾರಿಸಿ ಕೊಳ್ಳುತ್ತಾ ನಿದ್ರೆಗೆ ಜಾರ ತೊಡಗಿದೆ...

ಈ ನಿದ್ರೆಯೆಂಬುದು ಬೇಕೆಂದಾಗ ಬರುವುದಿಲ್ಲ, ಅನೇಕ ಬಾರಿ ವ್ಯಾಯಾಮ, ಯೋಗ ಮಾಡುವವರಿಗೂ, ಧೀರ್ಘ ಉಸಿರೆಳೆದು ಬಿಡುವವರಿಗೂ, ಒಂದರಿಂದ ನೂರು ಎಣಿಸುತ್ತಾ ಮಲಗುವವರಿಗೂ ಕೇರು ಮಾಡುವುದಿಲ್ಲ. ಬೇಡವೆಂದಾಗ ಆಗಾಗ ತೂಕಡಿಕೆ ಬರಿಸುತ್ತದೆ. ಒಮ್ಮೆಮ್ಮೆ ಹಸಿವು ಹೆಚ್ಚಾದಾಗಲೂ ನಿದ್ರೆಯ ಮಂಪು ಅವರಿಸಿಬಿಡುತ್ತದೆ. ಅಳತೆ ಮೀರಿ ಎಣ್ಣೆ ಹೊಡೆದಾಗ ಯಾವಾಗ ಬೇಕಾದರೂ ನಿದ್ರೆ ಬರಬಹುದು. ರಾತ್ರಿ ನಿದ್ರೆ ಬಾರದಾಗ ಕೆಲವರಿಗೆ ಬೀಡಿ ಸಿಗರೇಟುಗಳು ಅಸರೆಯಾಗ ಬಲ್ಲವು. ಈ ನನ್ನ ನಿದ್ರೆಗೆ ನಿನ್ನೆಯ ತೊಳಲಾಟ ಮತ್ತು ಇಂದಿನ ಹಸಿವೇ ಕಾರಣವಾಗಿತ್ತು. ಇದೆ ಆಲೋಚನೆಯಲ್ಲಿ ನಿದ್ರೆಗೆ ಜಾರಿ ಬಿಟ್ಟೆ. ಇಂತಹಾ ಸುಖ ನಿದ್ರೆಯಿಂದ ನನ್ನನ್ನು ಎಚ್ಚರಗೊಳಿಸಿದ್ದು ಒಂದು ಹಸು, ಅದು ತನ್ನ ನಾಲಿಗೆಯನ್ನು ಹಿರಿ ಹಿರಿದು ನನ್ನ ಗಡ್ಡ ತುಂಬಿದ ಮುಖವನ್ನು ನೆಕ್ಕುತ್ತಿತ್ತು. ಕಣ್ಣು ಬಿಟ್ಟು ಒಂದು ಕ್ಷಣ ಹೌಹಾರಿ ಕೈಯಿಂದ ಅದರ ಮುಖಕ್ಕೆ ಹೊಡೆದು ತಳ್ಳಿದೆ, ಆದರೂ ಅದಕ್ಕೆ ನೆಕ್ಕುವ ಖುಷಿ. ನನ್ನ ಮುಖದ ಬೆವರು ಅದಕ್ಕೆ ರುಚಿಯಾಗಿದ್ದಿರ ಬೇಕು. ಅಲ್ಲಿಂದ ಎದ್ದು ಕೆರೆಯ ಬಳಿ ಹೋಗಿ ಮುಖ ತೊಳೆದು ಕೈಯಲ್ಲಿ ಒರೆಸಿಕೊಂಡು ಮುಂದಿನ ದಾರಿ ಯಾವುದಯ್ಯಾ ಎಂದುಕೊಳ್ಳುತ್ತಾ ಕೆರೆಯ ಏರಿಗೆ ಬಂದು ಖಾಲಿಯಿದ್ದ ಪ್ರೇಮಿಗಳ ಖುರ್ಚಿಯೊಂದರಲ್ಲಿ ಕುಳಿತು ಸಿಗರೇಟಿಗೆ ಬೆಂಕಿ ಕಡ್ಡಿ ಗೀರಿದೆ.

ಕೆರೆ ಏರಿಮೇಲೆ ಬೀಸುತ್ತಿದ್ದ ಗಾಳಿಯ ರಭಸಕ್ಕೆ ಮೊದಲ ಕಡ್ಡಿ ಆರಿ ಹೋಯಿತು, ಜೇಬನ್ನು ತಡಕಾಡಿದಾಗ ಇನ್ನೊಂದು ಮೇಣ ಸವರಿದ್ದ ಕಡ್ಡಿ ಉಳಿದು ಕೊಂಡಿತ್ತು, ಅದನ್ನು ಗೀರಿ ಕೈಯಲ್ಲಿ ಗಾಳಿಗೆ ಮರೆಮಾಚಿ ಸಿಗರೇಟನ್ನು ಹೊತ್ತಿಸಿ ಏನೋ ಸಾಧಿಸಿದವನಂತೆ ನಿಟ್ಟುಸಿರಿನ ಹೊಗೆಬಿಟ್ಟೆ. ಕೆರೆಯ ಏರಿಯ ಮೇಲೆ ತುಂಬಾ ಗಾಳಿ ಇರುವುದರಿಂದ ಸಿಗರೇಟು ಹಚ್ಚುವುದು ಸ್ವಲ್ಪ ಕಷ್ಟ. ಸಾಮಾನ್ಯವಾಗಿ ನಾನು ಜೇಬಿನಲ್ಲಿ ಬೆಂಕಿ ಪೊಟ್ಟಣ ಇಟ್ಟು ಕೊಂಡಿರುವುದಿಲ್ಲ, ಅದರ ಬದಲು ಸಿಗರೇಟು ಕೊಳ್ಳುವಾಗ ನಾಲ್ಕೈದು ಕಡ್ಡಿಗಳನ್ನು ಪುಕ್ಕಟೆಯಾಗಿ ಕೇಳಿ ಕೊಂಡು, ಅವುಗಳ ಜೊತೆ ಅಂಗಡಿಯವನ ಬೆಂಕಿ ಪೊಟ್ಟಣದ ಗೀರುವ ಬದಿಯಲ್ಲಿನ ಒಂದು ಚೂರನ್ನು ಹರಿದು ಕೊಂಡು ಇಟ್ಟುಕೊಂಡಿರುತ್ತೇನೆ. -ಮುಂದಿನ ಪುಟಕ್ಕೆ...

ಕೊಳ್ಳುವ ಎರಡೋ, ಮೂರೋ ಸಿಗರೇಟುಗಳಿಗೇಕೆ ಇಡೀ ಪೊಟ್ಟಣಕ್ಕೆ ಹಣ ಕೊಡ ಬೇಕೆಂಬ ಹುಂಬತನ ಅಷ್ಟೇ!. ಅದೇ ವೇಳೆಗೆ ನನ್ನ ಬಳಿ ಬಂದ ಹುಡುಗನೊಬ್ಬ ಸಿಗರೇಟನ್ನು ತೋರಿಸಿ ಬೆಂಕಿ ಪೊಟ್ಟಣ ಕೇಳಿದ. ನಾನು ಇಲ್ಲವೆಂದು ಕೈಯಾಡಿಸಿದಾಗ, ನನ್ನ ಕೈಯಲ್ಲಿದ್ದ ಸಿಗರೇಟನ್ನು ಕೇಳಿ, ಹಾಗೇ ಒಂದು ದಮ್ಮು ಎಳೆದು ಕೊಡಿ, ಸಿಗರೇಟು ಹತ್ತಿಸುವುದಕ್ಕೆ ಸುಲಭವಾಗುತ್ತದೆಂದ. ದಮ್ಮು ಎಳೆದು ಕೊಟ್ಟೆ, ತನ್ನ ಸಿಗರೇಟನ್ನು ನನ್ನ ಸಿಗರೇಟಿನ ಬೆಂಕಿಗೆ ತಾಗಿಸಿ ಪುಕ ಪುಕನೆ ಜೋರಾಗಿ ದಮ್ಮು ಎಳೆದು ಹೊತ್ತಿಸಿಕೊಂಡು, ಸಿಗರೇಟನ್ನು ಮರಳಿಸಿ ಥ್ಯಾಂಕ್ಯೂ ಹೇಳಿ ಅಕಾಸದ ಕಡೆ ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತಾ ಮಂದೆ ನಡೆಯುತ್ತಾ ಹೋದ. ಬೀಡಿಯಿಂದ ಬೀಡಿಗೆ, ಸಿಗರೇಟಿನಿಂದ ಸಿಗರೇಟಿಗೆ ಬೆಂಕಿ ಹಚ್ಚುವಾಗ ಸೇದುತ್ತಿದ್ದವ ಒಂದು ದಮ್ಮು ಎಳೆದು ಕೊಡುವುದು ವಾಡಿಕೆ, ಇದರಿಂದ ಮತ್ತೊಂದಕ್ಕೆ ಬೆಂಕಿ ಸುಲಭವಾಗಿ ಹತ್ತಿಕೊಳ್ಳುತ್ತದೆ, ಇಲ್ಲವೆಂದರೆ ಕೊಟ್ಟವನ ಸಿಗರೇಟು, ಬೀಡಿಗಳ ಬೆಂಕಿಯೇ ಆರಿ ಹೋಗಬಹುದು.

ಶ್ಯಾನೆ ಹೊತ್ತಾಗಿದ್ದರಿಂದ ಕೆರೆ ಏರಿಯಲ್ಲಿರುವ ತಬ್ಬಿಕೊಂಡು ಕೂರುವವರ ಕುರ್ಚಿಗಳು ಖಾಲಿ ಹೊಡೆಯುತ್ತಿದ್ದವು. ನಾನು ಇಡೀ ಕೆರೆಯ ಸೌಂದರ್ಯವನ್ನು ಅನುಭವಿಸಲೆಂದೇ ಕೆರೆ ಏರಿಯ ಮದ್ಯ ಭಾಗದ ಕುರ್ಚಿಗೆ ಬಂದು ಕುಳಿತೆ. ಬಿಸಿಲೇರುತ್ತಿದ್ದಂತೆ ಪಕ್ಷಿಗಳ ಮೀನಿನ ಬೇಟೆ ಬೆಳಿಗ್ಗೆಗಿಂತ ಕಡಿಮೆ ಇರುತ್ತದೆ. ಆದರೆ ಅಲ್ಲೊಂದು ಇಲ್ಲೊಂದು ಹದ್ದುಗಳು ಬಂದು ಮೀನು ಹಿಡಿದು ಹಾರಿ ಹೋಗುತ್ತಿರುತ್ತವೆ ಅಷ್ಟೆ. ಅಲ್ಲೇ ಕೆರೆಯ ಬದಿಯ ಪೊದೆಗಳಲ್ಲಿ, ಕೆರೆಯೊಳಗಡೆ ಬೆಳೆದ ಕಳೆಗಳಲ್ಲಿ ಗೂಡು ಕಟ್ಟಿಕೊಂಡ ನೀರು ಕೋಳಿಗಳು ಗುಂಪು-ಗುಂಪಾಗಿ ಕೆರೆಯ ಒಂದು ಬದಿಯಿಂದ ಇನೊಂದು ಬದಿಗೆ ಈಜುತ್ತಾ ಸಾಗುತ್ತಿರುತ್ತವೆ. ಅವುಗಳನ್ನು ನೋಡುವುದೇ ಒಂದು ಖುಷಿ. ಬೆಳ್ಳಕ್ಕಿಗಳು, ಮಿಂಚುಳ್ಳಿಗಳು ಮತ್ತು ಇತರೆ ಮೀನು ತಿನ್ನುವ ಪಕ್ಷಿಗಳು ಹಾರುತ್ತಾ ಮುಳುಗುತ್ತಾ ಸಿಕ್ಕ ಸಿಕ್ಕ ಮೀನುಗಳನ್ನು ಗುಳುಂ ಮಾಡುತ್ತಿರುತ್ತವೆ. ಕೆರೆ ನೋಡುವುದಕ್ಕೆ ಪ್ರಶಾಂತವಾಗಿದ್ದರೂ ಜೋರಾಗಿ ಗಾಳಿ ಬೀಸಿದಾಗ ಅಲೆಗಳು ದಡಕ್ಕೆ ಅಪ್ಪಳಿಸಿ ಶಬ್ಧ ಮಾಡುತ್ತಿರುತ್ತವೆ.

ಸಾವಿನ ಕದ ತಟ್ಟಿದಾಗ!

ಹಿಂದೊಮ್ಮೆ ಇದೆ ಕೆರೆಯಲ್ಲಿ ಮೀನು ಹಿಡಿಯಲೆಂದು ದಡದ ಕಲ್ಲುಗಳ ಮೇಲೆ ಕುಳಿತು ಗಾಳ ಹಾಕಿದ್ದೆ. ಆ ಗಾಳವನ್ನು ಕಚ್ಚಿದ ಮೀನು ನೀರೊಳಗಿನ ದಡದ ಕಲ್ಲಿನ ಸಂದಿಯೊಳಗೆ ಸಿಕ್ಕಿಕೊಂಡಿತ್ತು. ಗಾಳಕ್ಕೆ ಕಟ್ಟಿದ್ದ ದಾರವನ್ನು ಅಲುಗಾಡಿಸಿ ಎಳೆಯಲು ಪ್ರಯತ್ನಿಸಿದರೂ ಗಾಳ ಸಂದಿಯಿಂದ ಹೊರಬರಲಿಲ್ಲ. ಗಾಳವನ್ನು ಬಿಡಿಸಲೆಂದು ಹಾಗೇ ಮೆಲ್ಲಗೆ ದಡದ ಕಲ್ಲುಗಳ ಮೇಲೆ ಹೆಜ್ಜೆ ಹಾಕುತ್ತಾ ಕೆರೆಯೊಳಗೆ ಇಳಿಯ ತೊಡಗಿದೆ. ನೀರಿನ ಒಳಗೆ ಹೋಗುತ್ತಿದ್ದಂತೆ ಕಲ್ಲಿಗೆ ಅಂಟಿಕೊಂಡಿದ್ದ ಪಾಚಿಯ ಮೇಲೆ ಕಾಲಿಟ್ಟಾಗ ಕಾಲು ಜಾರಿ ನೀರಿನೊಳಗೆ ಬಿದ್ದು ಬಿಟ್ಟೆ. ನನಗೆ ಸರಿಯಾಗಿ ಈಜುವುದಕ್ಕೂ ಗೊತ್ತಿರಲಿಲ್ಲ, ಮುಳುಗುತ್ತಿದ್ದ ನನಗೆ ಆ ತಕ್ಷಣಕ್ಕೆ ನನಗೆ ಹೊಳೆದದ್ದು -ಮುಂದಿನ ಪುಟಕ್ಕೆ...

lake image

ಜೋರಾಗಿ ಉಸಿರೆಳೆದು ಕೊಂಡು ಬಾಯಿ ಮತ್ತು ಮೂಗನ್ನು ಕೈಯಿಂದ ಗಟ್ಟಿಯಾಗಿ ಮುಚ್ಚಿಕೊಂಡರೆ ದೇಹ ನೀರಿನಿಂದ ಮೇಲಕ್ಕೆ ಬರುತ್ತದೆಂಬ ಥಿಯರಿ! ಹಾಗೇ ಮಾಡಿ ನೀರಿನ ಮೇಲಕ್ಕೆ ಬಂದು ಕಣ್ಣು ಬಿಟ್ಟು ನೋಡಿದರೆ ದಡದ ನೀರಿನ ಅಂಚಿನಿಂದ ಹತ್ತು ಅಡಿ ದೂರಲ್ಲಿದ್ದೆ. ಈಜು ಬಾರದ ನನಗೆ ಸಾವು ಒಮ್ಮೆಗೇ ಕಣ್ಮುಂದೆ ಬಂದು ನಿಂತಂತಾಯಿತು. ಆದರೂ ನನ್ನ ಬಡಜೀವವನ್ನು ಬದುಕಿಸಲು ಮತ್ತೆ ಮೂಗು ಬಾಯಿ ಮುಚ್ಚಿ ನೀರಿನಲ್ಲಿ ಮುಳುಗಿ ಕೊಂಡೇ ಒಂದು ಕೈಯಲ್ಲಿ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡದ ಕಡೆ ಸಾಗಿದೆ. ನನ್ನ ತಲೆಯನ್ನು ನೀರಿನಲ್ಲಿ ಮುಳುಗಿಸಿಕೊಂಡಾಗ ಕಾಲುಗಳು ತಲೆಗೆ ಸಮಾನಾಂತರವಾಗಿ ಬರುತ್ತಿದ್ದವು. ಹಾಗೂ ಹೀಗೂ ನೀರನ್ನು ಹಿಂದೆ ತಳ್ಳುತ್ತಿದ್ದ ನನ್ನ ಬಲಗೈ ದಡಕ್ಕೆ ಬಡಿಯಿತು. ಕತ್ತೆತ್ತಿ ನೋಡಿದಾಗ ದಡದ ಕಲ್ಲುಗಳು ಕಂಡವು. ಜೀವ ಮರಳಿ ಬಂದಂತಾಯಿತು. ಹೇಗೋ ಕಲ್ಲಿನ ಅಂಚನ್ನು ಬೆರಳುಗಳಿಂದ ಗಟ್ಟಿಯಾಗಿ ಹಿಡಿದು ಕೊಂಡು ಸುದಾರಿಸಿಕೊಳ್ಳ ತೊಡಗಿದೆ. ಅಲ್ಪ ಸ್ವಲ್ಪ ಕೆರೆಯ ನೀರು ಮೂಗು ಮತ್ತು ಬಾಯಿಯ ಮೂಲಕ ನನ್ನ ಹೊಟ್ಟೆ ಸೇರಿತ್ತು. ಈ ನೀರು ಕುಡಿಯಲು ಯೋಗ್ಯವಾದುದಲ್ಲ. ಈ ಕಡೆಯಿಂದ ನೋಡಿದರೆ ತಿಳಿಯಾಗಿ ಕಾಣುವ ನೀರು, ಪಡುವಾರ ಹಳ್ಳಿ ಕಡೆಯಲ್ಲಿ ಕೊಳೆತು ನಾರುತ್ತಿರುತ್ತದೆ.

ಆ ಕಡೆಯಿಂದ ಬರುವ ಕಕ್ಕಸ್ಸು ನೀರಿನ ಡ್ರೈನೇಜನ್ನು ಈ ಕೆರೆಗೆ ಬಿಟ್ಟಿರುವುದರಿಂದ ಕೆರೆಯ ನೀರು ಆ ಭಾಗದಲ್ಲಿ ಕಲುಷಿತಗೊಳ್ಳುತ್ತಿರುತ್ತದೆ. ಇಂತಹಾ ಸ್ಥಿತಿಯಲ್ಲಿ ಗಲೀಜು ನೀರು ಹೊಟ್ಟೆ ಸೇರಿದ್ದರ ಬಗ್ಗೆ ಯೋಚಿಸುತ್ತಾ ಕುಳಿತರೆ ಆಗುವುದಿಲ್ಲ, ಬದುಕುಳಿದದ್ದೇ ಹೆಚ್ಚೆಂದು ಕೊಂಡು ನಿದಾನಕ್ಕೆ ದಡದ ಏರಿಯ ಮೇಲೆ ಬಂದು ಕುಳಿತು ಕೊಂಡೆ. ಅಕಸ್ಮಾತ್ ಅಂದು ನಾನು ಈಜಿ ದಡ ಸೇರಲು ಸಾಧ್ಯವಾಗದೇ ಇದ್ದಿದ್ದರೆ ನನ್ನ ದೇಹವೂ ಅನೇಕ ದೇಹಗಳಂತೆ ಸಂಜೆಗೋ ಇಲ್ಲಾ ಮರುದಿನಕ್ಕೋ ನೀರಿನ ಮೇಲೆ ತೇಲುತ್ತಾ ಬಿದ್ದಿರುತ್ತಿತ್ತೇನೋ, ಇಲ್ಲಾ ಕೆರೆಯ ತಳದ ಹೂಳು ಮಣ್ಣಿನೊಳಗೆ ಹೂತು ಹೋಗಿರುತ್ತಿದ್ದೇನೋ… ಆ ಸಮಯದಲ್ಲಿ ಕೆರೆ ಏರಿಯ ಮೇಲೆ ಯಾರೂ ನಡೆದು ಕೊಂಡು ಹೋಗದೇ ಇದ್ದದ್ದು ದೊಡ್ಡ ವಿಪರ್ಯಾಸವೇ! ಒಟ್ಟಿನಲ್ಲಿ ಅಂದು ನಾನು ಸಾವನ್ನು ಗೆದ್ದು ಬಂದಿದ್ದೇ ದೊಡ್ಡ ಸಾಹಸವಾಗಿತ್ತು. ನನ್ನ ಗಾಳಕ್ಕೆ ಸಿಕ್ಕಿದ್ದ ಮೀನು ಕಲ್ಲಿನ ಸಂದಿಯೊಳಗೆ ಸೇರಿಕೊಂಡು ಗಾಳದ ದಾರವನ್ನು ಎಳೆಯುತ್ತಾ ಗಟ್ಟಿಗೊಳಿಸುತ್ತಿತ್ತು. ಅದರ ಸಹವಾಸವೇ ಬೇಡ ಎಂದು ಅಲ್ಲಿಂದ ಮುಂದೆ ಬಂದೆ. ಆಗ ಆಗದಿದ್ದ ಹೆದರಿಕೆ ಈಗ ತಲೆಯೊಳಗೆ ಬಂದು ಭಯದ ಭೀತಿ ಮೂಡಿಸಿತ್ತು. -ಮುಂದಿನ ಪುಟಕ್ಕೆ...

ಕುಕ್ಕರಳ್ಳಿ ಕೆರೆಯಲ್ಲಿ ನಾನೂ ಈ ಹಿಂದೆ ಒಂದೆರಡು ಶವಗಳು ತೇಲುತ್ತಿದ್ದುದ್ದನ್ನು ಕಣ್ಣಾರೆ ಕಂಡಿದ್ದೇನೆ. ಈ ಕೆರೆ ಬದುಕು ಅಂತ್ಯಗೊಳಿಸಲು ಸಾವನ್ನು ಬಯಸಿ ಬಂದ ಅನೇಕರನ್ನು ತನ್ನ ತೆಕ್ಕೆಗೆ ತೆಗೆದು ಕೊಂಡಿದೆ. ಈ ಕುಕ್ಕರಹಳ್ಳಿಯ ಕೆರೆ ಬಹಳಷ್ಟು ಬರಹಗಾರರಿಗೆ, ಪತ್ರಕರ್ತರಿಗೆ, ಪ್ರೇಮಿಗಳಿಗೆ ಸ್ಪೂರ್ತಿಯಾಗಿದೆ. ಅದು ಕುವೆಂಪುವವರಿಂದ ಹಿಡಿದು, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್, ಕೆ. ರಾಮ್ ದಾಸ್, ರಾಮಲಿಂಗಮ್, ರಾಜಶೇಖರ ಕೋಟಿ, ದೇವನೂರ ಮಹಾದೇವ, ಯು. ಆರ್. ಅನಂತಮೂರ್ತಿ ಯಾದಿಗಾಗಿ ನನ್ನಂತಹಾ ಅನೇಕರನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡಿದೆ. ಇಲ್ಲಿ ತೇಜಸ್ವಿ, ಮತ್ತು ಪಿ. ಲಂಕೇಶ್ ಮೈಸೂರಿಗೆ ಬಂದಾಗ ಕೆ. ರಾಮ್ ದಾಸ್ ಮತ್ತು ರಾಮಲಿಂಗಮ್ ಜೊತೆ ಸೇರಿ ಗಂಟೆಗಟ್ಟಲೇ ಕೆರೆಯ ಒಂದು ಮೂಲೆಯಲ್ಲಿ ಕುಳಿತು ಮೀನು ಹಿಡಿಯುತ್ತಾ ಹರಟೆ ಹೊಡೆಯುತ್ತಿದ್ದರು, ಹರಟೆ ಮುಗಿದ ಮೇಲೆ ಹಿಡಿದ ಮೀನುಗಳನ್ನು ಕುಕ್ಕರಹಳ್ಳಿಯ ಹುಡುಗರಿಗೆ ಕೊಟ್ಟು ಹೋಗುತ್ತಿದ್ದರು. ಇವರಿಗೆ ಮೀನು ಹಿಡಿಯುವುದು ಒಂದು ಹವ್ಯಾಸ, ಅದರ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಮತ್ತು ರಾಜಕೀಯ ಚರ್ಚೆಗಳೂ ಇಲ್ಲಿ ನಡೆಯುತ್ತಿದ್ದವು.

ಈ ಕೆರೆಯಲ್ಲಿ ನಾನೂ ಅನೇಕ ಬಾರಿ ಮೀನು ಹಿಡಿದಿದ್ದೇನೆ. ಗಾಳ ಹಾಕಿ ಹಿಡಿದದ್ದು ಬಹಳ ಕಡಿಮೆ, ಆದರೆ ಕುಕ್ಕರಹಳ್ಳಿ ಹುಡುಗರ ಜೊತೆ ಸೇರಿ ರಾತ್ರಿ ಗಂಗೋತ್ರಿಯ ಬಯಲು ರಂಗ ಮಂದಿರದ ಕಡೆಗಿರುವ ಕೆರೆಯ ಅಂಚಿಗೆ ಹೋಗಿ ಟಾರ್ಚ್ ಲೈಟ್ ಬಿಟ್ಟು ಕಂಡ ಕಂಡ ಮೀನುಗಳ ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸುತ್ತಿದ್ದೆವು. ಒಂದೊಂದು ಮೀನೂ ಒಂದರಿಂದ ಎರಡು ಕೇಜಿಯವರೆಗೆ ಇರುತ್ತಿದ್ದವು. ಒಂದೆರಡು ಆಗಲೇ ಸತ್ತರೆ, ಬೆಳಿಗ್ಗೆ ಹೋಗಿ ನೋಡಿದರೆ ಇನ್ನು ಕೆಲವು ಸತ್ತು ತೇಲಾಡುತ್ತಿರುತ್ತಿದ್ದವು. ತಡ ರಾತ್ರಿ ಸಿಕ್ಕಿದ ಮೀನುಗಳನ್ನು ಹುಡುಗರ ಮನೆಗಳಲ್ಲಿ ತೆಗೆದುಕೊಂಡು ಹೋಗಿ ಸರಿಮಾಡಿ ಅದಕ್ಕೆ ಉಪ್ಪು ನೀರು ಹಾಕಿದ ಪಾತ್ರೆಯಲ್ಲಿ ಇಟ್ಟಿರುತ್ತಿದ್ದೆವು. ಬೆಳಕಾಗುವ ಮುನ್ನ ಕೆರೆಗೆ ಹೋಗಿ ಸತ್ತು ತೇಲಾಡುತ್ತಿದ್ದ ಮೀನುಗಳನ್ನು ತಂದು ಸರಿಮಾಡಿ ಸಾರು ಮಾಡಿ ತಿನ್ನುತ್ತಿದ್ದೆವು. ಉಳಿದವನ್ನು ಅಲ್ಲಿ ವಾಯು ವಿಹಾರಿಗಳಲ್ಲಿ ಮೀನು ತಿನ್ನುವವರು ಅವುಗಳನ್ನು ಹೊತ್ತೊಯ್ಯುತ್ತಿದ್ದರು. ಈ ಹುಡುಗರ ಮನೆಗಳಲ್ಲಿ ಅನೇಕರಿಗೆ ಮೀನು ಸಾರು ಮಾಡಲು ಬರುತ್ತಿರಲಿಲ್ಲ. ಸರಿಮಾಡಿದ ಮೀನಿಗೆ ಮಸಾಲೆಯೊಂದಿಗೆ ಕುಕ್ಕರ್ ಗೆ ಹಾಕಿ ಮಾಂಸ ಬೇಯಿಸಿದ ಹಾಗೆ ಬೇಯಿಸಿ ಬಿಡುತ್ತಿದ್ದರು. ಅದು ನೋಡುವುದಕ್ಕೆ ಒಳ್ಳೆ ಮೀನಿನ ಪಾಯಸದಂತಿರುತ್ತಿತ್ತು. ಅದರಿಂದ ಮುಳ್ಳುಗಳನ್ನು ಹೆಕ್ಕೀ ಹೆಕ್ಕೀ ತೆಗೆದು, ಮುದ್ದೆಯನ್ನು ಪಾಯಸದಂತಿದ್ದ ಮೀನು ಸಾರಿಗೆ ಹೊರಳಾಡಿಸಿ ತಿನ್ನ ಬೇಕಿತ್ತು. ನನಗೆ ಸರಿಯಾಗಿ ಮುದ್ದೆ ತಿನ್ನಲು ಬರುತ್ತಿರಲಿಲ್ಲ. ಆದರೆ ಈ ಹುಡುಗರು ಮುದ್ದೆಯಿಂದ ಒಂದು ತುಂಡನ್ನು ಹೆಬ್ಬೆರಳು ಮತ್ತು ತೋರು ಬೆರಳುಗಳಿಂದ ಮುರಿದು ಉಳಿದ ಮೂರೂ ಬೆರಳುಗಳಿಂದ ತಟ್ಟೆಯಲ್ಲಿದ್ದ ಸಾರನ್ನು ಅಂಗೈಗೆ ತಾಗಿಸಿ, ನಂತರ ಮುರಿದ ಮುದ್ದೆಯನ್ನು ತಟ್ಟೆಯಲ್ಲಿದ್ದ ಸಾರಿನಲ್ಲಿ ಉರುಳಾಡಿಸಿ ಬಾಯಿಗಿಟ್ಟು ಗಬಕ್ಕಂತ ನುಂಗುತ್ತಿದ್ದರು. ನಾನು ಎಷ್ಟೇ ಪ್ರಯತ್ನ ಪಟ್ಟರೂ ಅದು ಸರಿಯಾಗಿ ಗಂಟಲೊಳಗೆ ಹೋಗುತ್ತಿರಲಿಲ್ಲ. ಮುದ್ದೆಯ ತುಂಡು ಹಲ್ಲುಗಳಿಗೆ ಅಂಟಿಕೊಂಡು ಅವಾಂತರವಾಗುತ್ತಿತ್ತು. ಅದನ್ನು ನೋಡಿ ಈ ಹುಡುಗರಿಗೆ ನಗು, ನನಗೋ ಧರ್ಮ ಸಂಕಟ! ಇವತ್ತಿಗೂ ನನಗೆ ಮುದ್ದೆ ಉಣ್ಣಲು ಸರಿಯಾಗಿ ಬರುವುದಿಲ್ಲ. -ಮುಂದಿನ ಪುಟಕ್ಕೆ...

ಅದಕ್ಕಿತ ಚೆನ್ನಾಗಿ ಛಾಪ್ ಸ್ಟಿಕ್ ನಲ್ಲಿ ನ್ಯೂಡೆಲ್ಸ್ ತಿನ್ನಬಲ್ಲೆ! ಅನೇಕ ಬಾರಿ ಆ ಹುಡುಗರಿಗೆ ಮೀನು ಸಾರು ಹೇಗೆ ಮಾಡಬೇಕೆಂಬುದನ್ನು ಹೇಳಿಕೊಟ್ಟಿದ್ದೆ. ಮೀನನ್ನು ಸ್ವಚ್ಛಗೊಳಿಸಿ, ಬೇಕಾದ ಗಾತ್ರಕ್ಕೆ ಕತ್ತರಿಸಿಕೊಂಡು ಪಾತ್ರೆಯೆಯಲ್ಲಿ ಹಾಕಿ, ಅದಕ್ಕೆ ಉಪ್ಪು, ಹುಳಿ, ಅರಿಶಿನ ಪುಡಿ, ಖಾರ ಮಸಾಲೆ ಬೆರೆಸಿ ಒಂದು ಘಂಟೆ ಇಟ್ಟರೆ ಮಸಾಲೆ ಮೀನಿಗೆ ಚೆನ್ನಾಗಿ ಹಿಡಿದುಕೊಳ್ಳುತ್ತದೆ. ನಂತರ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಟೊಮೇಟೊವನ್ನು ರುಬ್ಬಿ ಕೊಂಡು, ಮತ್ತೊಂದು ಪಾತ್ರೆಯಲ್ಲಿ ಅದಕ್ಕೆ ಬೇಕಷ್ಟು ಎಣ್ಣೆ ಹಾಕಿ ಕಾಯಿಸಿ, ಅದಕ್ಕೆ ಸಾಸಿವೆ ಹಾಕಿ, ಅದು ಪಟ ಪಟನೆ ಹುಡಿದ ಮೇಲೆ ಕರಿಬೇವಿನ ಸೊಪ್ಪು ಮತ್ತು ಸ್ವಲ್ಪ ಜೀರಿಗೆ ಹಾಕಿ ತಿರುಗಿಸಿ, ರುಬ್ಬಿದ ಮಸಾಲೆಯನ್ನು ಅದಕ್ಕೆ ಸುರಿದು, ಮೀನಿಗೆ ತಕ್ಕಂತೆ ನೀರು ಹಾಕಿ ಕುದಿಯುತ್ತಿರುವಾಗ ಮಸಾಲೆ ಬೆರೆಸಿಟ್ಟಿದ್ದ ಮೀನನ್ನು ಹಾಕಿ ಐದು ನಿಮಿಷ ಜೋರು ಉರಿಯಲ್ಲಿ ಬೇಯಿಸಿದರೆ, ಮೀನು ಹೆಚ್ಚು ಕಡಿಮೆ ಬೆಂದಿರುತ್ತದೆ. ನಂತರ ರುಚಿ ನೋಡಿ, ಯಾವ ಯಾವ ಪದಾರ್ಥಗಳು ಕಡಿಮೆಯಾಗಿವೆಯೆಂದು ತಿಳಿದು ಕೊಂಡು ಅದಕ್ಕೆ ತಕ್ಕಂತೆ ಹಾಕಿ ಇನ್ನೈದು ನಿಮಿಷ ಮಂದ ಉರಿಯಲ್ಲಿ ಕುದಿಯಲು ಬಿಟ್ಟು ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಹಾಕಿ, ಬೆಂಕಿ ಉರಿಯನ್ನು ಆರಿಸಿ ಸಾರಿನ ಪಾತ್ರೆಯನ್ನು ಅರ್ಧ ಘಂಟೆ ಮುಚ್ಚಿಟ್ಟರೆ ಮೀನು ಸಾರು ರೆಡಿಯಾಗುತ್ತದೆ. ಮೀನು ಸಾರಿಗೆ ಹುಳಿ ಸ್ವಲ್ಪ ಹೆಚ್ಚು ಇದ್ದರೆ ರುಚಿ ಚೆನ್ನಾಗಿರುತ್ತದೆ!

ಅಡುಗೆಯೆಂಬುದು ಬ್ರಹ್ಮಾಂಡ ವಿದ್ಯೆಯೇನಲ್ಲ! ಮಾಡಲಾರದ ಸೋಮಾರಿತನಕ್ಕೋ, ಇಲ್ಲಾ ಅಪ್ಪ ಅಮ್ಮಂದಿರು ಮಕ್ಕಳಿಗೆ ಸರಿಯಾಗಿ ಹೇಳಿ ಕೊಡದೆ ಅಡುಗೆ ಮಾಡಲು ಬರದೇ ಹೋಗ ಬಹುದು, ಇನ್ನು ಕೆಲವು ಮನೆಗಳಲ್ಲಿ ಅಮ್ಮಂದಿರಿಗೆ ಗಂಡು ಮಕ್ಕಳೆಂದರೆ ಬಲು ಮುದ್ದು. ಅವನು ಗಂಡುಡುಗ, ಹೇಗೆ ಅಡುಗೆ ಮಾಡುತ್ತಾನೆ ಅನ್ನುತ್ತಾ ಅವರ ಸೇವೆ ಮಾಡುತ್ತಿರುತ್ತಾರೆ. ಇಂತಹಾ ಅಮ್ಮಂದಿರಿಗೂ, ಗಂಡುಡುಗರಿಗೂ ಕುಂಡೆ ಮೇಲೆ ಎರಡು ಬಾರಿಸ ಬೇಕು. ಅಡುಗೆಯನ್ನೂ ಪ್ರತಿಯೊಬ್ಬರೂ ಚಿಕ್ಕಂದಿನಿಂದ ಕಲಿತರೆ ಮುಂದೆ ಅದರಿಂದ ಎಲ್ಲರಿಗೂ ಅನುಕೂಲವೇ ಹೆಚ್ಚು. -ಮುಂದಿನ ಪುಟಕ್ಕೆ...

ಮುರಿದು ಬಿದ್ದ ಪಿ ಹೆಚ್ ಡಿ ಕನಸು, ರೇಡಿಯೋ ರಿಪೇರಿ ಶುರು

ಇಂತಹಾ ಸಂದರ್ಭದಲ್ಲಿ ನಾನು ಆಗತಾನೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ, ಮುಗಿಸಿ ಮುಂದೇನು ಎಂಬ ಪ್ರಶ್ನೆಯೊಂದಿಗೆ ಬದುಕುತ್ತಿದ್ದ ಸಮಯ. ಎಂ.ಎ. ನಲ್ಲಿ 55% ಅಂಕಕ್ಕೆ ಸ್ವಲ್ಪ ಕಡಿಮೆ ಬಂದಿದ್ದರಿಂದ ಪಿ.ಹೆಚ್.ಡಿ ಮಾಡಬೇಕೆಂಬ ನನ್ನ ಆಸೆ ಆಸೆಯಾಗಿಯೇ ಉಳಿಯಿತು. ನಾನು ಎಂ.ಎ ಮುಗಿಸುವ ಸಮಯಕ್ಕೆ ಕನಿಷ್ಠ 55% ಅಂಕವಿಲ್ಲದೆ ಪಿ.ಹೆಚ್.ಡಿ. ಮಾಡಲು ಸಾಧ್ಯವಿರಲಿಲ್ಲ. ಯಾವುದಾದರೂ ಪುಟುಗೋಸಿ ಕೆಲಸಕ್ಕಾದರೂ ಸೇರಿಕೊಳ್ಳೋಣವೆಂದರೆ ನನ್ನ ವಿದ್ಯಾರ್ಹತೆ ಅತಿಯಾಗಿತ್ತು. ಆಗ ನನ್ನ ಸಹಾಯಕ್ಕೆ ಬರುತ್ತಿದ್ದುದು ನಾನು ನಾನಾಗೆ ಕಲಿಯುತ್ತಿದ್ದ ರೇಡಿಯೋ ರಿಪೇರಿ ಕೆಲಸ. ಆದರೆ ಇದು ಯಾವತ್ತೂ ಕೈ ತುಂಬಾ ಹಣ ನೀಡುತ್ತಿರಲಿಲ್ಲ. ನನಗೆ ಸುಲಭವಾಗಿ ಬರುತ್ತಿದ್ದುದು ಸಣ್ಣ ಸಣ್ಣ ಪಾಕೆಟ್ ರೇಡಿಯೋಗಳ ರಿಪೇರಿ ಕೆಲಸ. ಅದರಲ್ಲಿ ಒಂದು ಅಥವಾ ಎರಡು ಬ್ಯಾಂಡ್ ಗಳು ಮಾತ್ರ ಇರುತ್ತಿದ್ದವು.

ಆಗಿನ್ನೂ ಮೈಸೂರಿನಲ್ಲಿ FM ಬಂದಿರಲಿಲ್ಲಾ. ಭಾರತದಲ್ಲಿ FM ಪ್ರಸಾರವು ಜುಲೈ 23, 1977 ರಂದು ಪ್ರಾರಂಭವಾಗಿತ್ತಾದರೂ ಮೊದಲ ಸೇವೆಯನ್ನು ಮದ್ರಾಸ್‌ನಲ್ಲಿ (ಈಗ ಚೆನ್ನೈ) ಸರ್ಕಾರಿ ಸ್ವಾಮ್ಯದ ಆಲ್ ಇಂಡಿಯಾ ರೇಡಿಯೋ (AIR) ಪ್ರಾರಂಭಿಸಿತು. ಆಗ ಸಾರ್ವಜನಿಕ FM ಸೇವೆಗಳು ಪ್ರಾರಂಭವಾದವು, ಆದರೆ ಬೆಂಗಳೂರಿನಲ್ಲಿರುವ ಮೊದಲ ಖಾಸಗಿ FM ರೇಡಿಯೋ ಕೇಂದ್ರವಾದ ರೇಡಿಯೋ ಸಿಟಿ ಬಹಳ ನಂತರ ಜುಲೈ 3, 2001 ರಂದು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪಾಕೆಟ್ ರೇಡಿಯೊಗಳನ್ನು ಸಾಮಾನ್ಯವಾಗಿ ಸುದ್ಧಿ, ಹಾಡು ಮತ್ತು ಕ್ರಿಕೆಟ್ ಕಾಮೆಂಟರಿ ಕೇಳಲು ಜನ ಹೆಚ್ಚಾಗಿ ಬಳಸುತ್ತಿದ್ದರು ಮತ್ತು ಎಲ್ಲೆಂದರಲ್ಲಿಗೆ ಸುಲಭವಾಗಿ ಕೊಂಡೊಯ್ಯಬಹುದಿತ್ತು.

ಇವುಗಳ ಸರ್ಕ್ಯೂಟ್ ಬೋರ್ಡು ಸರಳವಾಗಿರುತ್ತಿತ್ತು. ಇದನ್ನು 5×3×2 ಗಾತ್ರದ ಸಣ್ಣ ರೇಡಿಯೋ ಬಾಕ್ಸಿನೊಳಗೆ ಎರಡಿಂಚು ಅಗಲ ಮತ್ತು ಮುಕ್ಕಾಲಿಂಚು ಎತ್ತರದ ಸ್ಪೀಕರನೊಂದಿಗೆ ಸೇರಿಸಿ ಹೊರಗಡೆಯಿಂದ ಮೂರ್ನಾಲ್ಕು ಸ್ಕ್ರೂ ಹಾಕಿರುತ್ತಿದ್ದರು, ಇಲ್ಲವೇ ಮುಂಬಾಗದ ಬಾಕ್ಸಿನ ಹಿಂಬಾಗದ ಮುಚ್ಚಳವನ್ನು ಸುಮ್ಮನೆ ಪ್ರೆಸ್ ಮಾಡಿರುತ್ತಿದ್ದರು. ಅದನ್ನು ತೆರೆಯುವಾಗ ಬೆರಳು ಅಥವಾ ಸಣ್ಣ ಸ್ಕ್ರೂವ್ ಡ್ರೈವರ್ ನಿಂದ ಮೀಟಿದರೆ ಓಪನ್ ಆಗುತ್ತಿತ್ತು. ಇವುಗಳು ಸಾಮಾನ್ಯವಾಗಿ ಎರಡು ಪೆನ್ ಟಾರ್ಚ್ ಬ್ಯಾಟರಿಗಳಿಂದ ಕೆಲಸ ಮಾಡುತ್ತಿದ್ದವು. ಕೆಟ್ಟು ಹೋದ ಕೆಲವು ರೇಡಿಯೋಗಳಲ್ಲಿ ಕೆಳಗೆ ಬಿದ್ದು ಅವುಗಳ ಕ್ಯಾಬಿನೆಟ್ ಬಿರುಕು ಬಿಟ್ಟು, ಸ್ಕ್ರೂ ಹಾಕುವ ಸಣ್ಣ ಪಿಲ್ಲರ್ ಗಳು ತುಂಡಾಗಿರುತ್ತಿದ್ದವು, ಕೆಲವು ಸ್ಪೀಕರ್ ವಯರ್ರು ಅಥವಾ ಕಾಯಿಲ್ ತುಂಡಾಗಿರುತ್ತಿದ್ದವು, ಇನ್ನೂ ಕೆಲವು ರೇಡಿಯೋಗಳಲ್ಲಿ ಸ್ಪೀಕರ್ ಪೇಪರನ್ನು ಜಿರಳೆಗಳು ತಿಂದು ತೂತಾಗಿರುತ್ತಿದ್ದವು. ಇದರಿಂದ ರೇಡಿಯೋ ಧ್ವನಿ ಬರುವಾಗ ಅದರ ಜೊತೆ ಘರ್ ಘರ್ ಎಂಬ ಶಬ್ದ ಬರುತ್ತಿತ್ತು. -ಮುಂದಿನ ಪುಟಕ್ಕೆ...

ಈ ಹಿಂದೆ ನಾನು ಹೈಸ್ಕೂಲ್ ಓದುತ್ತಿದ್ದಾಗ ನಮ್ಮ ಮನೆಗೊಂದು ರೇಡಿಯೋ ತರಬೇಕೆಂದು ಮನಸ್ಸು ಮಾಡಿದರು. ನಮ್ಮ ಅಣ್ಣ ಮತ್ತು ದೂರದೂರಿನಲ್ಲಿ ವಾಸಿಸುತ್ತಿದ್ದ ಹಿರಿಯಣ್ಣ ನಮ್ಮಪ್ಪನನ್ನು ಒಪ್ಪಿಸಿ, ಇಬ್ಬರೂ ಮೈಸೂರಿಗೆ ಹೋಗಿ ಕೆ ಆರ್ ಸರ್ಕಲ್ ಬಳಿ ಇದ್ದ ರೇಡಿಯೋ ಹೌಸ್ ನಿಂದ ಎರಡು ಬ್ಯಾಂಡ್ ಗಳುಳ್ಳ {MW & SW} ಫಿಲಿಪ್ಸ್ ರೇಡಿಯೋವನ್ನು 250 ರೂಪಾಯಿ ಕೊಟ್ಟು ತೆಗೆದುಕೊಂಡು ಬಂದಿದ್ದರು. ಅವರು ಮೈಸೂರಿಗೆ ಹೋಗಿ ಬರಲು 32 ರೂಪಾಯಿ ಬಸ್ ಚಾರ್ಜ್ ಮತ್ತು ಊಟದ ಖರ್ಚು ಎಲ್ಲಾ ಸೇರಿ ಒಟ್ಟು 298 ರೂಪಾಯಿ ಖರ್ಚಾಗಿತ್ತು. ಆಗೆಲ್ಲಾ ವರ್ಷಕ್ಕೆ ಇಂತಿಷ್ಟು ಎಂದು ಪೋಸ್ಟ್ ಆಫಿಸಿನಲ್ಲಿ ಹಣ ಕೊಟ್ಟು ರೇಡಿಯೋ ಲೈಸೆನ್ಸ್ ಮಾಡಿಸ ಬೇಕಿತ್ತು. ಸೋಮವಾರಪೇಟೆಯಲ್ಲಿ ಅದನ್ನೂ ಮಾಡಿಸಿದ್ದಾಯಿತು. ಆಗ ನಮ್ಮೂರಲ್ಲಿ ಕೆಲವೇ ಮನೆಗಳಲ್ಲಿ ಟ್ರಾನ್ಸಿಸ್ಟರ್ ಬಳಸಿ ಮಾಡಿದ ರೇಡಿಯೋಗಳಿದ್ದವು. ಇದಕ್ಕೆ ಮೊದಲು ಒಂದಿಬ್ಬರ ಮನೆಗಳಲ್ಲಿ ಸಣ್ಣ ಸಣ್ಣ ಬಲ್ಬ್ (valve) ಬಳಸಿ ಮಾಡಿದ ರೇಡಿಯೋಗಳಿದ್ದವು. ನಮ್ಮ ಮನೆಗೆ ರೇಡಿಯೋ ಬಂದಾಗ ಊರಲ್ಲಿ ಅದೊಂದು ಸುದ್ದಿಯಾಗಿತ್ತು. ಅದನ್ನು ನೋಡಲು ಒಂದಷ್ಟು ಜನ ನಮ್ಮ ಮನೆಗೂ ಬಂದು ಹೋಗಿದ್ದರು.

ಈ ನಡುವೆ ಹೈಸ್ಕೂಲಿನಲ್ಲಿ ಓದುತ್ತಿದ್ದ ನನ್ನ ತಮ್ಮ ನ್ಯೂಸ್ ಪೇಪರ್ ನಲ್ಲಿ ಬಂದಿದ್ದ ಜಾಹಿರಾತಿನಂತೆ ಅಲ್ಲಿ ತೋರಿಸಿದ ಸಂಖ್ಯೆಗಳನ್ನು ಯಾವ ಕಡೆಯಿಂದ ಕೂಡಿಸಿ ಒಂದೇ ತರದ ಉತ್ತರ ಬಂದರೆ ಅದನ್ನು ಡೆಲ್ಲಿಯ ವಿಳಾಸಕ್ಕೆ ಕಳುಹಿಸಿ ಕೊಟ್ಟರೆ, ಅಂತಹವರಿಗೆ ಉಚಿತ ರೇಡಿಯೋ ಕಳುಹಿಸಿ ಕೊಡುವುದಾಗಿ ನಮೂದಿಸಿದ್ದರು. ಅದರಂತೆ ಉತ್ತರಗಳನ್ನು ಒಂದು ಹಾಳೆಯಲ್ಲಿ ಅದೇ ರೀತಿ ಬರೆದು ಡೆಲ್ಲಿ ವಿಳಾಸಕ್ಕೆ ಕಳುಹಿಸಿ ಕೊಟ್ಟಿದ್ದನು.

ಅದಾದ ನಂತರ ಒಂದು ವಾರ ಕಳೆದ ತಕ್ಷಣ ಅವನಿಗೆ ಅದನ್ನು ಕಾಯುವ ಕಾತುರ ಶುರುವಾಯಿತು. ಇದೆಲ್ಲಾ ಬರಿ ಡೋಂಗಿ ಅಂತ ಅವನನ್ನು ಹಿಯ್ಯಾಳಿಸುತ್ತಿದ್ದೆವು. ಆಗ ನಮ್ಮೂರಿಗೆ ಟಪಾಲು ಬರುತ್ತಿರಲಿಲ್ಲ, ಏನಿದ್ದರೂ ಸೋಮವಾರಪೇಟೆ ಪಟ್ಟಣಕ್ಕೆ ಬಂದು ಪೋಸ್ಟ್ ಆಪೀಸಿನಲ್ಲಿ ವಿಚಾರಿಸ ಬೇಕಿತ್ತು. ಟಪಾಲುಗಳನ್ನು ಸೋಮವಾರಪೇಟೆಯಲ್ಲಿ ಮಾತ್ರ ವಿತರಿಸಲಾಗುತ್ತಿತ್ತು. ಆದರೂ ಛಲ ಬಿಡದ ಅವನು ಅದರ ಮುಂದಿನ ಸೋಮವಾರ ಸಂತೆಗೆ ಹೋದಾಗ ಪೋಸ್ಟ್ ಆಫಿಸಿನಲ್ಲಿ ವಿಚಾರಿಸಿದ್ದಾನೆ. ಆಗ ಪೋಸ್ಟ್ ಮ್ಯಾನ್, ಡೆಲ್ಲಿಯಿಂದ ಪಾರ್ಸೆಲ್ ಬಂದು ಎರಡು ದಿನಗಳಾಯಿತು, ಇನ್ನು ಒಂದು ದಿನ ತಡವಾಗಿದ್ದಿದ್ದರೆ ವಾಪಾಸು ಕಳುಹಿಸುತ್ತಿದ್ದೆವು ಎಂದನಂತೆ. ಏನಾದರೂ ಆಗಲಿ ಪುಕ್ಕಟೆಯಾಗಿ ಒಂದು ರೇಡಿಯೋ ಸಿಕ್ಕಿತಲ್ಲಾ ಎಂಬ ಖುಷಿಯಲ್ಲಿ ತೇಲಾಡತೊಡಗಿದ್ದಾನೆ. ತಮ್ಮನ ಖುಷಿ ಹೇಳ ತೀರದು, ಆ ಖುಷಿಯನ್ನು ಹಂಚಿಕೊಳ್ಳಲು ಅವನ ಜೊತೆ ಯಾರೂ ಇರಲಿಲ್ಲ, ಅಂದು, ಈಗಿನ ತರ ಊರಲ್ಲಿ ಫೋನ್ ಗಳಾಗಲಿ, ಮೊಬೈಲ್ ಗಳಾಗಲಿ ಇರಲಿಲ್ಲ. ಆದರೆ ಅವನ ಖುಷಿಗೆ ಬ್ರೇಕ್ ಬಿದ್ದಿದ್ದು, ಬಂದ ಪಾರ್ಸೆಲ್ ಗೆ 50 ರೂಪಾಯಿ ಕೊಟ್ಟು ಬಿಡಿಸಿಕೊಳ್ಳ ಬೇಕೆಂದಾಗ! -ಮುಂದಿನ ಪುಟಕ್ಕೆ...

ಅವರು ಫ್ರಿ ಎಂದು ಹೇಳದ್ದಾರೆಂದು ಪೋಸ್ಟ್ ಮ್ಯಾನ್ ಗೆ ಜಾಹಿರಾತು ಕೊಟ್ಟಿದ್ದ ಪೇಪರ್ ಕಟಿಂಗ್ ತೋರಿಸಿದ್ದಾನೆ. ಅದನ್ನು ನೋಡಿದ ಪೋಸ್ಟ್ ಮ್ಯಾನ್, ಇಲ್ಲಿ ನೋಡಿ, ಜಾಹೀರಾತಿನ ಕೆಳಗೆ ಸ್ಟಾರ್ ಮಾರ್ಕ್ ಹಾಕಿ ಸಣ್ಣದಾಗಿ ಬರೆದಿದ್ದಾರೆ ಎಂದು ತೋರಿಸಿದ್ದಾನೆ. 'ಉಚಿತ ರೇಡಿಯೋ' ಎಂಬುದನ್ನು ದೊಡ್ಡದಾಗಿ ಬರೆದು, *'50 ರೂಪಾಯಿ ಪಾರ್ಸೆಲ್ ಚಾರ್ಜು' ಎಂಬುದನ್ನು ಕಣ್ಣಿಗೆ ಕಾಣದಷ್ಟು ಸಣ್ಣದಾಗಿ ಬರೆದಿದ್ದರು. 'ಉಚಿತ' ಎನ್ನುವ ಪದದ ಖುಷಿಯಲ್ಲಿ, 50 ತ್ತೆಂಬ ಸಂಖ್ಯೆ ಕಣ್ಣಿಗೆ ಕಾಣದಂತಾಗಿತ್ತು. ತಮ್ಮನ ಕಣ್ಣು ಅದನ್ನು ನೋಡಿ ತಾನು ಈ ಮೊದಲು ಇದನ್ನು ಗಮನಿಸದೇ ಇದ್ದದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಂಡು ಇನ್ನು ಅರ್ಧ ಘಂಟೆಯಲ್ಲಿ ಬರುವುದಾಗಿ ತಿಳಿಸಿ ಮದ್ಯಾಹ್ನ ಸಂತೆಯ ಒಳಗೆ ಸರ್ಕಿಟು ಹೊಡೆಯುತ್ತಿದ್ದ ನನ್ನ ಬಳಿ ಬಂದು ವಿಷಯ ತಿಳಿಸಿದ.

ನಮ್ಮ ಮನೆಯ ರೇಡಿಯೋಗೆ 250 ರೂಪಾಯಿ ಕೊಟ್ಟಿರುವಾಗ ಇದಕ್ಕೆ 50 ರೂಪಾಯಿ ಅಂದರೆ ಬಹಳ ಕಡಿಮೆ ಬೆಲೆಗೆ ಸಿಕ್ಕಿದಂತಲ್ಲವೇ, ಹೇಗಾದರೂ ಮಾಡಿ ಅದನ್ನು ಪೋಸ್ಟ್ ಆಫೀಸಿನಿಂದ ಬಿಡಿಸಿ ಕೊಳ್ಳುವುದೆಂದು ನಿರ್ಧರಿಸಿದೆವು, ಆದರೆ ಅವನ ಬಳಿ ಅಷ್ಟು ಹಣವಿರಲಿಲ್ಲ, ನನ್ನ ಬಳಿಯಿದ್ದ ಸ್ವಲ್ಪ ಹಣ, ಜೊತೆಗೆ ಒಂದಿಬ್ಬರ ಕಡೆಯಿಂದ ಸಾಲವಾಗಿ ಕೇಳಿಕೊಂಡು ಪೋಸ್ಟ್ ಅಫಿಸಿಗೆ ಹೋಗಿ ಪಾರ್ಸೆಲ್ ಬಿಡಿಸಿ ಕೊಂಡೆವು. ಅದರ ಒಳಗೆ ನಿಜವಾಗಿಯೂ ರೇಡಿಯೋ ಇದ್ದೀತೆ ಎಂಬ ಅನುಮಾನ ಬೇರೆ. ಈ ರೀತಿ ಪಾರ್ಸೆಲ್ ಗಳಲ್ಲಿ ನಿಜವಾದ ವಸ್ತುಗಳು ಇರದೆ, ಇಟ್ಟಿಗೆಯೋ, ಮರದ ತುಂಡನ್ನೋ ಹಾಕಿ ಕಳುಹಿಸುತ್ತಾರೆಂದು ಕೇಳಿದ್ದೆವು. ಆದರೂ ಭಂಡ ಧೈರ್ಯ ಮಾಡಿ ತೆರೆದಾಗ ತಿಳಿನೀಲಿ ಬಣ್ಣದ ರೇಡಿಯೋ ಇತ್ತು. ಹಿಂದೆ ಮುಂದೆ ತಿರುಗಿಸಿ ನೋಡಿ, ವಾಲ್ಯೂಮ್ ನಾಬ್ ತಿರುಗಿಸಿ ಆನ್ ಮಾಡಿದೆವು. ಆದರೆ ಯಾವುದೇ ಶಬ್ದ ಹೊರ ಹೊಮ್ಮಲಿಲ್ಲ. ಓಹ್, ರೇಡಿಯೋದ ರೀತಿಯಲ್ಲಿ ಕಾಣುವ ಎಂತದೋ ಡಬ್ಬವನ್ನು ಕಳುಹಿಸಿರ ಬೇಕೆಂದು ಅನುಮಾನಗೊಂಡು ನನಗೆ ಗೊತ್ತಿದ್ದ ರೇಡಿಯೋ ರಿಪೇರಿ ಅಂಗಡಿಗೆ ತೆಗೆದುಕೊಂಡು ಹೋದೆವು. ಅವನು ರೇಡಿಯೋದ ಹಿಂದೆ ಬ್ಯಾಟರಿ ಹಾಕುವಲ್ಲಿದ್ದ ಮುಚ್ಚಳವನ್ನು ತೆರೆದು ಅದಕ್ಕೆ ಮೂರು ಬ್ಯಾಟರಿ ಹಾಕಿ ಬರುತ್ತೆ ಅಂದ. ಅವನ ಬಳಿಯೇ ಇದ್ದ ಮೂರು ಬ್ಯಾಟರಿ ಹಾಕಿ ತೋರಿಸಿದ. ಆಗ ನಮ್ಮೂರಲ್ಲಿ MW ಬ್ಯಾಂಡ್ ನಲ್ಲಿ ಬೆಂಗಳೂರು ಆಕಾಶವಾಣಿ ಮಾತ್ರ ಬರುತ್ತಿತ್ತು. SW1 ಬ್ಯಾಂಡ್ ನಲ್ಲಿ ರೇಡಿಯೋ ಶ್ರೀಲಂಕಾ ಮತ್ತು SW2 ರಲ್ಲಿ ಬಿಬಿಸಿ ಮತ್ತಿತರ ಸ್ಟೇಷನ್ ಗಳು ಬರುತ್ತಿದ್ದವು. ಆದರೆ ನಮ್ಮ ಡೆಲ್ಲಿ ಸೆಟ್ಟಿನಲ್ಲಿ ಮನೆಯಲ್ಲಿದ್ದ ಫಿಲಿಪ್ಸ್ ರೇಡಿಯೋದಷ್ಟು ಉತ್ತಮ ಶಬ್ಧ ಬರುತ್ತಿರಲಿಲ್ಲ. ನಮಗೆ ಸ್ವಲ್ಪ ನಿರಾಶೆಯಾದರೂ, ನಮ್ಮದೇ ಆದ ಒಂದು ರೇಡಿಯೋ ಸಿಕ್ಕಿದ್ದು ಏನೋ ಒಂತರಾ ಖುಷಿಯಾಗಿತ್ತು. ಮನೆಗೆ ಹೋದ ಮೇಲೆ ಒಂದು ವಾರ ಯಾರಿಗೂ ಹೇಳದಂತೆ ಅದನ್ನು ಮುಚ್ಚಿಟ್ಟಿದ್ದೆವು. ಅದನ್ನು ಮುಚ್ಚಿಡುವ ಸಮಯದಲ್ಲಿ ರೇಡಿಯೋ ಆಫ್ ಮಾಡುವುದನ್ನು ಮರೆತಿದ್ದರಿಂದ ಒಂದು ವಾರದಲ್ಲಿ ಬ್ಯಾಟರಿ ಖಾಲಿಯಾಗುವ ಹಂತಕ್ಕೆ ಬಂದಿತ್ತು. ಕೊನೆಗೆ ಮನೆಯಲ್ಲಿ ಎಲ್ಲರಿಗೂ ಈ ವಿಷಯ ಗೊತ್ತಾಗಿ, ಅಪ್ಪನಿಂದ ಚೆನ್ನಾಗಿ ಬೈಗುಳ ತಿಂದಿದ್ದೂ ಆಯಿತು. -ಮುಂದಿನ ಪುಟಕ್ಕೆ...

ರೇಡಿಯೋದೊಳಗಿನ ವಿಷ್ಮಯ-ರಿಪೇರಿಗೆ ಅಡಿಗಲ್ಲು!

ಒಂದಿಷ್ಟು ದಿನ ಕಳೆದ ಮೇಲೆ ರೇಡಿಯೋದ ಹಿಂಬಾಗದ ಕ್ಯಾಬಿನೆಟ್ ಓಪನ್ ಮಾಡಿ ನೋಡಿದೆ. ಅಲ್ಲಿ ಏನೇನೋ ಸಣ್ಣ ಸಣ್ಣ ವಸ್ತುಗಳನ್ನು ಕಂದು ಬಣ್ಣದ ಬೋರ್ಡಿನ ಮೇಲೆ ಸಿಕ್ಕಿಸಿ ಇಟ್ಟಿದ್ದರು. ಅವುಗಳು ಏನು ಮತ್ತು ಅವುಗಳಿಂದ ರೇಡಿಯೋ ಹೇಗೆ ಕೆಲಸ ಮಾಡುತ್ತದೆಂಬ ಗಂಧ-ಗಾಳಿಯೂ ಗೊತ್ತಿರಲಿಲ್ಲ. ಒಟ್ಟಾರೆ ಈ ರೇಡಿಯೋದಲ್ಲಿ ಹಾಡು ಮತ್ತು ಮಾತುಗಳು ಹೇಗೆ ಬರುತ್ತವೆಂದು ಅರ್ಥವಾಗುತ್ತಿರಲಿಲ್ಲ. ಅವು ತರಂಗಗಳ ರೂಪದಲ್ಲಿ ಬಂದು ರೇಡಿಯೋದಲ್ಲಿ ಸ್ವೀಕರಿಸಲ್ಪಟ್ಟು ಅದನ್ನು ಮರು ಪ್ರಸಾರ ಮಾಡುತ್ತವೆ ಎಂದು ತಿಳಿದು ಕೊಳ್ಳಲು ತಿಂಗಳುಗಟ್ಟಲೇ ಬೇಕಾಯಿತು. ಈ ಹಿಂದೆ, ನಮ್ಮ ಅಣ್ಣ ರೇಡಿಯೋದ ಒಳಗಡೆ ಸಣ್ಣ ಸಣ್ಣ ಮನುಷ್ಯರು ಇದ್ದು, ಅವರು ಮಾತು, ಹಾಡು ಹೇಳುತ್ತಿರುತ್ತಾರೆಂದು ನಂಬಿಸಿದ್ದ. ಅದನ್ನು ಅನುಮಾನದಿಂದಲೇ ನಂಬಿಕೊಂಡಿದ್ದ ದಡ್ಡ ಶಿಖಾಮಣಿಗಳು ನಾವು. ಒಂದು ಕಾಲದಲ್ಲಿ ಸಾಫ್ಟ್ವೇರ್ ಎಂದರೇನು ಎಂಬುದು ಗೊತ್ತಿಲ್ಲದ ಕಾಲವಿತ್ತು, ಆದರೆ ಈಗ ಸಾಫ್ಟ್ವೇರ್ ಅಭಿವೃದ್ಧಿ ಮಾಡುವ ಸಾಮರ್ಥ್ಯ ಬಂದಿದೆ.

ರೇಡಿಯೋದ ಒಳಗಡೆ ಕಪ್ಪಾದ ನಾಲ್ಕಿಂಚಿನ ಸಣ್ಣ ಫೆರೈಟ್ ರಾಡ್ ಮೇಲೆ ಕಾಯ್ಲ್ ವೊಂದನ್ನು ಸುತ್ತಿ, ಜೇನು ಮೇಣದಿಂದ ಅಂಟಿಸಿಟ್ಟಿದ್ದ ವಸ್ತುವನ್ನು ಬೆರಳಲ್ಲಿ ಮುಟ್ಟಿದರೆ ಘರ್ ಘರ್ ಎಂಬ ಶಬ್ದ ಬರುತ್ತಿತ್ತು. ಫೆರೆಟ್ ರಾಡಿನ ಸುತ್ತಲೂ ಇದ್ದ MW ಕಾಯ್ಲಾನ್ನು ಯಾವುದಾದ್ರೂ ಒಂದು ಸ್ಟೇಷನ್ ಬರುವಾಗ ಹಿಂದೆ ಮುಂದೆ ಸರಿಸಿದಾಗ ಆ ಸ್ಟೇಷನ್ ಜೋರಾಗಿ ಕೇಳುತ್ತಿತ್ತು, ಆದರೆ ಉಳಿದ ಸ್ಟೇಷನ್ ಗಳು ಮಾಯವಾಗಿಬಿಡುತ್ತಿದ್ದವು. ನಮಗೆ ಯಾವ ಸ್ಟೇಷನ್ ಸರಿಯಾಗಿ ಕೇಳಿಸ ಬೇಕು ಅದಕ್ಕೆ ಸರಿಸಿ ಕೇಳುತ್ತಿದ್ದೆವು. ಇದೊಂದು ರೀತಿಯ ಕಪಿ ಚೇಷ್ಠೆಯಂತಾದರೂ ಅದರಿಂದ ಕಲಿತದ್ದು ತುಂಬಾ ಇದೆ. -ಮುಂದಿನ ಪುಟಕ್ಕೆ...

ನಮ್ಮೂರಲ್ಲಿ ರೇಡಿಯೋದ MW ಬ್ಯಾಂಡ್ ನಲ್ಲಿ ಹಗಲು ಹೊತ್ತು ಬೆಂಗಳೂರು ಆಕಾಶವಾಣಿ ಮಾತ್ರ ಬರುತ್ತಿತ್ತು, ಸಂಜೆಯಾದರೆ ಭದ್ರಾವತಿ, ಧಾರವಾಡ ಸ್ಟೇಷನ್ ಗಳು ಬರುತ್ತಿದ್ದವು. ಮುಖ್ಯವಾಗಿ ಯಾವ ಯಾವ ಸ್ಟೇಷನ್ ಗಳಲ್ಲಿ ಕನ್ನಡ ಕಾರ್ಯಕ್ರಮಗಳು ಬರುತ್ತವೆಂಬ ಕುತೂಹಲ ತುಂಬಾ ಇತ್ತು. ಆದರೆ SW ನಲ್ಲಿ ದಿನ ಮತ್ತು ರಾತ್ರಿ ಶ್ರೀಲಂಕಾ, ಬಿಬಿಸಿ ಮುಂತಾದ ಸ್ಟೇಷನ್ ಗಳು ಬರುತ್ತಿದ್ದವು. ಶ್ರೀಲಂಕಾ ಇಂಗ್ಲಿಷ್ ಸ್ಟೇಷನ್ ನಲ್ಲಿ ಮಧ್ಯಾಹ್ನ 2:15 ರಿಂದ 2:30 ರವರೆಗೆ ಕನ್ನಡ ಚಲನ ಚಿತ್ರ ಗೀತೆಗಳನ್ನು ಹಾಕುತ್ತಿದ್ದರು. ಉಳಿದ ಸಮಯದಲ್ಲಿ ಹಿಂದಿ ಸೇರಿದಂತೆ ಇತರ ಭಾರತೀಯ ಭಾಷೆಗಳ ಚಲನ ಚಿತ್ರ ಗೀತೆಗಳನ್ನು ಹಾಕುತ್ತಿದ್ದರು.

ಆಕಾಶವಾಣಿ ಕೇಂದ್ರಗಳಿಂದ ಪ್ರಸಾರವಾಗುವ ಕಾರ್ಯಕ್ರಮಗಳು ಹಗಲಿನಲ್ಲಿ ದೂರದ ಸ್ಥಳಗಳಿಗೆ ತಲುಪುವುದು ಕಷ್ಟವಾಗುತ್ತದೆ. ಹಗಲಿನಲ್ಲಿ, ಅಯಾನುಗೋಳದ D-ಪದರವು ಶಾರ್ಟ್‌ವೇವ್ ರೇಡಿಯೋ ಸಿಗ್ನಲ್‌ಗಳನ್ನು ಹೀರಿಕೊಳ್ಳುತ್ತದೆ, ಅವುಗಳ ವ್ಯಾಪ್ತಿ ಮತ್ತು ಸ್ಪಷ್ಟತೆಯನ್ನು ಕಡಿಮೆ ಮಾಡುತ್ತದೆ. ರಾತ್ರಿಯಲ್ಲಿ, D-ಪದರವು ದುರ್ಬಲಗೊಳ್ಳುತ್ತದೆ ಅಥವಾ ಕಣ್ಮರೆಯಾಗುತ್ತದೆ, ಸಿಗ್ನಲ್‌ಗಳು F-ಪದರದಿಂದ ಪ್ರತಿಫಲಿಸಲು ಅನುವು ಮಾಡಿಕೊಡುತ್ತದೆ, ಇದು ಅವುಗಳನ್ನು ಹೆಚ್ಚು ದೂರ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಮತ್ತು ಉತ್ತಮ ಪ್ರಸರಣಕ್ಕೆ ಕಾರಣವಾಗುತ್ತದೆ. ಇದರಿಂದ SW ಬ್ಯಾಂಡ್ ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಹಗಲು ಕೂಡಾ ಸ್ಪಷ್ಟವಾಗಿ ಕೇಳುತ್ತವೆ, ಆದರೆ MW ಬ್ಯಾಂಡ್ ನಲ್ಲಿ ದೂರದ ಸ್ಟೇಷನ್ ಗಳು ಸ್ಪಷ್ಟವಾಗಿ ಕೇಳಿಸುವುದಿಲ್ಲ. ಅವು ರಾತ್ರಿ ಮಾತ್ರ ಸ್ಪಷ್ಟವಾಗಿ ಕೇಳುಗರಿಗೆ ತಲುಪುತ್ತವೆ.

ರೇಡಿಯೋದ ಒಳಗೆ ಆನೇಕ ರೀತಿಯ ರೆಸಿಸ್ಟರ್ ಗಳು, ಟ್ರಾನ್ಸಿಸ್ಟರ್ ಗಳು, ಕ್ಯಪಾಸಿಟರ್ ಗಳು, ಡಯೋಡ್ ಗಳು, ಸಣ್ಣ ಟ್ರಾನ್ಸ್ ಫಾರ್ಮರ್, ವಾಲ್ಯೂಮ್ ಕಂಟ್ರೋಲ್, ಬ್ಯಾಂಡ್ ಸ್ವಿಚ್, IFT (Integrated Frequency Termination) ಕಾಯ್ಲ್, RF (Radio frequency/ Oscillation) ಕಾಯ್ಲ್, ಕಾರ್ಬನ್ ರಾಡ್ ಗೆ ತೊಡಿಸಿಟ್ಟ MW ಆಂಟೆನಾ ಕಾಯ್ಲ್, ಸ್ಟೇಷನ್ ಗಳನ್ನು ಟ್ಯೂನ್ ಮಾಡಿಕೊಳ್ಳಲು ಬೇಕಾದ ಗ್ಯಾಂಗ್, ಇನ್ನೂ ಅನೇಕ ಕಾಂಪನೆಂಟ್ ಗಳು PCB (printed circuit board) ಗೆ ಜೋಡಿಸಿಟ್ಟಿರುತ್ತಾರೆ. ಇಡೀ PCB ಯೂನಿಟ್ಟನ್ನು ಬಿಚ್ಚಿ ನೋಡಿದರೆ ಎಲ್ಲಾ ಕಾಂಪೋನೆಂಟ್ ಗಳನ್ನು PCB ಗೆ ಹಿಂದಿನಿಂದ ಸಾಲ್ಡರ್ ಮಾಡಿರುವುದನ್ನು ಕಾಣ ಬಹುದಾಗಿತ್ತು. PCB ಗೆ ಜೋಡಿಸಿದ್ದ ರೇಡಿಯೋ ಗ್ಯಾಂಗ್ (Variable Capacitor) ಗೆ ಸ್ಟೇಷನ್ ನಂಬರ್ ತೋರಿಸಲು ಒಂದು ಗಟ್ಟಿಯಾದ ನೂಲಿನಿಂದ ಕಟ್ಟಿ ಅದನ್ನು ಮುಂದಿನ ಕ್ಯಾಬಿನೆಟ್ ಮೇಲ್ಭಾಗದಲ್ಲಿ ಸ್ಟೇಷನ್ ನಂಬರ್ ತೋರಿಸುವ ಕಡ್ಡಿಗೆ ಒಳಗಿನಿಂದ ಸಿಕ್ಕಿಸಿ, ಅಲ್ಲಿಂದ ಸ್ಟೇಷನ್ ತಿರುಗಿಸುವ ನಾಬ್ ಮುಖಾಂತರ ಗ್ಯಾಂಗ್ ಗೆ ಜೋಡಿಸಿದ್ದ ಚಕ್ರಕ್ಕೆ ಸ್ಪ್ರಿಂಗ್ ನೊಂದಿಗೆ ಜೋಡಿಸಿದ್ದರು. ನಾಬನ್ನು ತಿರುಗಿಸಿದಂತೆ ಗ್ಯಾಂಗ್ ಚಕ್ರ ತಿರುಗುತ್ತಿತ್ತು, ಅದರಂತೆ ಮೇಲ್ಬಾಗದಲ್ಲಿ ಹಾದು ಹೋದ ನೂಲಿಗೆ ಸಿಕ್ಕಿಸಿದ್ದ ಕಡ್ಡಿ ಸ್ಟೇಷನ್ ನಂಬರ್ ನಲ್ಲಿ ನಿಂತು ಕೊಂಡಂತೆ ಸ್ಟೇಷನ್ ನಲ್ಲಿ ಮಾತು, ಹಾಡು, ಸಂಗೀತ ಬರುತ್ತಿತ್ತು. ಈ ಮೇಲಿನ ತಿಳುವಳಿಕೆಗಳು ನಾನು ರೇಡಿಯೋ ರಿಪೇರಿ ಮಾಡಲು ಕಲಿತ ಮೇಲೆ ಬಂದಂತಹವುಗಳು. -ಮುಂದಿನ ಪುಟಕ್ಕೆ...

ಹೀಗೆ ಪ್ರತೀ ದಿನ ಮನೆಯವರಿಗೆ ತಿಳಿಯದಂತೆ ಮನೆಯ ಮೂಲೆಯಲ್ಲಿ ಕುಳಿತುಕೊಂಡು ರೇಡಿಯೋವನ್ನು ಅನೇಕ ಬಾರಿ ಬಿಚ್ಚಿ ಕೂಡಿಸುತ್ತಿರುವಾಗ ಒಂದೆರಡು ವಯರ್ ಗಳು ಕಿತ್ತು ಹೋದವು. ಕಿತ್ತು ಹೋದ ಭಾಗಕ್ಕೆ ಅವುಗಳನ್ನು ಜೋಡಿಸಿದರೆ ಮಾತ್ರ ರೇಡಿಯೋ ಹಾಡುತ್ತಿತ್ತು. ಹೀಗೆ ಕಿತ್ತು ಬಂದ ವಯರ್ ಗಳ ತುದಿಯನ್ನು ಬ್ಲೇಡಿನಿಂದ ಸ್ಲೀವ್ ತೆಗೆದು, ಅವುಗಳನ್ನು ಮೊದಲು ಸಾಲ್ಡರ್ ಮಾಡಿದ ಜಾಗದ ಪಕ್ಕದಲ್ಲಿದ್ದ ರೆಸಿಸ್ಟರ್ ಅಥವಾ ಕ್ಯಪಾಸಿಟರ್ ಪಿನ್ನಿಗೆ ಸುತ್ತಿ, ಅದಕ್ಕೆ ಜೇನು ಮೆಣವನ್ನು ಅಂಟಿಸಿ ಸರಿ ಮಾಡಿದ್ದೂ ಆಯಿತು.

ಒಂದೆರಡು ದಿನ ಕಳೆದ ಮೇಲೆ ಹೊಸ ಐಡಿಯಾ ಹೊಳೆಯಿತು. ಒಂದು ದಪ್ಪದ ಕಬ್ಬಿಣದ ತಂತಿಯನ್ನು ಸ್ಕ್ರೂ ಡ್ರೈವರ್ ರೀತಿ ಮಾಡಿ, ಅದಕ್ಕೊಂದು ಮರದ ಹಿಡಿ ಹಾಕಿ, ತಂತಿಯನ್ನು ಬೆಂಕಿಯ ಒಲೆಗೆ ಹಾಕಿ ಕೆಂಪಗೆ ಕಾಯಿಸಿ, ಅದನ್ನು ವಯರ್ ತುದಿ ಮತ್ತು ಕಿತ್ತು ಬಂದ PCB ಭಾಗದ ಲೆಡ್ ಮೇಲೆ ಇಟ್ಟಾಗ ಅಂಟಿ ಕೊಂಡಿತು. ಈ ರೀತಿ ಮುಂದುವರಿದು ದಿನ ಕಳೆದಂತೆ ನನಗೆ ರೇಡಿಯೋ ರಿಪೇರಿ ಕಲಿಯ ಬೇಕೆಂಬ ಹುಚ್ಚು ಹಿಡಿಯಿತು. ರೇಡಿಯೋದೊಳಗಿರುವ ಅನೇಕ ಕಾಂಪೊನೆಂಟ್ ಗಳ ನಿಜವಾದ ನಾಮದೇಯಗಳನ್ನು ಮತ್ತು ಕಾರ್ಯವೈಖರಿಯ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವನ್ನು ತಿಳಿದು ಕೊಳ್ಳಲು ಸರಿಸುಮಾರು ಆರು ತಿಂಗಳುಗಳೇ ಹಿಡಿದಿದೆ.

ರಿಪೇರಿ ಗುರು ಜೋಸೆಫ್

ನನಗೆ ಈ ಮೊದಲೇ ಗೊತ್ತಿದ್ದ ಮಲಯಾಳಿ ಜೋಸೆಫ್ ಸೋಮವಾರಪೇಟೆಯಲ್ಲಿ ರಿಪೇರಿ ಅಂಗಡಿ ಇಟ್ಟು ಕೊಂಡಿದ್ದ. ಇವನ ಅಂಗಡಿಗೆ ಸಮಯ ಸಿಕ್ಕಾಗಲೆಲ್ಲಾ ಹೋಗುತ್ತಿದ್ದೆ. ನಮ್ಮ ಶಾಲೆಯಿಂದ ಇವನ ಅಂಗಡಿ ಮುಕ್ಕಾಲು ಕಿಲೋಮೀಟರ್ ದೂರದಲ್ಲಿ ಇತ್ತು. ಮದ್ಯಾಹ್ನ ಶಾಲೆಯ ಊಟದ ಸಮಯದಲ್ಲಿ, ಸಂಜೆ ಮನೆಗೆ ಹೋಗುವುದಕ್ಕೆ ಮೊದಲು, ಒಂದೊಂದು ದಿನ ಶಾಲೆಗೆ ಚಕ್ಕರ್ ಹಾಕಿದಾಗ ರೇಡಿಯೋ ರಿಪೇರಿಯ ಅಂಗಡಿಯೇ ನನ್ನ ಅಡ್ಡವಾಗಿ ಹೋಯಿತು. ಮೊದ ಮೊದಲು ಅವನು ಟೀ ಕುಡಿಯಲು ಹೋದಾಗ ರಿಪೇರಿ ಮಾಡುವ ರೂಮಿಗೆ ಬೀಗ ಹಾಕಿ, ಹೊರಗಿನ ಜಾಗದಲ್ಲಿ ನನ್ನನ್ನು ಕೂರಿಸಿ ಇಲ್ಲೇ ಬಂದೆ ಎಂದು ಹೋಗುತ್ತಿದ್ದ. ಕ್ರಮೇಣ ಅವನಿಗೆ ರೇಡಿಯೋ ರಿಪೇರಿಯಲ್ಲಿ ಸಣ್ಣ ಪುಟ್ಟ ಸಹಾಯ ಮಾಡ ತೊಡಗಿದೆ. ರೇಡಿಯೋ ಬಿಚ್ಚುವುದು, ದೂಳು ಕ್ಲೀನ್ ಮಾಡುವುದು ಮುಂತಾದ ಕೆಲಸ ಮಾಡಿ ಕೊಡುತ್ತಿದ್ದೆ. ಒಮ್ಮೊಮ್ಮೆ ಕುಡಿಯಲು ಟೀ ಕೂಡಾ ತರಿಸಿ ಕೊಡುತ್ತಿದ್ದ. ನಂತರ ಅವನು ರಿಪೇರಿ ರೂಮಿಗೆ ಬೀಗ ಹಾಕದೆ ನನ್ನನ್ನು ಅಲ್ಲೇ ಬಿಟ್ಟು ಹೋಗುತ್ತಿದ್ದ. ಆಮೇಲೆ ಸಾಲ್ಡರ್ ಗನ್ ಹಿಡಿದು ಸಾಲ್ಡರ್ ಮಾಡುವುದನ್ನು ಮತ್ತು ಸಣ್ಣ ಪುಟ್ಟ ರಿಪೇರಿ ಮಾಡುವುದನ್ನು ಕಲಿತುಕೊಂಡಿದ್ದೆ. ಆಗೆಲ್ಲಾ ಹಳ್ಳಿಗಳಲ್ಲಿ ಕರೆಂಟ್ ಇಲ್ಲದಿದ್ದುದರಿಂದ ಬ್ಯಾಟರಿ ಆಧಾರಿತ ರೇಡಿಯೋಗಳೇ ಇರುತ್ತಿದ್ದವು, ಆದರೆ ಸೋಮವಾರಪೇಟೆ ಟೌನಿನಲ್ಲಿ ಕರೆಂಟ್ ಇದ್ದುದರಿಂದ, ಕರೆಂಟ್ ನಿಂದಲೂ ರೇಡಿಯೋಗಳು ಕೆಲಸ ಮಾಡುತ್ತಿದ್ದವು. -ಮುಂದಿನ ಪುಟಕ್ಕೆ...

ರೇಡಿಯೋದೊಳಗೆ ಬ್ಯಾಟರಿಯಿಂದ ಡಿಸಿ ವೋಲ್ಟೇಜು ಯಾವ ಯಾವ ಭಾಗಕ್ಕೆ ಎಷ್ಟೆಷ್ಟು ಹೋಗುತ್ತದೆ, ಫ್ರಿ ಅಂಪ್ಲಿ ಪ್ಲೇಯರ್ ಸೆಕ್ಸೆನ್ ನಿಂದ ಅಂಪ್ಲಿ ಪ್ಲೇಯರ್ ಭಾಗಕ್ಕೆ ಯಾವ ರೀತಿ ಸಿಗ್ನಲ್ ಹೆಚ್ಚಾಗುತ್ತಾ ಹೋಗುತ್ತದೆ, ಆಸಿಲೇಶನ್ ಸೆಕ್ಸನ್ ನಲ್ಲಿ ಆಗುವ ಬದಲಾವಣೆಗಳು, MW ಮತ್ತು SW ಸಿಗ್ನಲ್ ಗಳು ಆಂಟೆನಾ ದಿಂದ ಫ್ರಿ ಆಂಪ್ಲಿ ಪ್ಲೇಯರ್ ಗೆ ಹೇಗೆ ಬರುತ್ತದೆ, ವಾಲ್ಯೂಮ್ ಕಂಟ್ರೋಲ್ ಹೇಗೆ ಕೆಲಸ ಮಾಡುತ್ತದೆ, ಕೊನೆಗೆ ಸ್ಪೀಕರ್ ನಲ್ಲಿ ರೇಡಿಯೋ ಶಬ್ಧ ಹೇಗೆ ಉತ್ಪತ್ತಿಯಾಗುತ್ತದೆಂದು ಅರ್ಥವಾಗ ತೊಡಗಿತು. ಇದಕ್ಕೆ ಜೋಸೆಫ್ ಕೂಡಾ ಸಹಾಯ ಮಾಡಿದ್ದ.

ಪಿಯುಸಿ ಆದಮೇಲೆ ಮೈಸೂರಿಗೆ ದೌಡು

ನಾನು ಸೋಮವಾರಪೇಟೆ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಮೇಲೆ ಡಿಗ್ರಿ ಓದಲು ಮೈಸೂರಿಗೆ ಬಂದಾಗ ಮನೆಯವರು ನನ್ನನ್ನು ಕ್ಯಾರೇ ಎಂದಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ನಾನು ನಮ್ಮ ತೋಟದ ಕೆಲಸ ಬಿಟ್ಟು ಓದುವುದು ಅವರಿಗೆ ಇಷ್ಟವಿರಲಿಲ್ಲ. ಮುಂದೆ ಓದ ಬೇಕೆಂದರೆ ಅವರ ಕೈಯಿಂದ ಹಣ ನೀಡಲು ಸಾಧ್ಯವಿಲ್ಲವೆಂದು ಕೋಪ ಮಾಡಿ ಕೊಂಡಿದ್ದರು. ಆದರೂ ಹಠ ಬಿಡದ ತ್ರಿವಿಕ್ರಮನಂತೆ ಮಹಾರಾಜ ಕಾಲೇಜಿಗೆ ಡಿಗ್ರಿ ಮಾಡಲು ಸೇರಿಕೊಂಡೆ. ಎರಡು ಮೂರು ತಿಂಗಳು ಕಳೆದ ಮೇಲೆ ನಮ್ಮ ಅಣ್ಣ ಮೈಸೂರಿಗೆ ಬಂದು ನಾನು ಏನು ಮಾಡುತ್ತಿದ್ದೇನೆಂಬುದನ್ನು ವಿಚಾರಿಸಿ, ನಾನು ಓದುತ್ತಿರುವುದನ್ನು ಖಚಿತ ಪಡಿಸಿ ಕೊಂಡು ಪಾಕೆಟ್ ಮನಿ ಅಂತ ಇಪ್ಪತ್ತು ರೂಪಾಯಿ ಕೊಟ್ಟು ಹೋಗಿದ್ದ. ಅದು ನನ್ನ ಓದಿಗೇನೂ ಸಹಾಯವಾಗದಿದ್ದರೂ, ಅದೊಂತರ ಖುಷಿಯಾಗಿತ್ತು!

ಇದು ನನ್ನ ಓದಿಗಂತೂ ಸಹಾಯವಾಗಲಿಲ್ಲ. ಆಗ ನಾನು ಕುಕ್ಕರ ಹಳ್ಳಿಯಲ್ಲಿ 8×5 ಅಡಿಗಳ ಸಣ್ಣ ರೂಮು ಮಾಡಿಕೊಂಡು ಇದ್ದೆ. ಅದಕ್ಕೆ ಪ್ರತೀ ತಿಂಗಳು 60 ರೂಪಾಯಿ ಬಾಡಿಗೆ ಕಟ್ಟ ಬೇಕಿತ್ತು. ಆಗ ನನಗೆ ಸಹಾಯಕ್ಕೆ ಬರುತ್ತಿದ್ದುದು ಈ ರೇಡಿಯೋ ರಿಪೇರಿ ಕೆಲಸ. ತಿಂಗಳಿಗೆ ಐವತ್ತೋ, ಅರವತ್ತೋ ರೂಪಾಯಿ ಸಿಗುತ್ತಿತ್ತು. ಹತ್ತಿಪ್ಪತ್ತು ರೂಪಾಯಿ ಕುಕ್ಕರಹಳ್ಳಿ ಹುಡುಗರು ನೀಡುತ್ತಿದ್ದರು. ಕೊನೆಗೆ ಬಾಡಿಗೆ ಕೊಡಲು ಕಷ್ಟವಾದಾಗ ರೂಮ್ ಖಾಲಿ ಮಾಡಿದೆ. ಆಗ ದಲಿತ ಸಂಘರ್ಷ ಸಮಿತಿಯ ಸ್ನೇ ದೊಡ್ಡಣ್ಣ ಎನ್ನುವ ವಿದ್ಯಾರ್ಥಿಯ ಸಹಾಯದಿಂದ ಮೈಸೂರಿನ ಅಶೋಕಪುರಂ ನಲ್ಲಿರುವ ಕಮ್ಯುನಿಟಿ ಹಾಲ್ ನಲ್ಲಿ ಉಳಿದು ಕೊಳ್ಳ ತೊಡಗಿದೆ. ದಲಿತ ಸಂಘರ್ಷ ಸಮಿತಿಯ ಅನೇಕರು ಮೈಸೂರಿಗೆ ಬಂದಾಗ ಉಳಿದು ಕೊಳ್ಳಲು ಸ್ಥಳ ಸಿಗಲಿಲ್ಲವೆಂದರೆ ರಾತ್ರಿ ಅಲ್ಲಿ ಬಂದು ಉಳಿದು ಹೋಗುತ್ತಿದ್ದರು. ಅಲ್ಲಿಂದಲೇ ನಾನು ಮತ್ತು ಸ್ನೇಹಿತ ಕಾಲೇಜಿಗೆ ಹೋಗುತ್ತಿದ್ದೆವು. ನಾವಿದ್ದ ಎದುರುಗಡೆ ಮನೆಯೊಂದರಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಸ್ಟೆಲ್ ಇತ್ತು. ಅಲ್ಲಿಗೆ ನನ್ನ ಸ್ನೇಹಿತ ನನ್ನನ್ನು ಕರೆದುಕೊಂಡು ಹೋಗಿ ಅಲ್ಲಿನ ಅಡುಗೆ ಮಾಡುವವರಿಗೆ ಪರಿಚಯ ಮಾಡಿ ಕೊಟ್ಟಿದ್ದ. ಅಲ್ಲಿ ಹೋದಾಗಲೆಲ್ಲಾ ನನ್ನನು ಕರೆದು ಪ್ರೀತಿಯಿಂದ ಊಟ ಹಾಕುತ್ತಿದ್ದರು. -ಮುಂದಿನ ಪುಟಕ್ಕೆ...

ಹೀಗೆ ಐದಾರು ತಿಂಗಳು ಕಳೆದ ಮೇಲೆ ನಮ್ಮ ಅಪ್ಪ ನನ್ನ ತಮ್ಮನ ಕೈಯಲ್ಲಿ 300 ರೂಪಾಯಿಗಳನ್ನು ಕೊಟ್ಟು ಕಳುಹಿಸಿದ್ದರು. ಅವನು ಪ್ರಥಮ ಬಾರಿಗೆ ಮೈಸೂರಿಗೆ ಬಂದಿದ್ದರಿಂದ ನನ್ನನ್ನು ಹುಡುಕುವುದು ತುಂಬಾ ಕಷ್ಟವಾಗಿತ್ತು. ನಾನು ಕುಕ್ಕರ ಹಳ್ಳಿಯಲ್ಲಿದ್ದಿದ್ದು, ಸರಸ್ವತಿಪುರಂ ನಲ್ಲಿ ರಾಮು ಮನೆಗೆ ಬಂದು ಹೋಗುತ್ತಿದ್ದ ವಿಷಯವನ್ನು ಈ ಹಿಂದೆ ಅವನಿಗೆ ಪತ್ರ ಬರೆದಿದ್ದಾಗ ತಿಳಿಸಿದ್ದೆ. ಸರಸ್ವತಿಪುರಂ ನ 7ನೇ ಮುಖ್ಯ ರಸ್ತೆಯಲ್ಲಿ ಸಿನಿಮಾ ನಟ ಅಂಬರೀಷ್ ಮನೆಯ ಹತ್ತಿರ ರಾಮು ಮನೆ ಇತ್ತು ಮತ್ತು ಅದರ ಔಟ್ ಹೌಸ್ ನಲ್ಲಿ ಪ್ರಿಂಟಿಂಗ್ ಪ್ರೆಸ್ ಇದೆಯೆಂತಲೂ ತಿಳಿಸಿದ್ದೆ. ಇದೆಲ್ಲವನ್ನು ನೆನಪಿಸಿಕೊಂಡು ಮೈಸೂರಿಗೆ ಬಂದವನು ಸಿಟಿ ಬಸ್ ಹಿಡಿದು ಕೊಂಡು 14ನೇ ಮುಖ್ಯ ರಸ್ತೆಯಲ್ಲಿ ಇಳಿದು ಕೊಂಡು, ಅಲ್ಲಿಂದ ಅವರಿವರನ್ನು ಕೇಳಿ ಕೊಂಡು ಕುಕ್ಕರಳ್ಳಿಗೆ ಹೋಗಿ, ಗಾರೆ ರಾಜುವನ್ನು ಭೇಟಿಯಾಗಿದ್ದಾನೆ.

ಈ ಗಾರೆ ರಾಜು ಸೋಮವಾರಪೇಟೆಯಲ್ಲಿ ಒಂದಿಬ್ಬರ ಮನೆ ಕಟ್ಟಲು ಮೈಸೂರಿನಿಂದ ಹುಡುಗರನ್ನು ಕರೆದು ಕೊಂಡು ಬಂದು ಅವರ ಜೊತೆಯಲ್ಲಿ ಇವನೂ ಮೇಸ್ತ್ರಿಯಂತೆ ಕೆಲಸ ಮಾಡಿ ಹೋಗಿದ್ದ. ನಾನು ಸೋಮವಾರಪೇಟೆ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಾಗ ಮೈಸೂರಿಗೆ ಬಂದಾಗ ಇದೇ ಗಾರೆ ರಾಜು ಮನೆಯಲ್ಲಿ ಉಳಿದು ಕೊಳ್ಳುತ್ತಿದ್ದೆ. ಇವನ ಪರಿಚಯ ಊರಲ್ಲಿ ನನ್ನ ತಮ್ಮನಿಗೂ ಆಗಿತ್ತು. ಅದರಂತೆ ಈಗ ಮೈಸೂರಿಗೆ ಬಂದಾಗ ಅವನ ಜೊತೆ ಸೇರಿ ಇಬ್ಬರೂ ರಾಮು ಮನೆಗೆ ಹೋಗಿ ನನ್ನನ್ನು ವಿಚಾರಿಸಿದಾಗ, ನಾನು ಅಶೋಕ ಪುರಂ ನಲ್ಲಿರುವ ವಿಷಯ ತಿಳಿಸಿದ್ದಾರೆ. ಅಲ್ಲಿಂದ ಬಲ್ಲಾಳ್ ಸರ್ಕಲ್ ಗೆ ಬಸ್ಸಿನಲ್ಲಿ ಬಂದು ಅಶೋಕ ಪುರಂ ಗೆ ನಡೆದು ಕೊಂಡು ಬರುತ್ತಿದ್ದ. ನಾನೂ ಕೂಡ ಕಾಲೇಜಿನಿಂದ ಆಗ ತಾನೇ ಅದೇ ರಸ್ತೆಯಲ್ಲೇ ಬರುತ್ತಿದ್ದೆ.

ನನ್ನನ್ನು ನೋಡಿ ಅವನಿಗೆ ತುಂಬಾ ಖುಷಿಯಾಯಿತು. ಅಲ್ಲಿಂದ ಅವನನ್ನು ನಾನು ವಾಸಿಸುತ್ತಿದ್ದ ಅಶೋಕಪುರಂನ ಸಮುದಾಯ ಭವನಕ್ಕೆ ಕರೆದು ಕೊಂಡು ಹೋದೆ. ಮುವ್ವತ್ತು ಮುವ್ವತ್ತು ಅಡಿಗಳ ದೊಡ್ಡ ಹಾಲಿನ ಒಂದು ಮೂಲೆಯಲ್ಲಿ ನನ್ನ ಚಾಪೆ ಬಟ್ಟೆಯ ಬ್ಯಾಗುಗಳು ಇದ್ದವು. ಆಗ ಅಶೋಕಪುರಂಗೆ ಎಂಟ್ರಿ ಕೊಡುತ್ತಿದ್ದಂತೆ ಮನೆ ಮುಂದೆ, ಅಕ್ಕ ಪಕ್ಕದ ರಸ್ತೆ ಬದಿಗಳಲ್ಲಿ ಮಕ್ಕಳು ಕಕ್ಕಸ್ಸಿಗೆ ಕುಳಿತುಕೊಂಡಿರುತ್ತಿದ್ದುದು ಅವನ ಕಣ್ಣಿಗೂ ಬಿದ್ದಿತ್ತು, ಬಹುತೇಕ ಮನೆಗಳಲ್ಲಿ ಕಕ್ಕಸ್ಸು ಮನೆಗಳಿರುತ್ತಿರಲಿಲ್ಲ, ಇವುಗಳ ಮದ್ಯೆಯೇ ದಲಿತ ಮುಖಂಡ ಮತ್ತು ರಾಜಕಾರಣಿ ಶ್ರೀನಿವಾಸ್ ಪ್ರಸಾದ್ ಮನೆಯೂ ಇತ್ತು. ಆಗ ಅಶೋಕಪುರಂಗೆ ಎಂಟ್ರಿ ಕೊಡುತ್ತಿದ್ದಂತೆ ಕಂಡು ಬರುತ್ತಿದ್ದ ದೃಶ್ಯವೆಂದರೆ ಮನೆ ಮುಂದೆ, ಅಕ್ಕ ಪಕ್ಕದ ರಸ್ತೆ ಬದಿಗಳಲ್ಲಿ ಮಕ್ಕಳು ಕಕ್ಕಸ್ಸಿಗೆ ಕುಳಿತುಕೊಂಡಿರುತ್ತಿದ್ದುದು. ಅಭ್ಯಾಸವಿಲ್ಲದವರು ಇಲ್ಲಿಗೆ ಬಂದರೆ ಕಕ್ಕಸ್ಸು ವಾಸನೆ ಮೂಗಿಗೆ ಬಡಿಯುತ್ತಿತ್ತು. ದೊಡ್ಡವರು ಅಶೋಕಪುರಂನ ಅಂಚಿನಲ್ಲಿದ್ದ ಮೆಳೆಗಳ ಹಿಂದೆ ಹೋಗಿ ಬರುತ್ತಿದ್ದರು. ತುಂಬಾ ತೊದರೆ ಎದುರಿಸುತ್ತಿದ್ದವರೆಂದರೆ ಬೆಳೆದ ಹೆಣ್ಣುಮಕ್ಕಳು ಮತ್ತು ಮಹಿಳೆಯರು. ಅವರೆಲ್ಲಾ ಬೆಳಕು ಹರಿಯುವ ಮೊದಲೇ ಇಲ್ಲಾ ರಾತ್ರಿಯಾದ ಮೇಲೆ ಬಹಿರ್ದೆಸೆಗೆ ಹೋಗಿ ಬರಬೇಕಿತ್ತು. ಆದರೂ ಬೀದಿ ಬದಿಯಲ್ಲಿ ಕುಳಿತು ಕಕ್ಕಸ್ಸು ಮಾಡುತ್ತಾ ಕತೆ, ಹಾಡು ಹೇಳುತ್ತಾ ಕುಳಿತಿರುತ್ತಿದ್ದ ಮಕ್ಕಳು, -ಮುಂದಿನ ಪುಟಕ್ಕೆ...

ದೊಡ್ಡವರು ಬೋದರೂ ಕ್ಯಾರೇ ಅನ್ನಿತ್ತಿರಲಿಲ್ಲ. ಇಲ್ಲಿ ಕೇಳಿ ಬರುತ್ತಿದ್ದ ಸಾಮಾನ್ಯ ಡೈಲಾಗ್ ಎಂದರೆ 'ತಿಕ ಮುಚ್ಲಾ , ಬಲ್ಲಾ', ಉಳಿದಂತೆ ಇವರುಗಳು ಆಡುತ್ತಿದ್ದ ಭಾಷೆ ನಂಜನಗೂಡು ಮತ್ತು ಚಾಮರಾಜ ನಗರದ ಕಡೆಯ slang ಗಳಾಗಿದ್ದವು. ಅವುಗಳ ಮಜಾ ತೆಗೆದು ಕೊಳ್ಳಬೇಕೆಂದರೆ ಆಡಿಯೋದಲ್ಲಿಯೇ ಕೇಳಬೇಕು!

ನನ್ನ ತಮ್ಮನಿಗೆ ಇವೆಲ್ಲಾ ಹೊಸ ಅನುಭವ, ಆದರೂ ಈ ಸ್ಥಿತಿಯಲ್ಲಿ ನಾನಿರುವ ಬಗ್ಗೆ ಅವನು ಹೆಚ್ಚಾಗಿ ಕಮೆಂಟ್ ಮಾಡಲಿಲ್ಲ. ಸಂಜೆ ಅವನನ್ನೂ ಹಾಸ್ಟೆಲ್ ಗೆ ಕರೆದು ಕೊಂಡು ಹೋಗಿ ಇಬ್ಬರು ಫ್ರಿ ಊಟ ಮಾಡಿ ಬಂದೆವು. ನಂತರ ಅವನು ಮೆಲ್ಲಗೆ ತನ್ನ ಪ್ಯಾಂಟಿನ ಒಳ ಜೋಬಿಗೆ ಕೈ ಹಾಕಿ ಮಡಿಸಿಟ್ಟಿದ್ದ 50 ರೂಪಾಯಿಯ 6 ಗರಿಗರಿ ನೋಟುಗಳನ್ನು ತೆಗೆದು, ನನ್ನ ಕೈಗಿತ್ತು, 'ಅಪ್ಪಯ್ಯ ಕೊಟ್ಟು ಕಳಿಸಿತು' ಎಂದ. ಅನೇಕ ತಿಂಗಳುಗಳಿಂದ ಅಷ್ಟು ದುಡ್ಡನ್ನು ನೋಡಿಯೇ ಇರಲಿಲ್ಲ. ನನ್ನ ಕಣ್ಣುಗಳು ಅರಳಿ ಹೋದವು. ಅವುಗಳನ್ನು ನನ್ನ ಪ್ಯಾಂಟಿನ ಒಳ ಜೋಬಿನಲ್ಲಿ ಇಟ್ಟು, ನಾಳೆ ಕಾಲೇಜ್ ಫೀಸ್ ಕಟ್ಟುವುದು ಮತ್ತು, ಒಂದು ಜೊತೆ ಸೆಕೆಂಡ್ ಹ್ಯಾಂಡ್ ಬಟ್ಟೆ ಕೊಳ್ಳುವುದರ ಬಗ್ಗೆ ಯೋಚಿಸಿದೆ. ಅವತ್ತು ರಾತ್ರಿ ಚಾಮರಾಜ ಜೋಡಿ ರಸ್ತೆಯ ಬಳಿ ಇರುವ ಶಾಂತಲಾ ಥಿಯೇಟರ್ ನಲ್ಲಿ ಯಾವುದೊ ಸಿನಿಮಾಕ್ಕೆ ಹೋಗಿ ಬಂದ ನೆನಪು. ಮರುದಿನ ನಾವಿಬ್ಬರು ಗಾರೆ ರಾಜು ಮನೆಗೆ ಹೋಗಿ, ಅಲ್ಲಿಂದ ಅವನನ್ನು ಊರಿಗೆ ಕಳುಹಿಸಿಕೊಟ್ಟೆ.

ಅಪ್ಪ ಕಳುಹಿಸಿ ಕೊಟ್ಟ 300 ರೂಪಾಯಿಯನ್ನು ಜೋಪಾನವಾಗಿ ಖರ್ಚು ಮಾಡಬೇಕಿತ್ತು. ಮುಂದೆ ಯಾವಾಗ ಹಣ ನನ್ನ ಕೈಗೆ ಸಿಗುತ್ತದೆ ಗೊತ್ತಿರಲಿಲ್ಲ. ಅವತ್ತು ಮದ್ಯಾಹ್ನ ಮೈಸೂರಿನ ಗಾಂಧಿ ಸ್ಕ್ವೇರ್ ಗೆ ಹೋಗಿ ಸೆಕೆಂಡ್ ಹ್ಯಾಂಡ್ ಬಟ್ಟೆ ಮಾರುತ್ತಿದ್ದವನ ಬಳಿ 15 ರೂಪಾಯಿಗೆ ಒಂದು ಪಟ್ಟೆ ಪಟ್ಟೆ ಟೆರ್ರಿಕಾಟ್ ಶರ್ಟ್ ಮತ್ತು ಇಪ್ಪತ್ತು ರೂಪಾಯಿಗೆ ಕಂದು ಬಣ್ಣದ ಒಂದು ಟೆರ್ರಿವೂಲ್ ಪ್ಯಾಂಟ್ ಕೊಂಡುಕೊಂಡೆ. ಮರುದಿನ ಮಹಾರಾಜಾ ಕಾಲೇಜಿಗೆ ಹೋಗಿ ಎರಡು ಮೂರು ತಿಂಗಳಿಂದ ಉಳಿದಿದ್ದ ಫೀಸ್ ಮತ್ತು ದಂಡ ಸೇರಿಸಿ ಕಟ್ಟಿದೆ. ಉಳಿದ ದುಡ್ಡನ್ನು ಭದ್ರವಾಗಿ ಪ್ಯಾಂಟಿನ ಒಳ ಜೋಬಿನಲ್ಲಿಟ್ಟು ಕೊಂಡೆ. ಮುಂದೆ ಹೇಳುವುದು ಬಹಳಷ್ಟು ಇದೆ.....ಆಗಾಗ ಹೇಳುತ್ತಾ ಬರೆಯುತ್ತಿರುತ್ತೇನೆ. ಹೊಟ್ಟೆ ಚುರುಗುಟ್ಟತೊಡಗಿದಾಗ ಈ ಆಲೋಚನೆಗಳು ಕಣ್ಣ ಮುಂದೆ ಆಗಾಗ ಹಾದು ಹೋಗುತ್ತಿರುತ್ತವೆ. ಕುಕ್ಕರ ಹಳ್ಳಿ ಕೆರೆ ದಂಡೆಯ ಮೇಲೆ ಒಬ್ಬನೇ ಕುಳಿತುಕೊಂಡಾಗ ಈ ನೆನೆಪುಗಳಿಗೆ ಜೀವ ತುಂಬಿಕೊಳ್ಳುತ್ತದೆ. -ಮುಂದಿನ ಪುಟಕ್ಕೆ...

-ಮುಂದಿನ ಪುಟಕ್ಕೆ...

ಈ ಕತೆಯೊಳಗೆ...

ನಾನು ಸಿಟಿಯಲ್ಲಿದ್ದಾಗ ಲೇಬರ್ ಲಾ, ಮಾರ್ಕ್ಸಿಸಂ ಅಂತ ದವಲತ್ತು ಹೊಡೆಯುತ್ತಾ ‘ವಾಹ್ ಸಿದ್ರಾಮಯ್ಯ, ವಾಹ್ ಕಾಂಗ್ರೆಸ್ ಅಂತಿದ್ದವನು’ ಊರಿಗೆ ಹೋದ ಮೇಲೆ ಪ್ಯೂಡಲಿಸ್ಟ್ ಆಗುವ ಸ್ಥಿತಿ ತಲುಪುತ್ತಿದ್ದೇನೆ. ಎಂತಹಾ ವಿಪರ್ಯಾಸ ನೋಡಿ! ನಮ್ಮ ನಮ್ಮ ಅನುಭವದಂತೆ ಈ 'ಇಸಂ' ಗಳೂ ಬದಲಾಗುತ್ತಿರುತ್ತವೆ! ಹತ್ತಾರು ವರ್ಷ ಸಿಟಿಗಳಲ್ಲಿ ಬದುಕಿದ್ದ ನನ್ನಂತವನಿಗೆ ಈಗಿನ ಹಳ್ಳಿ ಬದುಕಿನ ಪರಿಚಯ ಮತ್ತೆ ಆಗತೊಡಗಿದೆ. ಸುಮ್ಮನೆ ಊರಿಗೆ ಹೋಗಿ ಪುಗಸಟ್ಟೆ ಊಟ ಹೊಡೆದು ಕೊಂಡು ಬರುವುದಾದರೆ ನೋಡುವುದಕ್ಕೆ ಒಂತರಾ ಮಜವಿರುತ್ತದೆ, ಆದರೆ ಇಲ್ಲಿರುವ ಜಮೀನು ಮತ್ತು ತೋಟವನ್ನು ರೂಡಿಸಿಕೊಂಡು ಹೋಗಲು 'ಕಿಬ್ಬಂದಿಯ ಕೀಲು ಮುರಿದಂತೆ ಸರ್ವಜ್ಞ' ಎಂಬಂತಾಗುತ್ತದೆ. ನೀವೆಷ್ಟೇ ಆರೋಗ್ಯವಂತರಾಗಿದ್ದರೂ ಇಂತಹಾ ಕೆಲಸಗಳಿಗೆ ಅನುಭವಗಳಿಲ್ಲದಿದ್ದರೆ 'ಏನೋ ಮಾಡಲು ಹೋಗಿ ಏನೋ ಆಯಿತು' ಎಂಬಂತಾಗುತ್ತದೆ. -ಕೊಡಗಿನ ಗಣೇಶ್

ಮುಂದಿನ ಕತೆ → ಕಾಫಿ ತೋಟದೊಳಗೆ

2️⃣. ಕಾಫಿ ತೋಟದೊಳಗೆ

ನಮ್ಮೂರಲ್ಲಿ ನೆರೆ ಮೀಟಿಂಗ್ ಇದೆ, ಅದನ್ನು ಅಟೆಂಡ್ ಮಾಡಬೇಕೆಂದು ನಮ್ಮೂರ ನೆರೆಯವರು ವಾಟ್ಸ್ ಆಪ್ ನಲ್ಲಿ ನೋಟಿಸ್ ಕಳಿಸಿದ್ದರು, ಅಲ್ಲದೆ ಕಾಫಿ ತೋಟದಲ್ಲಿ ಕೆಲವು ಕಡೆ ಕಾಫಿ ಗಿಡಗಳನ್ನು ನೆಟ್ಟು, ಕಾಫಿ ಗಿಡಗಳಿಗೆ ನೆರಳು ಕಡಿಮೆ ಇದ್ದಲ್ಲಿಗೆ ಹಾಕಿದ್ದ ಪಾನುವಾಳ ಗಿಡಗಳ ಅಧಿಕವಾಗಿ ಬೆಳೆದಿದ್ದ ಸಣ್ಣ ಸಣ್ಣ ರೆಂಬೆಗಳನ್ನು ಕತ್ತರಿಸ ಬೇಕಿತ್ತು. ಒಂದೇ ಗುಂಡಿಗೆ ಮೂರೂ ಹಕ್ಕಿ ಹೊಡೆದಂತೆ ಆಯಿತೆಂದು ಕರ್ನಾಟಕ ಕಾವೇರಿ ಬಂದ್ ಮರುದಿನ ಬೆಳಿಗ್ಗೆ ಊರಿನ ಕಡೆ ಹೊರಟೆ. ಮೈಸೂರಿಂದ ಹೊರಟು ಕುಶಾಲನಗರದಿಂದ ಬಲಗಡೆಗೆ ಮತ್ತು ಕೂಡಿಗೆ ಸೇತುವೆಯಿಂದ ಎಡಗಡೆಗೆ ಹೋದರೆ ನಮ್ಮೂರು ಸೋಮವಾರಪೇಟೆ ಸಿಗುತ್ತದೆ. ಯಾಕೋ ನಮ್ಮ ಹೊಸಗುತ್ತಿ ಶಂಕರನನ್ನು ನೋಡೋಣವೆಂದು ಕೂಡಿಗೆ ಸೇತುವೆಯಿಂದ ನೇರವಾಗಿ ಕಣಿವೆ, ಹೆಬ್ಬಾಲೆ ಕಡೆ ಗಾಡಿ ತಿರುಗಿಸಿದೆ.

ಶಂಕರನನ್ನು ನೋಡಿ ಹದಿನೈದು ವರ್ಷಗಳೇ ಕಳೆದಿದ್ದವು. ಎರಡು ತಿಂಗಳ ಹಿಂದೆ ಅವನ ಫೋನ್ ನಂಬರನ್ನು ಸ್ನೇಹಿತರೊಬ್ಬರಿಂದ ಪಡೆದು ಕೊಂಡು ಫೋನ್ ನಲ್ಲಿ ಮಾತನಾಡಿದ್ದೆ. ಅವನು ಸಕಲೇಶಪುರದಿಂದ ಊರಿಗೆ ವಾಪಾಸು ಬಂದ ಮೇಲೆ ಅವನ ಕತೆ ಏನಾಗಿದೆ ಎಂಬುದು ಸರಿಯಾಗಿ ಗೊತ್ತಿರಲಿಲ್ಲ. ಈಗ ಅವನನ್ನು ನೋಡಲು ಹೊರಟಾಗ ಮಳೆ ಬಾರಿಸ ತೊಡಗಿತ್ತು. ಫುಲ್ ಸ್ಪೀಡಲ್ಲಿ ಮುಂದಿನ ಗ್ಲಾಸ್ ಮೇಲಿನ ವೈಪರ್ ಆನ್ ಮಾಡಿದ್ದರೂ ರಸ್ತೆ ಕಾಣುವುದು ದುಸ್ತರವಾಗಿತ್ತು. ಹೆಡ್ ಲೈಟ್ ಹಾಕಿ ಡ್ರೈವ್ ಮಾಡತೊಡಗಿದೆ. ಕಣಿವೆಯಿಂದ ಮುಂದಕ್ಕೆ ರಸ್ತೆ ಬಂಬಾಟ್ ಆಗಿದ್ದನ್ನು ನೋಡಿ ನೂರು ಕಿಲೋಮೀಟರ್ ವೇಗದಲ್ಲಿ ಗಾಡಿಯನ್ನು ಚಚ್ಚಿದೆ. ಹೋಗುತ್ತಾ ಹೋಗುತ್ತಾ ಹೆಚ್ಚು ಕಡಿಮೆ ಹದಿನೈದು ಕಿಲೋಮೀಟರ್ ಮುಂದೆ ಸಾಗುತ್ತಿರುವಾಗ ಯಾಕೋ ಅನುಮಾನ ಬಂದು ರಸ್ತೆಯ ಎಡಕ್ಕೆ ಗಾಡಿ ನಿಲ್ಲಿಸಿ ಅಲ್ಲೇ ಮಳೆಯಲ್ಲಿ ಕೊಡೆ ಹಿಡಿದು ನಿಂತಿದ್ದವರೊಬ್ಬರನ್ನು ಕೇಳಿದೆ. ಈ ರಸ್ತೆ ಹಾಸನಕ್ಕೆ ಹೋಗುವ ಹೆದ್ದಾರಿ, ಶನಿವಾರ ಸಂತೆ ರಸ್ತೆ ಕಡೆ ಹೋಗಲು ಐದು ಕಿಲೋಮೀಟರ್ ವಾಪಾಸು ಹೋಗಿ ಬಲಗಡೆಗೆ ತಿರುಗಿಕೊಳ್ಳಿ ಎಂದರು.

ಈ ಶಂಕರನ ಮನೆ ಹೆಬ್ಬಾಲೆಯಿಂದ ಬಾಣಾವರ ಗೇಟ್ ಮುಖಾಂತರ ಶನಿವಾರ ಸಂತೆಗೆ ಹೋಗುವ ರಸ್ತೆಯಲ್ಲಿ ಮಾಲಂಬಿ ಎಂಬ ಸ್ಥಳದಿಂದ ಸ್ವಲ್ಪ ಮುಂದೆ ಇದೆ. ನಾನು ಈ ರಸ್ತೆಯಲ್ಲಿ ಹೋಗದೆ ಅನೇಕ ವರ್ಷಗಳಾಗಿವೆ. ಈಗ ಆ ರಸ್ತೆಯ ಪಕ್ಕದಲ್ಲೇ ಕುಶಾಲನಗರ ಹಾಸನ ಹೈವೇ ಆಗಿದ್ದರಿಂದ ಅಲ್ಲದೆ ವಿಪರೀತ ಮಳೆ ಬಿಳುತ್ತಿದ್ದುದರಿಂದ ದಾರಿ ತಪ್ಪಬೇಕಾಯಿತು. ನಾನು ನೂರು ಕಿಲೋಮೀಟರ್ ವೇಗದಲ್ಲಿ ಗಾಡಿಯನ್ನು ಚಚ್ಚುತ್ತಾ ಬಂದಿದ್ದಕ್ಕೆ ಸರಿಯಾದ ಶಾಸ್ತ್ರಿಯೂ ಆಯಿತು. ಗಾಡಿಯನ್ನು ಯುಟರ್ನ್ ತೆಗೆದುಕೊಂಡು ವಾಪಾಸು ಬಂದು -ಮುಂದಿನ ಪುಟಕ್ಕೆ...

ಅವರು ಹೇಳಿದ್ದ ರಸ್ತೆಯಲ್ಲಿ ಬಲಕ್ಕೆ ತಿರುಗಿದೆ. ಇದರ ಪಕ್ಕದಲ್ಲೇ ಕೊಡಗು ಯೂನಿವರ್ಸಿಟಿಯೂ ಇದೆ, ಅದರ ಬೋರ್ಡ್ ನೋಡಿದ ಮೇಲೆಯೇ ಗೊತ್ತಾಗಿದ್ದು, ಇಲ್ಲೊಂದು ಯುನಿವರ್ಸಿಟಿ ಇದೆ ಎಂಬುದು. ಇಲ್ಲಿ ನನ್ನ ತಮ್ಮನ ಅಳಿಯನ ಅಕ್ಕ ಪಾರ್ಟ್ ಟೈಮ್ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಳೆಂದು ಈ ಹಿಂದೆ ಹೇಳಿದ್ದಳು, ಆದರೆ ಅದು ಇಲ್ಲಿಯೇ ಇರುವುದು ಎಂಬುದು ಈಗ ಮನವರಿಕೆಯಾಯಿತು. ಒಂದು ಪ್ರದೇಶದಲ್ಲಿ ಮುಖ್ಯವಾಗಿ ಹಳ್ಳಿಗಳಲ್ಲಿ ಒಂದಷ್ಟು ವರ್ಷ ಓಡಾಡಲಿಲ್ಲವೆಂದರೆ ಅದು ಅನೇಕ ಬದಲಾವಣೆಗಳನ್ನು ಕಂಡು ಕೊಳ್ಳುತ್ತದೆ. ಕೊನೆಗೂ ಸರಿಯಾದ ರಸ್ತೆ ಸೇರಿ ಮಾಲಂಬಿ ತಲುಪುವ ವೇಳೆಗೆ ನನ್ನ ಎರಡು ಸಿಮ್ ಗಳು ಸಿಗ್ನಲ್ ಕಳೆದು ಕೊಂಡಿದ್ದವು.

ನನ್ನ ರಸ್ತೆ ಅವಾಂತರದ ಬರದಲ್ಲಿ ಹನ್ನೊಂದುವರೆಗೆ ತಲುಪ ಬೇಕಾಗಿದ್ದ ನಾನು ಒಂದು ಗಂಟೆಗೆ ಮಾಲಂಬಿ ತಲುಪಿದ್ದೆ. ಅಲ್ಲಿಂದ ನನಗೆ ಅನೇಕ ಬಾರಿ ಕಾಲ್ ಮಾಡಿ ಬೇಸತ್ತ ಶಂಕರ ನನಗಾಗಿ ಕಾದೂ-ಕಾದೂ ಕೊನೆಗೆ ಸ್ವಲ್ಪ ದೂರದಲ್ಲಿದ್ದ ಅವನ ಮನೆಗೆ ಹೊರಟು ಹೋಗಿದ್ದ. ನಾನು ಮಾಲಂಬಿಯಲ್ಲಿ ಅವನಿಗಾಗಿ ಹುಡುಕಾಟ ನಡೆಸಿ, ಸಿಗ್ನಲ್ ಕಳೆದು ಕೊಂಡ ನನ್ನ ಪೋಸ್ಟ್ ಪೇಯ್ಡ್ ವಡಾಪೋನ್-ಐಡಿಯಾ(Vi) ಗೆ ಉಗಿದು ಉಪ್ಪಿನ ಕಾಯಿ ಹಾಕುತ್ತಾ ಡ್ರೈವ್ ಮಾಡಿಕೊಂಡು ಅವನ ಮನೆಗೆ ಹೋದೆ. ಹದಿನೈದು ವರ್ಷಗಳ ಹಿಂದೆ ಗುಟುರು ಹಾಕುತ್ತಾ ಓಡಾಡುತ್ತಿದ್ದ ಶಂಕರನಿಗೂ, ಈಗ ನಾನು ನೋಡುತ್ತಿರುವ ಶಂಕರನಿಗೂ ಅಜಗಜಾಂತರ ವ್ಯತಾಸವಿತ್ತು. ಅಂದು ಎತ್ತರದ ದಿಣ್ಣೆಯಿಂದ ಕೆಳಕ್ಕೆ ಜಿಗಿಯುವ ಸಾಮರ್ಥ್ಯ ಹೊದಿದ್ದವನು, ಈಗ ಹೆಜ್ಜೆಗಳನ್ನು ಎಣಿಸುತ್ತಾ ನಡೆಯತೊಡಗಿದ್ದ.

'ಕಾಲಾಯ ತಸ್ಮೈ ನಮಃ' ಎನ್ನುತ್ತಾರಲ್ಲ ಹಾಗೆ, ಗುಂಡ್ಕಲ್ ತರ ಇದ್ದ ಶಂಕ್ರ ಎಲ್ಲಿ, ಈಗಿನ ಶಂಕ್ರ ಎಲ್ಲಿ! ಒಂದು ಕ್ಷಣ ಬೆರಗಾದರೂ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕಲ್ಲ! ಆದರೆ ಎಣ್ಣೆ ಹಾಕಿದರೆ ಮಾತ್ರ ಅದೇ ಗತ್ತಿನ ಮಾತು. ಎಲ್ಲಾ ರಾಜಕಾರಣಿಗಳಿಗೆ ಹಿಗ್ಗಾ ಮುಗ್ಗಾ ಬಯ್ಯೋದು ಮಾತ್ರ ಇನ್ನು ಬಿಟ್ಟಿಲ್ಲ. ಅವರ ಮನೆಯಿಂದ ಹೊರಟು ಅಲ್ದೂರು ಸಿದ್ದಾಪುರದ ಬಳಿ ಬಂದು ಹಳ್ಳಿ ಮನೆ ಹೋಟೆಲ್ ನಲ್ಲಿ ಎಣ್ಣೆ ಹೊಡೆಯುತ್ತಾ ಒಂದು ಘಂಟೆ ಮಾತನಾಡುತ್ತಾ ಕುಳಿತೆವು. ಅವನ ಮಾತುಗಳಲ್ಲಿ ಆಗಿನ ತೀವ್ರತೆಯಾಗಲಿ, ಆಳದ ಆಲೋಚನೆಗಳಾಗಲಿ ಅಷ್ಟಾಗಿ ಇರಲಿಲ್ಲ, ಆದರೂ ಅಲ್ಲಿಲ್ಲಿ ರಾಜಕೀಯದವರನ್ನು ಬಯ್ಯುವುದನ್ನು ಬಿಡಲಿಲ್ಲ! ಎಣ್ಣೆ, ಊಟ ಮುಗಿದ ಮೇಲೆ ಬಿಲ್ ಕೊಟ್ಟು ಹೊರಬಂದರೆ ಸುರಿಯುತ್ತಿರುವ ಮಳೆ. ನನ್ನ ಕಾರನ್ನು ಹೋಟೆಲ್ ಮುಂದೆಯೇ ನಿಲ್ಲಿಸಿದ್ದರಿಂದ ಬೇಗ ಹತ್ತಿಕೊಂಡು, ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಅವನ ಕಾರಿಗೆ ಡ್ರಾಪ್ ಕೊಟ್ಟು ಗುಡ್ ಬೈ ಹೇಳಿ ಸೋಮವಾರಪೇಟೆ ಕಡೆ ಹೊರಟೆ. ಊರ ದಾರಿ ಮಳೆಯಲ್ಲೂ ಮುದ ನೀಡುತ್ತಿತ್ತು. ಅಕ್ಕ ಪಕ್ಕದಲ್ಲಿ ಅರಣ್ಯ, ಅಲ್ಲಲ್ಲಿ ಕಾಫಿ ತೋಟ, ಸುರಿಯುತ್ತಿರುವ ಮಳೆ, ಕುಳಿರ್ ಗಾಳಿ, ಆಹಾ, ನಿಜವಾಗಿಯೂ ಆಹ್ಲಾದಕರವಾಗಿತ್ತು! ಛತ್ರಿ ಇದ್ದಿದ್ದರೆ ಮಳೆಯಲ್ಲಿ ಅನತಿ ದೂರ ನಡೆದು ಮಳೆಯನ್ನೂ ಆಹ್ಲಾದಿಸುತ್ತಿದ್ದೆನೇನೋ! ನನ್ನ ಸ್ಕಾರ್ಪಿಯೋದ ಡ್ಯಾಶ್ ಬೋರ್ಡ್ ನ ಪ್ಲೇಯರ್ ನಲ್ಲಿ ಬರುತ್ತಿದ್ದ ಜಾನ್ ಡೆನ್ವರ್ ನ ‘Take me home, country roads’ ಹಾಡನ್ನು ಆನಂದಿಸುತ್ತಾ ನಮ್ಮೂರು ಸೇರುವಾಗ ಸಂಜೆಯಾಗಿತ್ತು. -ಮುಂದಿನ ಪುಟಕ್ಕೆ...

ಮರುದಿನ ನಮ್ಮ ನೆರೆಯ (ಊರು) ಭೈರೇ ದೇವರ ಅಭಿವೃದ್ಧಿ ಮಂಡಳಿಯ ಮೀಟಿಂಗ್ ಹತ್ತು ಗಂಟೆಗೆ ಇತ್ತು. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಕಮ್ಯುನಿಟಿ ಹಾಲ್ ನಲ್ಲಿ ಜನ ಸೇರಿಕೊಂಡಿದ್ದರು. ಮೀಟಿಂಗ್ ಪ್ರಾರಂಭವಾದ ಮೇಲೆ ನೆರೆಯ ಸೆಕ್ರೆಟರಿ ಕಳೆದ ಮೀಟಿಂಗಿನ ವಿವರಗಳನ್ನು ಓದಿ ತಿಳಿಸಿದ. ಅದರ ಪ್ರಕಾರ ನನಗೆ ನೋಟಿಸ್ ಕಳಿಸಿದ್ದ ಬಗ್ಗೆ ಪ್ರಸ್ತಾಪವಾಯಿತು. ನನ್ನ ತಮ್ಮ ಬದುಕಿರುವವರೆಗೆ ನಮ್ಮದು ಒಂದೇ ಕುಟುಂಬದಂತೆ ನಡೆದುಕೊಂಡು ಹೋಗುತ್ತಿತ್ತು. ನನ್ನ ಆಸ್ತಿಯನ್ನು ಅವನೇ ರೂಡಿಸಿಕೊಂಡು ಹೋಗುತ್ತಿದ್ದುದರಿಂದ ನನ್ನನ್ನು ಪ್ರತ್ಯೇಕ ಕುಳ ಎಂದು ಊರಿಗೆ ತಿಳಿಸಿರಲಿಲ್ಲ. ಅವನು ಕಳೆದ ವರ್ಷ ತೀರಿಕೊಂಡ ಮೇಲೆ ಈ ವರ್ಷದ ಕಾಫಿ ಕೊಯ್ಲು ಮುಗಿದ ಮೇಲೆ ನನ್ನ ಪಾಲಿನ ಕಾಫಿ ತೋಟವನ್ನು ನಾನೇ ರೂಡಿಸಿಕೊಂಡು ಹೋಗಬೇಕೆಂದು ತಮ್ಮನ ಹೆಂಡತಿ ತಿಳಿಸಿದ್ದರಿಂದ ನಾನು ಅನಿವಾರ್ಯವಾಗಿ ಒಪ್ಪಿಕೊಳ್ಳ ಬೇಕಾಯಿತು.

ಅದರ ಪರಿಣಾಮವಾಗಿ ಇದೆ ವರ್ಷ ಮೇ ತಿಂಗಳಿನಿಂದ ನಾನು ಊರಿಗೆ ಹೋಗಿ ತೋಟದಲ್ಲಿ ಕೆಲಸ ಮಾಡಿಸ ತೊಡಗಿದೆ. ಇದು ಅನೇಕರ ಗಮನಕ್ಕೆ ಬಂದಿದ್ದರಿಂದ, ನನ್ನನ್ನು ನೆರೆಯ ಮೀಟಿಂಗಿಗೆ ಕರೆಸಿ ಭೈರೇ ದೇವರ ಅಭಿವೃದ್ಧಿ ಮಂಡಳಿಯ ಸದಸ್ಯನನ್ನಾಗಿ ಮಾಡಿಕೊಂಡರೆ ಅದರಿಂದ ಪ್ರತೀ ವರ್ಷ ಒಂದಷ್ಟು ದುಡ್ಡು ಮಂಡಳಿಗೂ ಸಿಗುತ್ತದೆಂಬ ಲೆಕ್ಕಾಚಾರ ಹಾಕಿ ಕೊಂಡಿದ್ದರು. ಈ ಬಗ್ಗೆ ನನಗೆ ತಿಳಿಸಿ ಮಂಡಳಿಗೆ ಸೇರಿಕೊಳ್ಳಬೇಕೆಂದು ತಿಳಿಸಿದರು. ನನಗೆ ಸೇರುವುದಕ್ಕೆ ಸಮ್ಮತಿಯೇನೋ ಇತ್ತು, ಆದರೆ ಅದಕ್ಕೆ 31000 ರೂಪಾಯಿಗಳನ್ನು ನೀಡಬೇಕೆಂದಾಗ ನನಗೆ ಸ್ವಲ್ಪ ಹೈ ಆಯಿತು. ಈ ಬಗ್ಗೆ ನಾನೂ ನನ್ನ ವಾದವನ್ನು ಮೀಟಿಂಗಿನಲ್ಲಿ ಮಂಡಿಸಿದೆ. ಅದು ಉಪಯೋಗಕ್ಕೆ ಬರಲಿಲ್ಲ. ನೆರೆಯ ಹಿರಿಯರೂ, ಕಿರಿಯರೂ ಒಕ್ಕೊರಲಿನಿಂದ 31000 ರೂಪಾಯಿಗಳನ್ನು ಕೊಡಲೇ ಬೇಕೆಂದು ಒತ್ತಾಯಿಸಿದರು. ಸುಂಕದವನ ಮುಂದೆ ಕಷ್ಟ ಹೇಳಿಕೊಂಡರೆ ಅವನು ಸುಮ್ಮನೆ ಬಿಟ್ಟಾನೇ! ಒಪ್ಪಿ ಕೊಂಡು 6000 ರೂಪಾಯಿಗಳನ್ನು ಟೋಕನ್ ಎಮೌಂಟ್ ಕೊಟ್ಟು ರಸೀತಿ ಪಡೆದು ಕೊಂಡೆ. 2024ರ ಫೆಬ್ರವರಿಗೆ ಇರುವ ಮೀಟಿಂಗಿನಲ್ಲಿ ಉಳಿದ 25000 ರೂಪಾಯಿಗಳನ್ನು ನೀಡಲು ಅನುಮತಿ ಕೊಟ್ಟರು. ನನ್ನ ತಮ್ಮ ಮಾಡಿದ ತಪ್ಪಿಗೆ ಈಗ ನಾನು ದಂಡ ತೆರಬೇಕಾದ ಪರಿಸ್ಥಿತಿ ಬಂದಿದ್ದಂತೂ ನಿಜ. ಅವನು ಪ್ರತೀ ವರ್ಷ ನನ್ನ ಬಾಬ್ತಿನ ಹಣ ಒಂದೋ ಎರಡೋ ಸಾವಿರಗಳನ್ನು ಕಟ್ಟಿಕೊಂಡು ಬಂದಿದ್ದರೆ, ನಾನು ಕೇವಲ ಈ ವರ್ಷದ ಹಣ ಒಂದೆರಡು ಸಾವಿರವಷ್ಟೇ ಕೊಟ್ಟಿದ್ದಿದ್ದರೆ ಮುಗಿದು ಹೋಗಿರುತ್ತಿತ್ತು. ಈ ವಿಷಯದಲ್ಲಿ ನಮ್ಮ ಅಣ್ಣಂದಿರು ತಲೆ ಹಾಕಲಿಲ್ಲ, ಹಾಕಿದರೆ ಅವರು ಸ್ವಂತದವರ ಪರ ವಹಿಸುತ್ತಾರೆಂಬ ಆಪಾಧನೆ ಬಂದಿರುತ್ತಿತ್ತು. ನನಗೆ ಆ ತಕ್ಷಣಕ್ಕೆ ಅಸಮಾಧಾನವಾದರೂ, ನಂತರ ಕೂಲಂಕುಷವಾಗಿ ಯೋಚಿಸಿದಾಗ ನಾನು ದಂಡ ಕಟ್ಟಿಯಾದರೂ ನೆರೆಯ (ಊರಿನ) ಸದಸ್ಯತ್ವ ಪಡೆದು ಕೊಂಡಿದ್ದು ಒಳ್ಳೆಯದೇ ಆಯಿತು ಎಂದು ಕೊಂಡೆ. ಇಲ್ಲದಿದ್ದರೆ ನಾನು ಊರಿಗೆ ಹೋದಾಗಲೆಲ್ಲ ಒಂಟಿಯಾಗಿ ಬಿಡುತ್ತಿದ್ದೆ. ಊರಿನ ಸದಸ್ಯನಲ್ಲದವನಾದ ಮೇಲೆ ಅವನ ಉಸಾಬರಿ ತಮಗೇಕೆ ಎನ್ನುವವರೇ ಹೆಚ್ಚು. ಊರಿನಲ್ಲಿದ್ದಾಗ ನನ್ನ ಕಷ್ಟ ಸುಖಗಳಿಗೆ ಯಾರೂ ಬರುವ ಸಾದ್ಯತೆಗಳಿರಲಿಲ್ಲ. ಊರೆಂದರೆ ಕಷ್ಟದಲ್ಲಿ ಒಬ್ಬರಿಗೊಬ್ಬರು ಹೆಗಲು ಕೊಟ್ಟು ನಿಲ್ಲ ಬೇಕಾಗುತ್ತದೆ. -ಮುಂದಿನ ಪುಟಕ್ಕೆ...

ಮರುದಿನ ಕಾಫಿ ತೋಟದಲ್ಲಿ ಬೋರರ್ ಬಂದು ಒಣಗಿ ಹೋಗಿದ್ದ ಕಾಫಿ ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ನೆಡ ಬೇಕಿತ್ತು. ಈ ಕೆಲಸ ಮಾಡಲು ಗಂಡಾಳುಗಳೇ ಬೇಕು. ಇದೇ ಮೇ ತಿಂಗಳಲ್ಲಿ ಕಾಫಿ ಸಸಿಗಳನ್ನೂ ಸಸಿ ಮಡಿಗಳಲ್ಲಿ ನೆಟ್ಟಿದ್ದರಿಂದ ಈಗ ಅವು ಬೆಳೆದು ಆರರಿಂದ ಎಂಟು ಕುಡಿ(ಎಲೆ)ಗಳು ಬಂದು ತೋಟದಲ್ಲಿ ನೆಡಲು ಸರಿಯಾಗಿ ಇದ್ದವು. ನಮ್ಮ ಹತ್ತಿರದ ಮನೆಯ ದಿಲಿ ಎನ್ನುವ ಹುಡುಗ ಕೆಲಸಕ್ಕೆ ಬಂದಿದ್ದರಿಂದ ಕಾಫಿ ಗಿಡಗಳನ್ನು ನೆಡುವ ಕೆಲಸ ಕೆಲಸ ಸರಾಗವಾಗಿ ಆಯಿತು.

ಹತ್ತಾರು ವರ್ಷ ಸಿಟಿಗಳಲ್ಲಿ ಬದುಕಿದ್ದ ನನ್ನಂತವನಿಗೆ ಈಗ ಹಳ್ಳಿ ಬದುಕಿನ ಪರಿಚಯವಾಗ ತೊಡಗಿತು. ಸುಮ್ಮನೆ ಊರಿಗೆ ಹೋಗಿ ಪುಗಸಟ್ಟೆ ಊಟ ಹೊಡೆದು ಕೊಂಡು ಬರುವುದಾದರೆ ಒಂತರಾ ಮಜವಿರುತ್ತದೆ, ಆದರೆ ಇಲ್ಲಿರುವ ಜಮೀನು ಮತ್ತು ತೋಟವನ್ನು ರೂಡಿಸಿಕೊಂಡು ಹೋಗಲು 'ಕಿಬ್ಬಂದಿಯ ಕೀಲು ಮುರಿದಂತೆ ಸರ್ವಜ್ಞ' ಎಂಬಂತಾಗುತ್ತದೆ. ನೀವೆಷ್ಟೇ ಆರೋಗ್ಯವಂತರಾಗಿದ್ದರೂ ಇಂತಹಾ ಕೆಲಸಗಳಿಗೆ ಅನುಭವಗಳಿಲ್ಲದಿದ್ದರೆ 'ಏನೋ ಮಾಡಲು ಹೋಗಿ ಏನೋ ಆಯಿತು' ಎಂಬಂತಾಗುತ್ತದೆ. ಇನ್ನು ನನ್ನಂತಹಾ ವ್ಯಕ್ತಿ ಹೃದಯ ಕುಯ್ಸಿಕೊಂಡು, ದಿನಕ್ಕೆ ಐದಾರು ಮಾತ್ರೆಗಳನ್ನು ನುಂಗಲೆ ಬೇಕಾದ ಸ್ಥಿತಿಯಲ್ಲಿ ತೋಟದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲದ ಮಾತು. ಆದರೂ ಉರುಳಿ ಬೀಳುತ್ತಾ, ತೆವಳಿ ಏಳುತ್ತಾ ನನ್ನದೆಂಬ ಆಸ್ತಿಯನ್ನು ನಾನು ಅಸ್ಥಿಯಾಗುವವರೆಗೂ ನೋಡಿ ಕೊಡು ಹೋಗ ಬೇಕಾದ ಸ್ಥಿತಿಯಲ್ಲಿ ಬದುಕುವ ಅನಿವಾರ್ಯತೆ ನನ್ನಂತೆ ಅನೇಕರಿಗೆ ಈ ಹಳ್ಳಿಗಳಲ್ಲಿದೆ. ಈಗ ಊರಲ್ಲಿ ಯಂಗ್ ಜನರೇಷನ್ ಬಹಳ ಕಡಿಮೆ ಇದ್ದಾರೆ. ಹೆಣ್ಣು ಮಕ್ಕಳೆಲ್ಲಾ ನಾಮುಂದು ತಾಮುಂದು ಅಂತ ಸಿಟಿ ಸೇರಿ ಬಿಟ್ಟಿವೆ, ಇರುವ ಗಂಡು ಮಕ್ಕಳಿಗೆ ಮದುವೆಗೆ ಹುಡುಗಿಯರು ಸಿಗದೆ ಗೋಳಾಡುತ್ತಿವೆ. ವ್ಯವಸಾಯವೆಂಬುದು ಸರಿಯಾಗಿ ನೋಡಿ ಕೊಳ್ಳುವವರು ಇಲ್ಲದಿದ್ದರೆ 'ನಿಮ್ಮಪ್ಪ ಸಾಯ, ನೀ ಸಾಯ, ನಿನ್ ಮನೆಯವರೆಲ್ಲಾ ಸಾಯ' ಅಂತ ಗಾದೆ ಮಾತನ್ನು ಮಾತು ಅಕ್ಷರಸಹಾ ಸತ್ಯವೆನಿಸಿದೆ. ಕಾಲ ಕಾಲಕ್ಕೆ ಮಳೆಯಾದರೂ ಅದನ್ನು ಸರಿಯಾಗಿ ರೂಡಿಸಿ ಕೊಂಡು ಹೋಗುವವರಿಲ್ಲದಿದ್ದರೆ ಅದೇನೋ 'ದೇವರೇ ಗತಿ' ಅಂತಾರಲ್ಲಾ ಹಾಗಾಗುತ್ತದೆ. ಹಳ್ಳಿಯ ಜನ ತಮ್ಮ ದು:ಖ, ಕೋಪ, ಅಸಹನೆಗಳನ್ನು ಒಡಲಲ್ಲಿ ತುಂಬಿ ಕೊಂಡು ಕತ್ತೆಯ ರೀತಿಯಲ್ಲಿ ದುಡಿದು ಜಗತ್ತಿನ ಹೊಟ್ಟೆ ತುಂಬಿಸುತ್ತಿದ್ದಾರೆ. ಅಂತಹವರಿಗೆ ನಾವು ಮನಸಾರೆ ವಂದಿಸಲೇ ಬೇಕು!

ನಾವು ಚಿಕ್ಕವರಿದ್ದಾಗ ಬಹಳಷ್ಟು ಕೆಲಸಗಳು 'ಕೂಡಾಳುಗಳಿಂದಲೇ' ಆಗಿ ಹೋಗುತ್ತಿತ್ತು, ನಂತರ ದೊಡ್ಡವರಾಗುವ ಕಾಲಕ್ಕೆ ಕೆಲಸದವರನ್ನು ಬಳಸಿ ಕೆಲಸ ಮಾಡಿಸುತ್ತಿದ್ದೆವು. ಆಗೆಲ್ಲಾ ಅವರುಗಳು ಹತ್ತಾರು ಕಿಲೋಮೀಟರ್ ನಡೆದುಕೊಂಡು ಬಂದು ಕೆಲಸ ಮಾಡಿ, ಸೌದೆ ಹೊರೆಗಳೊಂದಿಗೆ ಸಂಜೆ ಮನೆ ತಲುಪುತ್ತಿದ್ದರು. ಬೆಳಿಗ್ಗೆ ಒಂಬತ್ತು ಘಂಟೆಗೆ ಕೆಲಸ ಶುರು ಮಾಡಿದರೆ ಸಂಜೆ ಆರು ಘಂಟೆಯವರೆಗೂ ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಹತ್ತಿಪ್ಪತ್ತು ವರ್ಷಗಳಿಂದೀಚೆಗೆ ಜನರನ್ನು ದೂರದೂರಿಂದ ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ಕರೆದುಕೊಂಡು ಬಂದರೆ ಅವರು ಬೆಳಿಗ್ಗೆ ಹತ್ತು ಘಂಟೆಗೆ ಕೆಲಸ ಹಿಡಿದರೆ ಹನ್ನೊಂದೂವರೆಗೆ ಕಾಫಿ ಕುಡಿಯಲು -ಮುಂದಿನ ಪುಟಕ್ಕೆ...

ಅರ್ಧ ಘಂಟೆ ತೆಗೆದುಕೊಳ್ಳುತ್ತಾರೆ, ಮಧ್ಯಾಹ್ನ ಊಟಕ್ಕೆ ಒಂದು ಘಂಟೆ ಸಮಯ ತೆಗೆದು ಕೊಳ್ಳುತ್ತಾರೆ. ನಂತರ ಮೂರು ಘಂಟೆಗೆ ಹದಿನೈದು ನಿಮಿಷ ಎಲೆ ಅಡಿಕೆ ಅಂತ ಸಮಯ ಹೋಗುತ್ತದೆ. ಅದಾದ ಮೇಲೆ ಮೂರುವರೆ ಅಥವಾ ನಾಲ್ಕು ಘಂಟೆಗೆ ಕೆಲಸ ಕೈ ಬಿಡುತ್ತಾರೆ. ಆಗ ಅವರಿಗೆ ಬಿಸಿ ಬಿಸಿ ಕಾಫಿ ಒಮ್ಮೊಮ್ಮೆ ಅದರ ಜೊತೆಗೆ ಬಿಸ್ಕತ್ತು, ಬನ್ನು ಅಥವಾ ಇನ್ನೇನಾದರೂ ಕೊಟ್ಟು ಗಾಡಿ ಹತ್ತಿಸಿ ಅವರನ್ನು ಅವರಿರುವ ಸ್ಥಳಕ್ಕೆ ಬಿಟ್ಟು ಬರ ಬೇಕು. ಈಗಿನ ನನ್ನ ಅನುಭವದಲ್ಲಿ ಒಂದು ದಿನಕ್ಕೆ ಹೆಣ್ಣಾಳಿಗೆ 650 ರೂಪಾಯಿ ಮತ್ತು ಗಂಡಾಳಿಗೆ 750 ರೂಪಾಯಿ ಕೂಲಿ ನೀಡ ಬೇಕಾಗಿದೆ. ಒಂದು ಘಂಟೆಗೆ ಸರಾಸರಿ 130 ರಿಂದ 150 ರೂಪಾಯಿ ನಮ್ಮ ತಲೆ ಮೇಲೆ ಬಂದಿರುತ್ತದೆ. ಊರಲ್ಲಿ ಒಂದೇ ಬೈಗುಳ, 'ಈ ಸಿದ್ದರಾಮಯ್ಯ ಬಂದು ಜನರನ್ನೆಲ್ಲಾ ಸೋಮಾರಿಗಳನ್ನಾಗಿ ಮಾಡಿ ಬಿಟ್ಟ' ಎಂದು. ನಾನು ಸಿಟಿಯಲ್ಲಿದ್ದಾಗ ಲೇಬರ್ ಲಾ, ಮಾರ್ಕ್ಸಿಸಂ ಅಂತ ದವಲತ್ತು ಹೊಡೆಯುತ್ತಾ ‘ವಾಹ್ ಸಿದ್ರಾಮಯ್ಯ, ವಾಹ್ ಕಾಂಗ್ರೆಸ್ ಅಂತಿದ್ದವನು’ ಊರಿಗೆ ಹೋದ ಮೇಲೆ ಪ್ಯೂಡಲಿಸ್ಟ್ ಆಗುವ ಸ್ಥಿತಿ ತಲುಪುತ್ತಿದ್ದೇನೆ. ಎಂತಹಾ ವಿಪರ್ಯಾಸ ನೋಡಿ! ನಮ್ಮ ನಮ್ಮ ಅನುಭವದಂತೆ ಈ 'ಇಸಂ' ಗಳೂ ಬದಲಾಗುತ್ತಿರುತ್ತವೆ!

ತೋಟದಲ್ಲಿ ವರ್ಷಕ್ಕೆ ಮೂರು ಭಾರಿ ಕಳೆ ತೆಗೆಯುವುದು, ಒಮ್ಮೆ ಗಿಡ ಕಪಾತು ಮಾಡುವುದು, ಎರಡು ಬಾರಿ ಗಿಡ ಚಿಗುರು ತೆಗೆಯುವುದು, ಒಂದು ಭಾರಿ ಮರಗಪಾತು ಮಾಡುವುದು, ಒಂದು ಭಾರಿ ಪಾನುವಾಳ ಕೊನೆ ಕಡಿಯುವುದು, ಒಂದು ಭಾರಿ ಪಾನುವಾಳ ಚಿಗುರು ತೆಗೆಯುವುದು, ಎರಡು ಭಾರಿ ಸ್ಪ್ರೇ ಮತ್ತು ಎರಡು ಭಾರಿ ಗೊಬ್ಬರ ಹಾಕುವುದು, ಮಳೆಗಾಲದಲ್ಲಿ ಕಾಫಿ ಗಿಡಗಳಿಗೆ ಬೇಕಾದ ಕಡೆ ನೆರಳಿಗೋಸ್ಕರ ಪಾನುವಾಳ ಕೊಂಬೆಗಳನ್ನು ನೆಡುವುದು, ಬೋರರ್ ಬಂದು ಒಣಗುತ್ತಿರುವ ಗಿಡಗಳನ್ನು ಕಡಿದು ಹಾಕಿ ಸುಡುವುದು ಮತ್ತು ಅಲ್ಲಲ್ಲಿ ಹೊಸದಾಗಿ ಬೆಳೆಸಿದ ಕಾಫಿ ಸಸಿಗಳನ್ನು ನೆಡುವುದು ಸೇರಿದಂತೆ ಇನ್ನೂ ಅನೇಕ ಕೆಲಸಗಳನ್ನು ಮಾಡಲು ಒಂದು ಎಕರೆ ಕಾಫಿ ತೋಟಕ್ಕೆ 50 ಸಾವಿರದಿಂದ 70 ಸಾವಿರದ ವರೆಗೆ ಖರ್ಚು ಬರುತ್ತದೆ. ಮಳೆ ಚೆನ್ನಾಗಿ ನಡೆಸಿ ಕೊಟ್ಟರೆ ವರ್ಷಕ್ಕೊಮ್ಮೆ ಒಳ್ಳೆಯ ಪಸಲು ತೆಗೆಯ ಬಹುದು. ಕಾಫಿ ಹೂವಾಗುವ ಸಮಯಕ್ಕೆ ಮಳೆ ಕಡಿಮೆಯಾದರೆ ಪಸಲು ಸರಿಯಾಗಿ ಸಿಗುವುದಿಲ್ಲ, ಕಾಯಿ ಕಟ್ಟಿದ ಮೇಲೆ ಅತೀ ಮಳೆಯಾದರೆ ಕಾಯಿ ಅಥವಾ ಹಣ್ಣುಗಳು ಉದುರಿ ಹೋಗುತ್ತವೆ. ಆಗ ಕಾಫಿ ಪಸಲು ಕಡಿಮೆಯಾಗುತ್ತದೆ. ಪ್ರತೀ ವರ್ಷವೂ ಕಾಫಿ ಒಂದೇ ಸಮನೆ ಪಸಲು ನೀಡುವುದಿಲ್ಲ. ಅಂದಾಜು ಒಂದು ಏಕರೆ ಕಾಫಿ ತೋಟದಲ್ಲಿ 600 ಕೆಜಿ ಯಿಂದ 1200 ಕೆಜಿಯವರೆಗೆ ಉಪಯೋಗಿಸಲ್ಪಡುವ ಒಣಗಿದ ಕಾಫಿ ಬೀಜ ದೊರೆಯುತ್ತದೆ. ಈಗಿನ ಬೆಲೆಯಲ್ಲಿ 60ಸಾವಿರದಿಂದ 120 ಸಾವಿರ ಹಣ ಕೈ ಸೇರಿದರೂ ಖರ್ಚು ಕಳೆದು ಶೇಕಡಾ 10 ರಿಂದ 40 ರಷ್ಟು ಬೆಳೆದವನ ಕೈ ಸೇರುತ್ತದೆ. ಒಮ್ಮೊಮ್ಮೆ ಕೈಯಿಂದ ಕಳೆದು ಕೊಳ್ಳುವುದೂ ಇರುತ್ತದೆ.

ಒಂದೆರಡು ಏಕರೆ ಕಾಫಿ ತೋಟ ಇಟ್ಟುಕೊಂಡು ಕೆಲಸದವರ ಕೈಯಲ್ಲಿ ಕೆಲಸ ಮಾಡಿಸಿ ಜೀವನ ಸಾಗಿಸುವುದು ತುಂಬಾ ಕಷ್ಟ. ಕೂಲಿ ಕೊಟ್ಟು ಮಾಡಿಸಲಾರದೆ ಭತ್ತ ಬೆಳೆಯುವ ಗದ್ದೆಗಳಲ್ಲಿ ಶೇ. 70 ರಷ್ಟು ಪಾಳು ಬಿದ್ದಿವೆ. -ಮುಂದಿನ ಪುಟಕ್ಕೆ...

ಇದಕ್ಕೆ ಕಾರಣ ಒಂದು ಏಕರೆಯಲ್ಲಿ ಭತ್ತ ಬೆಳೆಯುವ ಖರ್ಚು ಅದರಲ್ಲಿ ಕೈಗೆ ಸಿಗುವ ಬೆಳೆಯ ಬೆಲೆಗಿಂತ ದುಪ್ಪಟ್ಟಾಗುತ್ತದೆ. ಹಳ್ಳಿಗಳಲ್ಲಿ ಈಗ ಸ್ವಂತ ದುಡಿಮೆಯ ಕೈಗಳು ತುಂಬಾ ಕಡಿಮೆ ಇರುವುದರಿಂದ ಬಹುತೇಕ ವ್ಯವಸಾಯದ ಕೆಲಸಗಳು ಕೂಲಿ ಕೊಟ್ಟೇ ಮಾಡಿಸ ಬೇಕು. ಅದಕ್ಕೆ ಹೇಳಿದ್ದು, 'ವ್ಯವಸಾಯ, ನಿಮ್ ಅಪ್ಪ ಸಾಯ, ನೀ ಸಾಯ, ನಿಮ್ ಮನೆ ಮಂದಿಯೆಲ್ಲಾ ಸಾಯ ಅಂತ! ಯಾರಿಗೇಳೋಣ ನಮ್ ಪ್ರಾಬ್ಲಮ್ಮು? -ಕೊಡಗಿನ ಗಣೇಶ್ (10/10/2023) -ಮುಂದಿನ ಕತೆಗೆ...

ಈ ಕತೆಯೊಳಗೆ...

ಶಿವನಿಗೆ ಒಂಟಿತನ ಕಾಡತೊಡಗಿದ್ದ ಸಂದರ್ಭದಲ್ಲಿ ಕೇಬಲ್ ಕನೆಕ್ಷನ್ ಕೊಡಲು ಹೋದ ಮನೆಯೊಂದರಲ್ಲಿ ಹುಡುಗಿಯೊಬ್ಬಳ ಪರಿಚಯವಾಯಿತು. ವಯಸ್ಸಿನಲ್ಲಿ ಇವರಿಬ್ಬರಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಶಿವ ಐವತ್ತರ ಆಸುಪಾಸಿನಲ್ಲಿದ್ದರೆ ಆ ಹುಡುಗಿಗಿನ್ನೂ ಇಪ್ಪತ್ಮೂರ ಹರೆಯ. ಮನೆಯಲ್ಲಿ ಹೆಂಡತಿ ಇದ್ದಾಳೆ, ಮಗನಿಗೆ ಮದುವೆ ಮಾಡಿ ಆಗಿದೆ, ಕಿರಿಯ ಮಗಳು ಮದುವೆಗೆ ಬಂದಿದ್ದಾಳೆ, ಆದರೂ ಇದು ಹೇಗೆ ಆಯಿತು ಎಂಬುದೇ ವಿಚಿತ್ರ. ಆದರೂ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಈ ಒರಟ ಶಿವನಿಗೆ ಆ ಹುಡುಗಿ ಹೇಗೆ ಬಿದ್ದಳು ಎಂಬುದೇ ಆಶ್ಚರ್ಯ. ಇವನು ಬೆಂಗಳೂರಿಗೆ ಬಂದಾಗಲೆಲ್ಲಾ ಅವಳಿಗಾಗಿ ಚೂಡಿದಾರ್ ಕೊಳ್ಳುವ ಮೊದಲು ಫೋನ್ ಮಾಡಿ ಬಣ್ಣ, ಸೈಜು ಕೇಳುತ್ತಿದ್ದ. ಆಕೆ ಬೇಡವೆಂದರೂ ಬಿಡದೆ ಕೊಂಡು ಕೊಳ್ಳುತ್ತಿದ್ದ. ಬಹುಶಃ ಇದೊಂದು ರೀತಿಯ ಪರಸ್ಪರ ಒಪ್ಪಿಗೆಯ ಗುಟ್ಟಿನ ಪ್ರೀತಿಯಾಯಂತೆ ಇದ್ದು, ವಿಷಯ ಯಾರಿಗೂ ಗೊತ್ತಿರಲಿಲ್ಲ. -ಕೊಡಗಿನ ಗಣೇಶ್

ಮುಂದಿನ ಕತೆ → ಶಿವಾಯ ನಮಃ

ಈ ಕತೆ ಹದಿನಾಲ್ಕು-ಹದಿನೈದು ವರ್ಷಗಳ ಹಿಂದೆಯೇ ಬರೆಯಬೇಕೆಂದು ನಿರ್ಧರಿಸಿದ್ದೆ. ಆದರೆ ಅದ್ಯಾಕೋ ನಿಂತು ಹೋಗಿತ್ತು. ಈ ಕತೆಯ ಎಳೆಗೆ ಸ್ಫೂರ್ತಿ ಪರಮೇಶ್ವರ ಗುರುಸ್ವಾಮಿ. ನಾನೊಂದು ಟಿವಿ ಸೀರಿಯಲ್ ತೆಗೆಯಬೇಕೆಂದು ಪರಮೇಶನೊಂದಿಗೆ ಮಾತನಾಡಿದಾಗ, ಅವನು ಮಾಡಬಹುದೆಂದು ಹೇಳಿದ್ದ. ಇದರ ಸಲುವಾಗಿ ನಾನು, ಪರಮೇಶ, ಸೂರಿ ಮತ್ತು ಮ್ಯಾಜಿಕ್ ಗಣೇಶ್ ಸೇರಿಕೊಂಡು ಲೋಕೇಶನ್ ನೋಡೋಣವೆಂದು ಹಾಸನ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಕೊಡಗಿನ ಕಡೆ ಒಂದಷ್ಟು ದಿನ ಸುತ್ತಾಡಿದ್ದೆವು. ಹಾಗೇ ಸಕಲೇಶಪುರದಲ್ಲಿ ಈ ಒಂದು ಘಟನೆಯ ಚಿತ್ರ ಕಣ್ಮುಂದೆ ಬಂದು ಆ ಕತೆಯ ಒಂದು ಸನ್ನಿವೇಶವನ್ನು ನಮ್ಮ ಉದ್ದೇಶಿತ ಟಿವಿ ಸೀರಿಯಲ್ ನಲ್ಲಿ ಬಳಸಿಕೊಳ್ಳಬಹುದೆಂದು ಪರಮೇಶ್ ಹೇಳಿದ್ದ. ಕಾರಣಾಂತರಗಳಿಂದ ನಮ್ಮ ಟಿವಿ ಸೀರಿಯಲ್ ಹೊಗೆ ಹಾಕಿಸಿ ಕೊಂಡಿತ್ತು. ಹಾಗಾಗಿ ಈ ವಿಷಯವನ್ನು ಬರೆಯ ಬೇಕೆಂಬ ಕಾತುರ ಅಲ್ಲಿಗೆ ಸ್ಥಬ್ದವಾಗಿತ್ತು. ಈಗ ಅದಕ್ಕೆ ಜೀವ ಬಂದಿದೆ.

3️⃣. ಶಿವಾಯ ನಮಃ

ಅವತ್ತು ಸಕಲೇಶಪುರದಲ್ಲಿ ಮಳೆ ರಚ್ಚೆ ಹಿಡಿದುಕೊಂಡು ಹೊಡೆಯುತ್ತಿತ್ತು. ಹೇಳಿ ಕೇಳಿ ಇದು ಮಲೆನಾಡು, ಕಾಡು, ಬೆಟ್ಟ, ಗುಡ್ಡಗಳು, ಕಾಫಿ ತೋಟಗಳೇ ಇಲ್ಲಿಗೆ ಭೂಷಣ. ಹಿಂದಿನ ರಾತ್ರಿಯ ಮಿಂಚು, ಗುಡುಗು, ವಿಪರೀತ ಗಾಳಿ ಮಳೆಯ ಕಾರಣದಿಂದ ಕೋಣೆಯಲ್ಲಿ ಮಲಗಿದ್ದ ಶಿವನಿಗೆ ಸರಿಯಾಗಿ ನಿದ್ದೆ ಹತ್ತುತ್ತಿರಲಿಲ್ಲ. ಬಾರಿನಲ್ಲಿ ಎಂಟು ಗಂಟೆಗೆ ಏರಿಸಿದ್ದ ಕ್ವಾಟ್ರು ತಲೆಯೊಳಗೆ ಮಾಯವಾಗತೊಡಗಿತ್ತು. ಪುನಃ ಏರಿಸೋಣವೆಂದರೆ ಯಾವುದೇ ಎಕ್ಸ್ಟ್ರಾ ಬಾಟಲಿಗಳು ರೂಮಿನಲ್ಲಿ ಸ್ಟಾಕ್ ಇರುತ್ತಿರಲಿಲ್ಲ. ಅಷ್ಟಕ್ಕೂ ಈ ಶಿವ ಎಣ್ಣೆಯನ್ನು ರೂಮಿಗೆ ತಂದು ಇಡುವುದು ಕಡಿಮೆ, ಯಾಕೆಂದರೆ ಇವನ ಜೊತೆಯಲ್ಲಿರುವ ಹುಡುಗರು ಇವನಿಗೆ ಪೂಸಿ ಹೊಡೆದು ಅವುಗಳನ್ನು ಗಂಟಲಿಗೇರಿಸಿ ಬಿಡುತ್ತಿದ್ದರು.

ಇವತ್ತು ಮಳೆ ಸ್ವಲ್ಪ ಜಾಸ್ತಿ ಇದ್ದುದರಿಂದ ಸ್ವಲ್ಪ ಬೇಗನೆ ರೂಮಿಗೆ ಹೋಗಬೇಕೆಂದು ಸಂಜೆ ಏಳೂವರೆಗೇ ಊಟಕ್ಕೆ ಬಂದರೂ ಕೇಬಲ್ ಕನೆಕ್ಸನ್ ಹಾಕಿಸಿಕೊಂಡವರು ಆಗಾಗ ಕಾಲ್ ಮಾಡುತ್ತಿದ್ದುದರಿಂದ ಅವರೆಲ್ಲರಿಗೂ ಸಮಾಧಾನ ಹೇಳಿ ಎಣ್ಣೆ ಹೊಡೆಯಲು ಪ್ರಾರಂಭಿಸುವಾಗ ಎಂಟು ಗಂಟೆ ಆಗೇ ಬಿಟ್ಟಿತ್ತು. ಊಟ ಮುಗಿಸಿ ಪ್ಯಾಕಿನಲ್ಲಿ ಉಳಿದಿದ್ದ ಎರಡು ಸಿಗರೇಟಿನಲ್ಲಿ ಒಂದನ್ನು ತುಟಿಗಿಟ್ಟು, ಮತ್ತೊಂದನ್ನು ಜರ್ಕಿನ್ ಒಳಗಿನ ಜೇಬಿನಲ್ಲಿಟ್ಟುಕೊಂಡು ರೂಮಿಗೆ ಹೊರಟ. ಜನರ ಕರೆಯಿಂದ ತಪ್ಪಿಸಿಕೊಳ್ಳಲು ಬಾರಿನಲ್ಲೇ ಮೊಬೈಲ್ ಸ್ವಿಟ್ಚ್ ಆಫ್ ಮಾಡಲು ಪ್ರಯತ್ನ ಪಟ್ಟ. ಕಾರಣ ಇದು ಅವನಿಗೆ ರಾತ್ರಿ ನೆಮ್ಮದಿಯಾಗಿ ನಿದ್ರೆ ಮಾಡಲು ಅನುಕೂಲವಾದರೂ ನಾಳೆ ಬೆಳಗ್ಗಿನ ಕತೆ ಏನು ಎಂಬುದೇ ಇವನ ಚಿಂತೆಯಾಗಿತ್ತು. ಈ ಯೋಚನೆಯಲ್ಲಿ ರೂಮಿನಲ್ಲಿ ಇಟ್ಟುಕೊಂಡಿದ್ದ ಪ್ಯಾಕಿಗೆ ಕೈ ಹಾಕಿ ಸಿಗರೇಟುಗಳನ್ನು ಸೇದಿ ಬಿಸಾಕಿದ. -ಮುಂದಿನ ಪುಟಕ್ಕೆ...

ಎದ್ದು ಬಾತ್ ರೂಮಿಗೂ ಹೋಗಿ ಬಂದ. ಕೊನೆಗೆ ಹಾಗೇ ಮಂಪರು ಬಂದಾಂತಾಗಿ ಕಣ್ಣು ಮುಚ್ಚಿದ. ಶಿವ ಒಮ್ಮೆ ನಿದ್ರೆಗೆ ಜಾರಿದನೆಂದರೆ ಕುಂಭಕರ್ಣನಂತೆಯೇ, ಯಾವ ಸದ್ದಿಗೂ ಏಳುವವನಲ್ಲ.

ಈ ಶಿವ ಪ್ರತೀ ದಿನ ಸಂಜೆ ಎಂಟು ಗಂಟೆಗೆ ಮೇಘನಾ ಬಾರಿಗೆ ಹೋಗಿ ಕುಳಿತುಕೊಂಡು ಒಂದು ಕ್ವಾಟ್ರು, ನೆಂಚಿಕೊಳ್ಳಲು ಬಂಗಡೆ ಮೀನು, ಅದು ಇಲ್ಲದಿದ್ದಾಗ ಚಿಕನ್ ಕಬಾಬು ಆರ್ಡ್ರು ಮಾಡುತ್ತಿದ್ದ. ಎಂಟು ಮುಕ್ಕಾಲರವರೆಗೆ ಎಣ್ಣೆಗೆ ನೀರು ಸೇರಿಸುತ್ತಾ ನಿದಾನವಾಗಿ ಕುಡಿದು ಮುಗಿಸುತ್ತಾ, ಊಟದ ಕೊನೆಗೆ ಇರಲಿ ಅಂತ ಅರ್ಧ ಪೆಗ್ ಇಟ್ಟುಕೊಳ್ಳುತ್ತಿದ್ದ. ಊಟಕ್ಕೆ ರೊಟ್ಟಿ, ಇಲ್ಲಾ ಚಪಾತಿ, ಅದಕ್ಕೆ ಮಟನ್ ಅಥವಾ ಚಿಕನ್ ಕರ್ರಿ, ಅನ್ನ ಮೊಸರು ಆರ್ಡ್ರು ಮಾಡುತ್ತಿದ್ದ. ಕರ್ರಿಯಲ್ಲಿ ಈರುಳ್ಳಿ, ಟೊಮೆಟೊಗಳಿದ್ದರೆ ಅವನ್ನು ಸೈಡಿಗೆ ಹೆರಕಿ ಹಾಕಿ ಊಟವನ್ನು ಸಂತೃಪ್ತಿಯಿಂದ ಮಾಡುತ್ತಿದ್ದ. ಹಿಂದೊಮ್ಮೆ ಚೆಕ್ ಮಾಡಿಸಿದಾಗ ಇವನಿಗೆ ಕಿಡ್ನಿ ಸಮಸ್ಯೆ ಇದೆಯೆಂದು ಡಾಕ್ಟ್ರು ಹೇಳಿದ್ದರಂತೆ. ಇದರಿಂದ ಇವನಿಗೆ ಎಲೆಕೋಸು, ಈರುಳ್ಳಿ, ಟೊಮೆಟೊ ಇಷ್ಟವಿದ್ದರೂ, ಕಿಡ್ನಿ ಸ್ಟೋನಿನ ಭಯದಿಂದ ಅವುಗಳಿಂದ ಆದೊಷ್ಟು ದೂರವಿರುತ್ತಿದ್ದ. ಊಟ ಮುಗಿಯುವ ಕೊನೇ ತುತ್ತಿಗೆ ಮೊದಲು ಉಳಿಸಿಟ್ಟುಕೊಂಡಿದ್ದ ಅರ್ಧ ಪೆಗ್ಗನ್ನು ಏರಿಸಿ ಕೈ ತೊಳೆದು ರೂಮಿಗೆ ಹೊರಡುತಿದ್ದ. ಇವನ ರಾತ್ರಿ ಊಟ ಮುಗಿಯುವ ಹೊತ್ತಿಗೆ ಹೆಚ್ಚು ಕಡಿಮೆ ಮುಕ್ಕಾಲು ಪ್ಯಾಕು ಸಿಗರೇಟು ಕಾಲಿಯಾಗುತ್ತಿತ್ತು. ಎಲ್ಲಾ ಮುಗಿಸಿ ಬಿಲ್ ಕೊಟ್ಟು ಕೇಬಲ್ ಮನೆ ಸೇರುವಾಗ ರಾತ್ರಿ ಒಂಬತ್ತೂವರೆ ಆಗುತ್ತಿತ್ತು. ಇವನಿದ್ದ ಮನೆ ಟೌನಿನ ಮದ್ಯೆ ಮೊದಲ ಮಹಡಿಯಲ್ಲಿತ್ತು. ಅದಕ್ಕೆ ಒಂದು ದೊಡ್ಡ ಹಾಲು, ಸಿಸ್ಟಮ್ ಗಳನ್ನು ಇಟ್ಟುಕೊಳ್ಳಲು ಮತ್ತೊಂದು ರೂಮು, ಬಾತ್ ರೂಮು, ಟಾಯ್ಲೆಟ್ ಗಳಿದ್ದವು. ಶಿವ ಹಾಲಿನಲ್ಲಿ ಮಲಗಿಕೊಳ್ಳುತ್ತಿದ್ದ. ಹಾಲಿನಲ್ಲಿ ಮೂರ್ನಾಲ್ಕು ಜನರು ಮಲಗುವಷ್ಟು ಜಾಗವಿದ್ದರೂ, ಇವನ ಗೊರಕೆ ಸದ್ದನ್ನು ತಾಳಲಾರದೆ ಅವನ ಹುಡುಗರು ಸಿಸ್ಟಮ್ ರೂಮಿನಲ್ಲೇ ಮಲಗಿ ಕೊಳ್ಳುತ್ತಿದ್ದರು.

ಬೆಳಿಗ್ಗೆ ಯಾರೋ ಬಾಗಿಲು ಬಡಿಯುತ್ತಿರುವ ಸದ್ದಿಗೆ ಅರ್ಧಂಬರ್ಧ ಎಚ್ಚರವಾಗಿ ಮನಸ್ಸೊಳಗೇ ಬಯ್ಯುತ್ತಾ ಬಾಗಿಲು ತೆರೆದ! ಎದುರಿಗಿದ್ದವರು ಭಯಬಿದ್ದವರಂತೆ ಏನು ಹೇಳಬೇಕೆಂದು ತೋಚದೆ ಆಮೇಲೆ ಬತ್ತೀವಿ ಕಣಣ್ಣಾ ಅಂತ ನಗುತ್ತಾ ಮೆಟ್ಟಿಲಿಳಿದು ದಡ ದಡಾಂತ ಇಳಿದು ಹೋದರು. ಈ ಶಿವನಿಗೆ ತಲೆ ಬುಡ ಒಂದೂ ಅರ್ಥವಾಗಲಿಲ್ಲ. ಪೂರ್ಣ ಎಚ್ಚರವಾದಂತವನಾಗಿ ಅಭ್ಯಾಸ ಬಲದಂತೆ ರಾತ್ರಿ ಉಟ್ಟಿದ್ದ ಲುಂಗಿಯನ್ನು ಎತ್ತಿಕಟ್ಟಲು ತಡಕಾಡಿದ. ಅದು ಕೈಗೆ ಸಿಗಲೇ ಇಲ್ಲ! ಯಾಕೋ ತನ್ನ ಮಂಡಿಯ ಕಡೆ ನೋಡುತ್ತಾನೆ, ಲುಂಗಿಯೇ ಮಾಯ! ಹಾಸಿಗೆಯಿಂದ ಎದ್ದು ಬರುವಾಗ ಅವನ ಟಿ ಶರ್ಟ್ ಮಾತ್ರ ಮೈಮೇಲಿತ್ತು, ಲುಂಗಿ ಹಾಸಿಗೆಯ ಬೆಡ್ ಶೀಟ್ ಒಳಗೆ ಬಿದ್ದುಕೊಂಡಿತ್ತು. ಇವನ ಸೊಂಟದ ಕೆಳಗಿನ ಮಹಿಮೆ ಬಾಗಿಲು ಬಡಿದವರಿಗೆ ಅನಾವರಣವಾಗಿತ್ತು! ಒಳಗಿನಿಂದ ಬಾಗಿಲು ಮುಚ್ಚಿ ಓಡಿ ಬಂದವನೇ ಲುಂಗಿ ತೆಗೆದು ಉಟ್ಟುಕೊಂಡ. ಇವನ ಆರ್ದಂಬರ್ದ ನಿದ್ರೆ ಇಳಿದು ಹೋಗಿ 'ಅಯ್..ಯ್ಯೋ' ಅಂತ ಮುಂದಲೆ ಮೇಲೆ ತಾನೇ ತಟ್ಟಿಕೊಂಡ. -ಮುಂದಿನ ಪುಟಕ್ಕೆ...

ಅವತ್ತು ಭಾನುವಾರವಾದುದರಿಂದ ಸ್ವಲ್ಪ ಹೊತ್ತು ಮಲಗಲು ಹಾಸಿಗೆ ಮೇಲೆ ಮತ್ತೆ ಬಿದ್ದುಕೊಂಡ. ಹುಡುಗರು ಬೇರೆ ನಿನ್ನೆಯೇ ಊರಿಗೆ ಹೋಗಿದ್ದಾರೆ, ಇಷ್ಟು ಬೇಗ ಎದ್ದು ಏನು ಮಾಡುವುದು ಎಂದು ಯೋಚಿಸಿ ಕಣ್ಣು ಮುಚ್ಚಿದ, ನಿದ್ರೆ ಹತ್ತಲಿಲ್ಲ. ಸಿಗರೇಟಿಗಾಗಿ ತಲೆದಿಂಬಿನ ಪಕ್ಕ ತಡಕಾಡಿದ, ಖಾಲಿಯಾದ ಪ್ಯಾಕ್ ಮಾತ್ರ ಅಲ್ಲಿತ್ತು. ಅಲ್ಲಿಂದ ಎದ್ದವನೇ ಲುಂಗಿ ಉಟ್ಟುಕೊಂಡಿರುವುದನ್ನು ಖಚಿತಪಡಿಸಿಕೊಂಡು, ಟಿ ಶರ್ಟ್ ಮೇಲೆ ಜರ್ಕೀನು ಹಾಕಿಕೊಂಡು ಮನೆಯ ಕೆಳಗಿನ ಗೂಡಂಗಡಿಗೆ ಹೊರಟ. ಮಳೆ ಕಡಿಮೆಯಾದರೂ ಸಣ್ಣದಾಗಿ ಜಿನುಗುತ್ತಿತ್ತು. ಜರ್ಕೀನಿನ ಮೇಲ್ಬಾಗದಲ್ಲಿದ್ದ ಕ್ಯಾಪನ್ನು ತೆರೆದು ತಲೆಗೆ ತೊಡಿಸಿಕೊಂಡು ಅಂಗಡಿಗೆ ಬಂದು ಒಂದು ಪ್ಯಾಕ್ ಸ್ಮಾಲ್ ಕೊಂಡು ಕೊಂಡ. ಅಲ್ಲೇ ಪ್ಯಾಕ್ ಓಪನ್ ಮಾಡಿ ಲೆಕ್ಕ ಬರ್ಕೊ ಅಂತ ಅಂಗಡಿಯವನಿಗೆ ಹೇಳುತ್ತಾ ಸಿಗರೇಟೊಂದನ್ನ ತುಟಿಗಿಟ್ಟು ಅಲ್ಲೇ ಹತ್ತಿಸಿಟ್ಟಿದ್ದ ತೆಂಗಿನ ನಾರಿನ ಬೆಂಕಿಗೆ ಸಿಗರೇಟಿನ ತುದಿಯನ್ನು ತಾಗಿಸಿ ಒಂದು ದಮ್ಮು ಎಳೆದು ಮೂಗು ಬಾಯಿಗಳಿಂದ ಹೊಗೆಯನ್ನು ಉಗಿಬಂಡಿಯಂತೆ ಹೊರಗೆ ಬಿಟ್ಟ.

ಈ ಗೂಡಂಗಡಿಯಲ್ಲಿ ಟೀ, ಕಾಫಿ, ಹಾಲಿನ ಜೊತೆ ಬೀಡಿ, ಸಿಗರೇಟು, ಪಾನ್, ಬ್ರಷ್ಷು, ಪೇಸ್ಟು, ಪೆನ್ನು, ಕೋಮ್, ಬ್ಲೇಡು, ಬಿಸ್ಕೇಟ್, ಬನ್ನು, ಹೀಗೆ ಹತ್ತು ಹಲವು ಚಿಲ್ಲರೆ ಸಾಮಾನುಗಳು,ಜೊತೆಗೆ ಕ್ರೋಷಿನ್, ಸಾರಿಡಾನ್ ಮಾತ್ರೆಗಳು ದೊರೆಯುತ್ತಿದ್ದವು. ಶಿವ ಅರ್ಧ ಸಿಗರೇಟು ಸೇದಿ ಮುಗಿಸಿದ ಮೇಲೆ ಯಾಕೋ ಟೀ ಕುಡಿಯಬೇಕೆನಿಸಿ, ತನ್ನ ಮಾಮೂಲಿ ಟೀ ಅಂಗಡಿಗೆ ಹೋಗಲಾರದ ಸೋಮಾರಿತನಕ್ಕೆ 'ಒಂದ್ ಟೀ ಕೊಡು' ಅಂತ ಕೇಳಿ ಕುಡಿದು, ಕೈಯಲ್ಲಿದ್ದ ಸಿಗರೇಟನ್ನು ಮುಗಿಸಿ, ಸಿಗರೇಟಿನ ಬುಡವನ್ನು ಪಕ್ಕಕ್ಕೆ ಎಸೆದ. ಎಸೆದ ಸಿಗರೇಟಿನ ಬುಡದಿಂದ ಹಾವು ಪುಂಗಿಯ ಮೋಡಿಗೆ ಹೆಡೆಯೆತ್ತಿ ಅಲುಗಾಡಿದಂತೆ ಹೊಗೆಯಾಡುತ್ತಲಿತ್ತು. ಈ ಶಿವನಿಗೆ ಟೌನಿನಲ್ಲಿ ಅನೇಕ ಅಂಗಡಿಗಲ್ಲಿ ಲೆಕ್ಕ ಬರೆಸುವ ಖಯಾಲಿ ಇತ್ತು. ಜೋಬಲ್ಲಿ ದುಡ್ಡಿದ್ದರೂ, ಆಮೇಲೆ ಕೊಟ್ಟರಾಯಿತು ಎಂಬ ಉಡಾಫೆತನ! ಈ ಟೌನಲ್ಲಿ ಇವನಂತಹವರು ಬಹಳ ಮಂದಿ ಇದ್ದಾರೆ. ಬಹುತೇಕರು ಲೆಕ್ಕ ಚುಕ್ತಾ ಮಾಡುವವರೇ, ಆದರೆ ಕೆಲವರು ಕೈ ಎತ್ತುವವರೂ ಇದ್ದಾರೆ. ಬಿಸಿನೆಸ್ಸೇ ಹಾಗೆ! ಆದರೆ ಶಿವ ಮಾತ್ರ ಲೆಕ್ಕದಲ್ಲಿ ಪಕ್ಕಾ, ಯಾರಿಗೂ ಮೋಸ ಮಾಡುವುದಿಲ್ಲ, ಯಾರನ್ನೂ ತಿನ್ನಲು ಬಿಡುವುದಿಲ್ಲ...'ನಾ ಖಾವುಂಗ, ನಾ ಖಾನೇ ದುಂಗಾ' ಅಂತಾರಲ್ಲ ಹಾಗೆ!

'ಟೀದೂ ಬರ್ಕಂಡಿರು' ಅಂತ ಹೇಳಿ ಸಿಗರೇಟಿನ ಬುಡದಿಂದ ಬರುತ್ತಿದ್ದ ಹೊಗೆಯನ್ನು ಹಾಗೇ ನೋಡುತ್ತಾ ಟೀ ಕುಡಿಯುತ್ತಿರಬೇಕಾದರೆ ಶಿವನ ಬೆನ್ನಿನ ಮೇಲೆ ಯಾರೋ ಮೆತ್ತಗೆ ಗುದ್ದಿದರು, ತಿರುಗಿ ನೋಡಿದರೆ ಬೆಳಿಗ್ಗೆ ಬಾಗಿಲು ತೆರೆಸಿದ ಗಿರಾಕಿಗಳು. ಅವರ ಮುಖದ ಮೇಲೆ ಮಂದಹಾಸ ಮೂಡಿತ್ತು. ಅದನ್ನು ಹೆಚ್ಚು ಹೊರಹಾಕದೆ, ‘ಶಿವಣ್ಣಾ, ನಿನ್ನೆ ರಾತ್ರಿಯಿಂದ ಕೇಬಲ್ ಬರ್ತಾ ಇಲ್ಲ, ಇವತ್ತು ಭಾನುವಾರವಲ್ವಾ, ಮನೇಲಿ ಎಲ್ಲರ್ಗೂ ಟಿವಿ ಬರ್ತಾ ಇಲ್ಲಾಂದ್ರೆ ಸುಮ್ನೆ ಹೋಗಿ ಕೇಬಲ್ ಅಫಿಸಲ್ಲಿ ಕೇಳ್ಕೊ ಬನ್ನಿ ಅಂತ ಕಳುಸ್ತಾ ಇರ್ತಾರೆ' ಅಂದರು. 'ಆಯ್ತು ನೋಡ್ತೀನಿ, ನೀವ್ ಹೋಗಿರಿ' ಎಂದ ಶಿವ ಅವರನ್ನು ಕಳುಹಿಸಿಕೊಟ್ಟು ತನ್ನ ರೂಮಿಗೆ ಬಂದು, ಮತ್ತೊಂದು ಸಿಗರೇಟಿಗೆ ಕಡ್ಡಿ ಗೀಚಿ ಯೋಚಿಸತೊಡಗಿದ. ಹುಡುಗರು ಬೇರೆ ಇಲ್ಲ, ತಾನೇ ಹೋಗಿ ನೋಡಬೇಕು ಎಂದುಕೊಳ್ಳುತ್ತಾ ಲುಂಗಿ ಬಿಚ್ಚಿ ಪ್ಯಾಂಟ್ ಹಾಕಿಕೊಂಡು ತನ್ನ ಮಾಮೂಲಿ -ಮುಂದಿನ ಪುಟಕ್ಕೆ...

ಕೇಬಲ್ ರೂಟ್ ನೋಡಲು ಹೊರಟ. ಇನ್ನೇನು ಪರ್ಲಾಂಗು ದೂರ ನಡೆದಿಲ್ಲಾ ಅಷ್ಟೊತ್ತಿಗೆ ಜೋಬೊಳಗಿದ್ದ ಮೊಬೈಲಿನ ವೈಬ್ರೇಟರ್ ಜುಂಯ್ ಜುಂಯ್ ಅನ್ನೋಕೆ ಶುರು ಮಾಡ ತೊಡಗಿತು. ಆಗೆಲ್ಲಾ ಯಾರ ಬಳಿಯಲ್ಲೂ ಅಷ್ಟಾಗಿ ಅಂಡ್ರಾಯ್ಡ್ ಮೊಬೈಲ್ ಫೋನು ಇಲ್ಲದೆ ಇದ್ದುದರಿಂದ ಇವನ ಬಳಿಯೂ ಇದ್ದದ್ದು ನೋಕಿಯಾ 110 ಮಾಡೆಲ್. ಅದು ಕಡಿಮೆ ಬೆಲೆಯದ್ದು ಮತ್ತು ಬ್ಯಾಟರಿ ಲೈಫ್ ಚೆನ್ನಾಗಿ ಬರುತ್ತದೆ ಎಂದು ತುಂಬಾ ಜನರು ಈ ಮೊಬೈಲನ್ನೇ ಬಳಸುತ್ತಿದ್ದರು. ನಿನ್ನೆ ರಾತ್ರಿ ಮೊಬೈಲ್ ಆಫ್ ಮಾಡಲು ಹೋಗಿ ಎಣ್ಣೆ ಏಟಲ್ಲಿ ವೈಬ್ರೇಟರ್ ಮೋಡ್ ಗೆ ಹಾಕಿದ್ದ. ಮೊಬೈಲ್ ನೋಡಿದರೆ ಕೇಬಲ್ ಗಿರಾಕಿ!

ಮೊಬೈಲ್ ಎತ್ತಿ ಕೊಳ್ಳುವುದೋ ಬೇಡವಾ ಅಂತಾ ಯೋಚಿಸ ಬೇಕಾದರೆ ಎದುರುಗಡೆಯಿಂದ ಸಾಲಗಾರ ಸೋಮ ಬರ್ತಿದ್ದ, ಇವ್ನು ಶಿವನ ಹತ್ತಿರ ಆಗಾಗ ಎಣ್ಣೆ ಹೊಡೆಯೋಕೆ ದುಡ್ಡು ಕೇಳಿಕೊಂಡು ವಾಪಸು ಕೊಡ್ತಿರಲಿಲ್ಲ, ಅದರ ಬದಲು ಶಿವನಿಗೆ ಏನಾದರೂ ಬೇಕೆಂದಾಗ ಅದೂ ಇದು ತಂದು ಕೊಡಲು ಸಹಾಯ ಮಾಡುತ್ತಿದ್ದ. ಇವತ್ತು ಪುನಃ ದುಡ್ಡು ಕೇಳುತ್ತಾನೆಂದು ಫೋನು ಎತ್ತಿಕೊಂಡು ಸಾಲಗಾರ ಸೋಮನನ್ನು ಅವಾಯ್ಡ್ ಮಾಡೋಕೆ ಶುರು ಮಾಡ್ದ. ಆದ್ರೂ ಈ ಸೋಮ ಹಲವು ರೀತಿಗಳಲ್ಲಿ ಕೈ ಸನ್ನೆ ಮಾಡಿ ದುಡ್ಡು ಕೇಳೋಕೆ ಶುರು ಮಾಡಿದಾಗ, ಶಿವನೂ ಕೈ ಸನ್ನೆಯಿಂದಲೇ ಆಮೇಲ್ ಸಿಕ್ತಿನಿ ಅಂತ ಫೋನಿನಲ್ಲಿ ಬಿಸಿಯಾದ. ಸೋಮನೂ ನೋಡೋಷ್ಟು ನೋಡಿ ಇವತ್ತು ಮೂರ್ನಾಮ ಅಂದುಕೊಂಡು ಎಣ್ಣೆಗೆ ಏನು ಮಾಡ ಬೇಕೆಂದು ಲೆಕ್ಕಾಚಾರ ಹಾಕುತ್ತಾ ಹೊರಟು ಹೋದ. ಈ ಸೋಮ ಯಾವತ್ತೂ ಅವನ ದುಡ್ಡಿನಿಂದ ಎಣ್ಣೆ ಹೊಡೆದಿರೋ ಇತಿಹಾಸ ಇದ್ದ ಹಾಗೆ ಇಲ್ಲ. ಒಂದೋ ಶಿವನಂತಹವರು ಕೊಡಬೇಕು, ಇಲ್ಲವೆಂದರೆ ಬಾರುಗಳಲ್ಲಿ ಯಾರ್ಯಾರೋ ಕುಡಿದು ಸ್ವಲ್ಪ ಬಿಟ್ಟಿರೋದನ್ನ ಪುಕ್ಕಟೆಯಾಗಿ ಕುಡಿದು ತೂರಾಡುತ್ತಾ ಬರುತ್ತಿದ್ದ. ಅಲ್ಲಿನ ವಾತಾವರಣಕ್ಕೂ ಈ ಎಣ್ಣೆ ಏಟಿಗೂ ಒಳ್ಳೆ ಗಮ್ಮತ್ತಾಯ್ತಿತ್ತು. ಶಿವ ಮೊಬೈಲ್ ಎತ್ತಿದ ಕೂಡಲೇ ಆ ಕಡೆಯಿಂದ ಕೇಬಲ್ ಗಿರಾಕಿ ಒಂದೇ ಸಮನೆ ಬಯ್ಯತೊಡಗಿದ್ದ. 'ನಾವೇನು ತಿಂಗ್ಳ್ ತಿಂಗ್ಳು ಶ್ಯಾಟ ತರ್ಯಕಾ ದುಡ್ಡು ಕೊಡದು, ಕೇಬಲ್ ಬರ್ದೇ ಅರ್ಧ ದಿನ ಆಯ್ತಾ ಬಂತು, ಕನೆಕ್ಟ್ ಮಾಡಕಾಗಲ್ವಾ.....ಥು.. ಥು...ತೂ..' ಅಂತ ಒಂದೇ ಸಮನೆ ಕಿವಿ ಕೆಟ್ಟೋಗೋ ಹಾಗೆ ಬಯ್ಯ ತೊಡಗಿದ್ದ. ಶಿವನಿಗೂ ಕೋಪ ತಡೆಯಲಾಗದೆ 'ಥುಥು' ಅಂತ ನೆಲಕ್ಕೆ ಉಗಿದು, 'ಆಯ್ತು ಅದುನ್ನೇ ಮಾಡ್ತಾ ಇದ್ದೀನಿ, ಇನ್ನೊಂದ್ ಸ್ವಲ್ಪ ಹೊತ್ತಿಗೆ ಸರಿಯಾಗ ಬಹುದು' ಅಂತ ಎಂದಿನಂತೆ ಸುಳ್ಳಿನ ಭರವಸೆ ಕೊಟ್ಟು ಕಾಲ್ ಕಟ್ ಮಾಡಿ ಮುಂದೆ ಸಾಗಿದ.

ಹಾಗೇ ರಸ್ತೆಯ ಬದಿಯಲ್ಲಿ ನಡೆಯುತ್ತಾ ಹೋಗುತ್ತಿದ್ದಂತೆ ತನ್ನ ಕಣ್ಣನ್ನು ತಾನೇ ನಂಬದ ರೀತಿಯಲ್ಲಿ ಕಂಡ ದೃಶ್ಯಕ್ಕೆ ಶಿವನ ಜಂಘಾಬಲವೇ ಉಡುಗಿ ಹೋದಂತಾಯಿತು! ತನ್ನ ಟಿವಿ ಕೇಬಲ್ ಗೆ ಆಸರೆಯಾಗಿದ್ದ ಅನೇಕ ವಿದ್ಯುತ್ ಕಂಬಗಳು ಬಿದ್ದು ನೆಲ ಕಚ್ಚಿದ್ದರೆ, ಇನ್ನು ಕೆಲವು ಕಂಬಗಳು ಅರ್ಧಕ್ಕೆ ಭಾಗಿ ನಿಂತು ಕೊಂಡಿದ್ದವು. ಮರದ ಕೆಲವು ಕೊಂಬೆಗಳು ಮುರಿದು ಬಿದ್ದಿದ್ದರೆ ಇನ್ನು ಕೆಲವು ಮರದಲ್ಲೇ ನೇತಾಡುತ್ತಿದ್ದವು. ಆದರೆ ಮದ್ಯೆ ಮದ್ಯೆ ಇದ್ದ ಟೆಲಿಫೋನ್ ಕಂಬಗಳು ಮಾತ್ರ ಕೆಳಗೆ ಬೀಳದೆ ತುಂಡಾದ ಟೆಲೆಫೋನ್ ಮತ್ತು ಟಿವಿ ಕೇಬಲ್ ಗಳನ್ನು -ಮುಂದಿನ ಪುಟಕ್ಕೆ...

ನೇತಾಡಿಸಿಕೊಂಡು ನಿಂತಿದ್ದವು. ಶಿವನ ಪಿತ್ತ ನೆತ್ತಿಗೇರತೊಡಗಿತು. ಇವನ ಟಿವಿ ಕೇಬಲ್ ಗಳು ರೆಡಿಯಾಗಿ ಜನರು ಟಿವಿ ನೋಡುವ ವೇಳೆಗೆ ಮೂರ್ನಾಲ್ಕು ದಿನಗಳಾದರೂ ಬೇಕಾಗುತ್ತದೆ. ಇನ್ನು ಅಲ್ಲಿಯವರೆಗೆ ಟಿವಿ ಬರದಿದ್ದರೆ ಫೋನುಗಳ ಸುರಿಮಳೆ ಶಿವನನ್ನು ಹುಚ್ಚನನ್ನಾಗಿ ಮಾಡುತ್ತದೆ. ಕೇಬಲ್ ಗಳನ್ನು ಜಾಯಿಂಟ್ ಮಾಡಿ ನೆಲದ ಮೇಲೆ ಬಿಡುವ ಹಾಗಿಲ್ಲ, ಜನ ಅದನ್ನೂ ಕಟ್ ಮಾಡಿಕೊಂಡು ಹೋಗಿಬಿಡುತ್ತಾರೆ, ಇನ್ನು ಈ ಎಲೆಕ್ಟ್ರಿಕ್ ಡಿಪಾರ್ಟ್ಮೆಂಟಿನವರು ತಮ್ಮ ಕಂಬಗಳನ್ನು ನಿಲ್ಲಿಸಲು ಎಷ್ಟು ದಿನ ತೆಗೆದುಕೊಳ್ಳುತ್ತಾರೆಂಬುದು ಗೊತ್ತಿಲ್ಲ! ಶಿವನಿಗೆ ತಲೆ ಮೈ ಕೈ ಪರಚಿ ಕೊಳ್ಳುವಂತಾದರೂ ಅದೇ ರಸ್ತೆಯಲ್ಲಿ ಮುಂದೆ ಮುಂದೆ ನಡೆಯುತ್ತಾ ಇನ್ನೆಷ್ಟು ಕಂಬಗಳು ಬಿದ್ದಿರಬಹುದೆಂದು ದೃಷ್ಠಿ ಹಾಯಿಸ ತೊಡಗಿದ. ಆದರೆ ಶಿವನ ಕೇಬಲ್ ಗೆ ಅಸೆರೆಯಾಗಿದ್ದ ಕಂಬಗಳು ಮತ್ತು ಮರದ ಕೊಂಬೆಗಳು ಮಾತ್ರ ಇದರಲ್ಲಿ ತಮ್ಮದೇನೂ ತಪ್ಪಿಲ್ಲಾ, ಎಲ್ಲಾ ರಾತ್ರಿ ಸುರಿದ ಮಳೆಯದ್ದೇ ಅವಾಂತರ ಎಂಬಂತೆ ಹ್ಯಾಪ್ ಮೊರೆ ಹಾಕಿಕೊಂಡಿದ್ದವು!

ಹತಾಶೆ ಮತ್ತು ಕೋಪವನ್ನು ತಡೆಯಲಾರದೆ ಅಲ್ಲೇ ಬಿದ್ದಿದ್ದ ವಿದ್ಯುತ್ ಕಂಬಕ್ಕೆ ಜೋರಾಗಿ ಒದ್ದು, ಅದರ ಮೇಲೆ ತನ್ನ ಒಂದು ಕಾಲನ್ನಿಟ್ಟು, ಸಿಗರೇಟೊಂದನ್ನು ತೆಗೆದು ತುಟಿಗಿಟ್ಟು ಬೆಂಕಿ ಹಚ್ಚಿ ಮೂಗು ಬಾಯಿಗಳಲ್ಲಿ ಬುಸ ಬುಸಾಂತ ಹೊಗೆ ಬಿಡತೊಡಗಿದ. ಸಿಗರೇಟಿನ ಹೊಗೆಗೆ ಇವನ ಕೋಪ ಸ್ವಲ್ಪ ಇಳಿಮುಖವಾದಂತಾಯಿತು. ಇಲ್ಲಿ ಇದ್ದು ಮಾಡುವುದಾದರೂ ಏನು, ಒಂದೆರಡು ದಿನ ಏನೂ ಆಗುವುದಿಲ್ಲ, ಹೇಗೂ ಹೊಸದಾಗಿ ಕೇಬಲ್ ಎಳೆಯಲು ಬೇಕಾದ ಕೇಬಲ್ ಮತ್ತು ಅದರ ಜಾಯಿಂಟ್ ಗಳನ್ನು ಕೊಂಡು ಕೊಂಡು ಬರಲು ಬೆಂಗಳೂರಿಗೆ ಹೊರಡುವುದೆಂದು ನಿರ್ಧರಿಸಿ ಅಲ್ಲಿಂದ ರೂಮಿನ ಕಡೆ ಹೊರಟ. ಮಳೆ ಮತ್ತೆ ಜೋರಾಗುವ ಸೂಚನೆ ಕಂಡಿತು. ಅದೇ ವೇಳೆಗೆ ಲೈನ್ ಮ್ಯಾನ್ ರಂಗಪ್ಪ ಶಿವನಿಗೆ ಎದುರಾದ. 'ನಮುಸ್ಕಾರ ಶಿವಣ್ಣಾ, ಏನ್ ಕೇಬಲ್ ನೋಡಕ್ ಬಂದಿದ್ರಾ, ಮಳೆಗೆ ಹ್ಯಂಗ್ ಬಿದ್ದೋಗ್ಯವೇ ನೋಡಿ’ ಎಂದು ಹುಸಿನಗೆ ಬಿರಿದ! ಶಿವನ ಮನಸ್ಸಲ್ಲಿ ಅವನಿಗೆ ಎರಡು ಬಾರಿಸಬೇಕೆಂಬ ಕೋಪವಿದ್ದರೂ, ಹೊರಗೆ ತೋರಿಸಿಕೊಳ್ಳದೆ 'ಏನ್ಮಾಡದು, ನೀವು ಕಂಬ ಗಟ್ಯಾಗಿ ಹೂಳಿದ್ರೆ ಇಷ್ಟ್ ಸುಲುಭ್ದಲ್ಲಿ ಬಿದ್ದೋತವಾ' ಅಂತ ಸ್ವಲ್ಪ ಜೋರಾಗೆ ಹೇಳಿದ. 'ಅಲ್ಲ ಶಿವಣ್ಣಾ, ನಿನ್ ರಾತ್ರಿ ಬಿದ್ ಮಳಿಗೆ ಆ ಕಡೆ ಜೀವ ಇರೋ ಎರ್ಡ್ ಮರ್ಗಳೇ ಮಂಟ್ಯೋಗಿ ಬಿದ್ದವೇ, ಇನ್ನು ಈ ಕಂಬ್ಗಳ್ದು ಯಾವ ಲ್ಯಕ್ಕ ಹೇಳಿ' ಅಂದ. 'ನೋಡನ, ಎಷ್ಟ್ ಕಂಬ್ ಗಳು ಬಿದ್ದವೇಂತ ಜೆಇ ನೋಡ್ಕೋ ಬರೋಕೆ ಹೇಳವ್ರೆ, ಇರಿ ಬಂದೆ' ಅಂತ ಅಲ್ಲಿಂದ ಮುಂದೆ ಹೊರಟ.

ಲೈನ್ ಮ್ಯಾನ್ ರಂಗಪ್ಪ ಅತ್ತ ಹೋದ ಮೇಲೆ ಶಿವ ರೂಮಿಗೆ ಬಂದವನೇ ಸ್ನಾನ ಮಾಡಿ, ರೆಡಿಯಾಗಿ, ಬೆಂಗಳೂರಿನ ಎಸ್ಪಿ ರೋಡಲ್ಲಿರೋ ನಾಕೋಡ ಕೇಬಲ್ ಏಜೆನ್ಸಿಯಿಂದ ಏನೇನ್ ತರಬೇಕೆಂದು ಪಟ್ಟಿ ಮಾಡಿ ಅವರಿಗೆ ಫೋನ್ ಮಾಡಿದ. ಆ ಕಡೆಯಿಂದ, 'ಹಲೋ, ಯಾರು, ಏನ್ ಬೇಕಿತ್ತು' ಎನ್ನುತ್ತಿದ್ದಂತೆ, ಶಿವ ತನ್ನ ನಾಮದೇಯ ತಿಳಿಸಿ, ಸಂಜೆ ಐದು ಘಂಟೆಗೆ ಅಲ್ಲಿ ಬರುವುದಾಗಿಯೂ, ತನಗೆ ಈ ಎಲ್ಲಾ ವಸ್ತುಗಳು ಬೇಕು, ರೆಡಿ ಮಾಡಿ ಇಡುವಂತೆ ಲಿಸ್ಟನ್ನು ಓದಿ ಹೇಳಿದ. -ಮುಂದಿನ ಪುಟಕ್ಕೆ...

ಆ ಕಡೆ ಎಸ್ಪಿ ರೋಡಿನ ನಾಕೋಡ ಶಾಪಿನ ಹುಡುಗ ಒಂದೊಂದಾಗಿ ಬರೆದು ಕೊಂಡು, 'ನೀವ್ ಬನ್ನಿ ಶಿವಣ್ಣ, ಎಲ್ಲಾ ರೆಡಿ ಇರ್ತದೆ, ನೀವ್ ನೋಡಿದ್ ಮೇಲೆ ಪ್ಯಾಕ್ ಮಾಡಿ ಕೊಡ್ತೀವಿ' ಎಂದು ಕಾಲ್ ಕಟ್ ಮಾಡಿದ.

ಶಿವ ತಾನು ಬೆಂಗಳೂರಿಗೆ ಹೋಗುವ ವಿಷಯವನ್ನು ತನ್ನ ಹುಡುಗರಿಗೆ ತಿಳಿಸಲು ಫೋನ್ ಮಾಡಿದ, ಆದರೆ ಅಲ್ಲಿ ಸಿಗ್ನಲ್ ಇಲ್ಲದೆ ಫೋನ್ ರಿಂಗ್ ಆಗಲೇ ಇಲ್ಲ. ಈ ಹುಡುಗರು ಊರಿಗೆ ಹೋದರೆ ಫೋನಿಗೆ ಸಿಗುವುದು ಕಷ್ಟ! ರೂಮಲ್ಲೇ ಒಂದು ಚೀಟಿ ಬರೆದಿಟ್ಟು, ತನಗೆ ಬೇಕಾದ ಟವಲು, ಸೋಪು, ಪೇಸ್ಟು, ಬ್ರಸ್ಸು, ಡೈರಿ, ಬಟ್ಟೆಗಳನ್ನು ಕಿಟ್ ಬ್ಯಾಗಿಗೆ ಹಾಕಿಕೊಂಡು ಹೊರಟ. ಕೆಳಗಿನ ಗೂಡಂಗಡಿಯವನಿಗೆ ತಾನು ಬೆಂಗಳೂರಿಗೆ ಹೋಗುವುದಾಗಿಯೂ, ಹುಡುಗರು ಸಂಜೆ ಬಂದರೆ ವಿಷಯ ತಿಳಿಸುವಂತೆ ಹೇಳಿ ಎರಡು ಸ್ಮಾಲ್ ಸಿಗರೇಟ್ ಪ್ಯಾಕ್ ಕೇಳಿಕೊಂಡು ಲೆಕ್ಕ ಬರೆಸಿ ಅಲ್ಲಿಂದ ಬಸ್ ಸ್ಟ್ಯಾಂಡ್ ಪಕ್ಕದಲ್ಲೇ ಇದ್ದ ಸುಮಾ ಟಿಪ್ಪನಿಸ್ ಗೆ ತಿಂಡಿ ತಿನ್ನಲು ಹೊರಟ. 11 ಘಂಟೆಗೆ ಬೆಂಗಳೂರಿಗೆ ಡೈರೆಕ್ಟ್ ಬಸ್ ಇದ್ದುದರಿಂದ ಒಂದು ಉಪ್ಪಿಟ್ಟು ಮತ್ತು ಮಸಾಲೆ ದೋಸೆಗೆ ಆರ್ಡರ್ ಕೊಟ್ಟ ಶಿವ ಸಿಗರೇಟಿಗೆ ಬೆಂಕಿ ಹಚ್ಚಿದ. ಸಿಗರೇಟು ಮುಗಿಯುವುದರೊಳಗೆ ಉಪ್ಪಿಟ್ಟು ಬಂತು, ಅದನ್ನು ತಿನ್ನುತ್ತಿದ್ದಂತೆಯೇ ಸಪ್ಲೈಯರ್ ಮಸಾಲೆ ದೋಸೆ ತಂದಿಟ್ಟ. ಟೈಮಾಗುತ್ತೆ, ಟೀನೂ ತಂದಿಡು ಅಂತ ಹೇಳಿ ದೋಸೆಯನ್ನು ಮುಕ್ಕ ತೊಡಗಿದ. ಹನ್ನೊಂದು ಘಂಟೆಗೆ ಇನ್ನು ಹತ್ತು ನಿಮಿಷ ಬಾಕಿ ಇತ್ತು. ಟೀ ಕುಡಿದು ಬಿಲ್ ಕೊಟ್ಟು ಬಸ್ ಸ್ಟಾಂಡ್ ಕಡೆ ಹೋದ.

ಬಸ್ ಸ್ಟಾಂಡ್ ಅಲ್ಲಿ ಬಸ್ ರೆಡೀ ಇತ್ತು. ಡ್ರೈವರ್ ತನ್ನ ಸೀಟಲ್ಲಿ ಕುಳಿತು ಬಸ್ ಸ್ಟಾರ್ಟ್ ಮಾಡಿಕೊಂಡು ಪಾಂಯ್ಕ್ ಪಾಂಯ್ಕ್ ಅಂತ ಹಾರನ್ ಒತ್ತುತ್ತಾ ಹೊರಡುವ ತಯಾರಿಯಲ್ಲಿದ್ದ. ಈ ಡ್ರೈ ವರ್ ಗಳು ಬಸ್ಸು ಹೊರಡುವುದಕ್ಕೆ ಹತ್ತು ನಿಮಿಷ ಮೊದಲೇ ಗಾಡಿ ಸ್ಟಾರ್ಟ್ ಮಾಡಿ ಕೊಂಡಿತರುತ್ತಾರೆ. ಕಾರಣ, ಡೀಸೆಲ್ ಎಂಜಿನ್ ಗಳು ಐದತ್ತು ನಿಮಿಷ ಬಿಸಿಯಾದರೆ ಗಾಡಿ ಸಲೀಸಾಗಿ ಚಲಿಸಲು ಅನುಕೂಲವಾಗುತ್ತದೆ. ಎರಡನೆಯದು, ಬಸ್ಸು ಹೊರಡುವವರೆಗೂ ಕೆಲವು ಗಂಡಸರು ಸೀಟಿನ ಮೇಲೆ ಟವಲ್ ಹಾಕಿ ಬಸ್ಸಿನ ಹೊರಗಡೆ ದಮ್ಮು ಹೊಡೆಯುತ್ತಿರುತ್ತಾರೆ, ಅವರು ಬೇಗ ಹತ್ತಿ ಕುಳಿತು ಕೊಂಡರೆ ಹೊರಡುವಾಗ ಗಡಿಬಿಡಿಯಾಗುವುದಿಲ್ಲ. ಕಂಡೆಕ್ಟರ್ ಎಲ್ಲರಿಗೂ ಟಿಕೆಟ್ ಇಷ್ಯು ಮಾಡುತ್ತಿದ್ದ, ಸೀಟುಗಳೆಲ್ಲಾ ಭರ್ತಿಯಾಗಿದ್ದರಿಂದ ಡ್ರೈವರ್ ಗೆ ಎಡಬದಿಯಲ್ಲಿದ್ದ ಕಂಡೆಕ್ಟರ್ ಸೀಟಲ್ಲಿ ಶಿವ ಕುಳಿತು ಕೊಂಡ. ಈ ಶಿವ ಬೆಂಗಳೂರಿಗೆ ಇದೆ ಬಸ್ಸಲ್ಲಿ ಆಗಾಗ ಹೋಗುತ್ತಿದ್ದುದರಿಂದ ಕಂಡೆಕ್ಟರ್ ತುಂಬಾ ಪರಿಚಯವಾಗಿದ್ದ. ಮೂರ್ನಾಲ್ಕು ಬಾರಿ ಅವನ ಜೊತೆ ಎಣ್ಣೆಯನ್ನೂ ಹೊಡೆದಿದ್ದ. ಅಷ್ಟರಲ್ಲಿ ಒಂದಿಬ್ಬರು ಓಡಿಬಂದು ಬಸ್ಸು ಹತ್ತಿ ಸೀಟಿಗಾಗಿ ಹುಡುಕಾಡಿ, ಯಾವುದೇ ಸೀಟು ಖಾಲಿ ಇಲ್ಲದೆ ಇದ್ದುದರಿಂದ ಬಸ್ಸಿನಿಂದಿಳಿದು ಹೋದರು, ಅವರೂ ಬೆಂಗಳೂರಿಗೆ ಹೋಗ ಬೇಕಿತ್ತಂತೆ! ಹನ್ನೊಂದು ಘಂಟೆಗೆ ಸರಿಯಾಗಿ ಬಸ್ಸು ಬೆಂಗಳೂರಿಗೆ ಹೊರಟಿತು. -ಮುಂದಿನ ಪುಟಕ್ಕೆ...

ಈ ಶಿವನ ಜೀವನವೇ ಒಂದು ವಿಚಿತ್ರ, ಊರಲ್ಲಿ ಹೆಂಡತಿ ಮಕ್ಕಳು, ಅಣ್ಣ ತಮ್ಮಂದಿರ ತುಂಬು ಕುಟುಂಬ. ಈಗ ತಾನೇ ಇಬ್ಬರು ಅಣ್ಣಂದಿರು ಬೇರೆ ಮನೆ ಮಾಡಿ ಕೊಂಡಿದ್ದರೆ, ಶಿವ ಮತ್ತು ತಮ್ಮಂದಿರು ಒಂದೇ ಮನೆಯಲ್ಲಿದ್ದಾರೆ. ಶಿವನಿಗೆ ಇಬ್ಬರು ಮಕ್ಕಳು, ಇವನ ತಮ್ಮನಿಗೂ ಮದುವೆಯಾಗಿ ಎರಡು ಸಣ್ಣ ಮಕ್ಕಳಿವೆ. ಇನ್ನಿಬ್ಬರು ತಮ್ಮಂದಿರಿಗೆ ಇನ್ನೂ ಮದುವೆಯಾಗಿಲ್ಲ. ಇವರೆಲ್ಲಾ ಒಂದೇ ಮನೆಯಲ್ಲಿ ವಾಸವಿದ್ದಾರೆ. ಶಿವನ ತಂದೆ ತೀರಿಕೊಂಡು ಕೆಲವು ವರ್ಷಗಳಾಗಿದ್ದು, ವಯಸ್ಸಾದ ಅಮ್ಮ ಚೆನ್ನಾಗಿ ಓಡಾಡಿಕೊಂಡಿದ್ದಾರೆ. ಇವರ ಮನೆಯಲ್ಲಿ ಹಿರಿ ಅಣ್ಣಂದಿರ ಹೆಂಡತಿಯರು ಅಷ್ಟಾಗಿ ಓದಿಕೊಳ್ಳದೆ ಇದ್ದುದ್ದರಿಂದ ಪಿಯುಸಿ ಓದಿದ್ದ ಶಿವನ ಹೆಂಡತಿಯದ್ದೇ ಎಲ್ಲಾ ಕಾರುಬಾರು. ಶಿವನ ಮನೆಯ್ಲಲೂ ಎಲ್ಲರೂ ಹತ್ತನೇ ತರಗತಿಯ ಮೇಲೆಯೇ ಓದಿರುವವರು. ಶಿವ ಡಿಗ್ರಿ ಮಾಡುತ್ತಿದ್ದಾಗ ತಂದೆ ತೀರಿಕೊಂಡರೆಂದು ಓದು ಬಿಟ್ಟು ಮನೆಯ ಸಂಪೂರ್ಣ ಜವಾಬ್ಧಾರಿ ತೆಗೆದುಕೊಂಡಿದ್ದ. ಅಣ್ಣಂದಿರಿಬ್ಬರು ಸ್ವಲ್ಪ ಸ್ವಾರ್ಥಿಗಳಾದ್ದರಿಂದ ಮನೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಆದರೆ ಈ ಶಿವ ಒರಟನಾದರೂ, ಮನೆಯ ವಿಷಯ ಬಂದಾಗ ನಿಸ್ವಾರ್ಥದಿಂದ ಕೆಲಸ ಮಾಡತೊಡಗಿದ. ಅವನು ಜವಾಬ್ಧಾರಿ ತೆಗೆದುಕೊಂಡ ಮೇಲೆ ಮನೆ ಹೆಚ್ಚು ಹೆಚ್ಚು ಅಭಿವೃದ್ಧಿ ಕಂಡಿತು. ಲಕ್ಷಾಂತರ ರೂಪಾಯಿ ಸಾಲವನ್ನೂ ತೀರಿಸಿದ್ದ. ಅವನ ಸುಪರ್ದಿಯಲ್ಲಿ ಹತ್ತು ಎಕರೆಗಳಷ್ಟು ಜಾಗವನ್ನು ಖರೀದಿಸಿ ಆಸ್ತಿಯನ್ನು ವಿಸ್ತಾರ ಮಾಡಿಕೊಂಡರು. ಮನೆಯಲ್ಲಿ ಶಿವ ಮತ್ತು ಅವನ ಹೆಂಡತಿಯದೇ ಕಾರುಬಾರು ಹೆಚ್ಚಾದ್ದರಿಂದ ಹಿರಿಯಣ್ಣನ ಹೆಂಡತಿಗೆ ಅಸಮಾಧಾನ ಶುರುವಾಗಿ ಗಂಡನಿಗೆ ಚುಚ್ಚಿ ಕೊಟ್ಟಳು. ಅಮ್ಮಾವರ ಗಂಡ ಇದಕ್ಕೆ ಒಪ್ಪಿ ಬೇರೆ ಹೋಗಿ ವಾಸಿಸಲು ತೀರ್ಮಾನಿಸಿದ, ಎರಡನೆಯ ಅಣ್ಣನೂ ಇದೇ ದಾರಿ ಹಿಡಿದ. ಅಣ್ಣಂದಿರಿಬ್ಬರೂ ಬೇರೆ ಹೋಗುತ್ತೇವೆಂದಾಗ ಅವರಿಗೂ ಬೇರೆ ಮನೆ ಮಾಡಿಕೊಳ್ಳಲು ಶಿವ ಸಹಾಯ ಮಾಡಿದ್ದ.

ಅಣ್ಣ ತಮ್ಮಂದಿರ ಮದ್ಯೆ ಎಷ್ಟೇ ಮನಸ್ಥಾಪಗಳಿದ್ದರೂ ಇವರಲ್ಲಿ ಯಾರೊಬ್ಬರ ಮೇಲೂ ಹೊರಗಿನ ವ್ಯಕ್ತಿ ಆಕ್ರಮಣ ನಡೆಸಲು ನೋಡಿದರೆ ಇವರೆಲ್ಲಾ ಒಟ್ಟಾಗಿ ಅವರ ಮೇಲೆ ಮುಗಿ ಬೀಳುತ್ತಿದ್ದರು. ಅಲ್ಲಿಗೆ ಅವರ ಕತೆ ಮುಗಿದಂತೆ. ಈ ವಿಷಯದಲ್ಲಿ ಅನೇಕ ಕೇಸುಗಳು ಧಾಖಲಾಗಿದ್ದು ಇನ್ನೂ ಪೊಲೀಸ್ ಸ್ಟೇಷನ್, ಕೋರ್ಟು ಅಂತ ಅಲೆಯುವುದು ನಿಂತಿಲ್ಲ. ಅದಕ್ಕೆ ಈ ಕುಟುಂಬವನ್ನು ರೌಡಿ ಕುಟುಂಬವೆಂದೇ ಬ್ರಾಂಡ್ ಮಾಡಿಬಿಟ್ಟಿದ್ದಾರೆ. ಇವರ ಮನೆಯ ಇಬ್ಬರು ಹೆಣ್ಣು ಮಕ್ಕಳನ್ನು ಹೊರಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಲಿಂಗಾಯಿತರಾದ ಇವರ ಮನೆಯಲ್ಲಿ ಬಹುತೇಕರು ಸಸ್ಯಾಹಾರಿಗಳು. ಶಿವ ಮತ್ತು ಅವನ ತಮ್ಮಂದಿರಿಗೆ ನಾನ್ವೆಜ್ ಎಂದರೆ ಪಂಚ ಪ್ರಾಣ. ಅದಕ್ಕೆ ಮನೆಯವರ ವಿರೋಧವೇನೂ ಇಲ್ಲ. ಆದರೆ ಮನೆಯೊಳಗೇ ಮಾತ್ರ ಮೀನು -ಮಾಂಸ ತಂದು ಅಡುಗೆ ಮಾಡುವಂತಿಲ್ಲ. ಮನೆಗೆ ಅಂಟಿಕೊಂಡಂತೆ ಇದ್ದ ಒಂದು ಸ್ನಾನದ ಮನೆಯಲ್ಲಿ ನಳಪಾಕ ರೆಡಿ ಮಾಡಿಕೊಳ್ಳುತ್ತಿದ್ದರು, ಅದಕ್ಕೆ ಕೆಲಸದವರು ಸಹಾಯ ಮಾಡುತ್ತಿದ್ದರು. ಇದರಲ್ಲಿ ಏಳೆಂಟು ಜನ ಆರಾಮಾಗಿ ಕುಳಿತು ಕೊಳ್ಳಬಹುದು. ಅವರು ಅಲ್ಲಿ ನಾನ್ವೆಜ್ ಶುರು ಮಾಡಿದಮೇಲೆ ಅದರಲ್ಲಿ ಯಾರೂ ಸ್ನಾನ ಮಾಡುತ್ತಿರಲಿಲ್ಲ. ಅದನ್ನು ನಾನ್ವೆಜ್ ಮಾಡಲೆಂದೇ ಇಟ್ಟುಕೊಂಡಿದ್ದರು. -ಮುಂದಿನ ಪುಟಕ್ಕೆ...

ಈ ಶಿವ ರೈತ ಸಂಘದ ಸಕ್ರೀಯ ಕಾರ್ಯಕರ್ತ, ಜಿಲ್ಲಾ ಕಾರ್ಯದರ್ಶಿಯೂ ಆಗಿದ್ದ. ಆಗೆಲ್ಲಾ ರೈತ ಸಂಘವೆಂದರೆ ಅದರ ಗತ್ತೇ ಬೇರೆ. ಯಾವುದೇ ಕಚೇರಿಗೆ ಒಬ್ಬ ರೈತ ಹಸಿರು ಸಾಲನ್ನು ಹೆಗಲ ಮೇಲೆ ಹಾಕಿಕೊಂಡು ಹೋದನೆಂದರೆ ಅಲ್ಲಿನ ಸರಕಾರೀ ಅಧಿಕಾರಿಗಳು ಭಯದಿಂದ ನಡುಗುವವರೂ ಇದ್ದರು. ಭ್ರಷ್ಟ ಸರಕಾರೀ ನೌಕರರಿಗೆ ರೈತ ಸಂಘ ಸಿಂಹ ಸ್ವಪ್ನವಾಗಿ ಕಾಡುತಿತ್ತು. 1983 ರಲ್ಲಿ ಕರ್ನಾಟಕದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಗುಂಡೂರಾವ್ ನೇತೃತ್ವದ ಭ್ರಷ್ಟ ಸರಕಾರವನ್ನು ಸೋಲಿಸಿ ಜನತಾ ಪಕ್ಷ ಅಧಿಕಾರಕ್ಕೆ ಬರಲು ರೈತ ಮತ್ತು ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಚಿಂತಕರೂ ಕಾರಣೀಭೂತರಾಗಿದ್ದರು. ಈ ಶಿವ ಕೂಡಾ ಒಮ್ಮೆ ಕರ್ನಾಟಕ ವಿಧಾನ ಸಬಾ ಚುನಾವಣೆಗೆ ಸೋಮವಾರ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಐನೂರು ಓಟುಗಳನ್ನು ಪಡೆದು ಕೊಂಡಿದ್ದ. ಆ ನಂತರ ಇವನನ್ನು ಕೆಲವರು ಡಿಪೀಟೆಡ್ ಎಂಎಲ್ಎ ಎಂದು ಕರೆಯಲು ಶುರು ಮಾಡಿದ್ದರು.

ಸುಮಾರು ಹದಿನೈದು ವರ್ಷಗಳ ಕಾಲ ಉತ್ತುಂಗದಲ್ಲಿದ್ದ ರೈತ ಸಂಘ, ನಿಧಾನವಾಗಿ ತನ್ನ ಗರಿಮೆಯನ್ನು ಕಳೆದು ಕೊಳ್ಳ ತೊಡಗಿತು. ಇದಕ್ಕೆ ಮುಖ್ಯ ಕಾರಣ ನಾಯಕರುಗಳ ಮದ್ಯೆ ಇದ್ದ ಸ್ವಪ್ರತಿಷ್ಠೆ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು. ಒಂದಾಗಿದ್ದ ರೈತಸಂಘದಲ್ಲಿ ಬೆಂಗಳೂರಿನಲ್ಲಿ ಪ್ರೊಫೆಸ್ಸರ್ ನಂಜುಡಸ್ವಾಮಿ ಬಣ, ಉತ್ತರ ಕರ್ನಾಟಕದಲ್ಲಿ ಬಾಬಾ ಗೌಡ ಪಾಟೀಲರ ಬಣ, ಮಂಡ್ಯ-ಮೈಸೂರಿನಲ್ಲಿ ಪುಟ್ಟಣ್ಣಯ್ಯ ಬಣ, ಶಿವಮೊಗ್ಗದಲ್ಲಿ ಸುಂದರೇಶ್ ಬಣ, ಕೊಡಗು, ಹಾಸನ, ಸಕಲೇಶಪುರ, ಚಿಕ್ಕಮಗಳೂರಿನ ಮಂಜುನಾಥದತ್ತ, ಹೆಚ್. ವಿಶ್ವನಾಥ್, ವೆಂಕಟೇಶ್ ಮೂರ್ತಿ ಮತ್ತು ಡಿ. ಜೆ. ಶಿವರಾಂ ಬಣಗಳಾಗಿ ಮಾರ್ಪಟ್ಟವು. ಇವರು ಬಾಹ್ಯವಾಗಿ ಎಷ್ಟೇ ಒಗ್ಗಟ್ಟು ಪ್ರದರ್ಶಿಸಲು ನೋಡಿದರು ಆಂತರಿಕವಾಗಿ ಬೇರೆಯೇ ಆಗಿಹೋದರು. ಇವರಲ್ಲಿ ಕೆಲವ್ರು ತೀವ್ರವಾಧಿಗಳಾದರೆ ಮತ್ತೆ ಕೆಲವರು ಸೌಮ್ಯವಾಧಿಗಳಾಗಿದ್ದರು. ಕೆಲವರು ಎರಡೂ ಕಡೆಗಳಲ್ಲೂ ಕೈ ಜೋಡಿಸಿದ್ದರು. ಚುನಾವಣಾ ರಾಜಕಾರವನ್ನು ಮಾಡ ಬಾರದೆಂದು ಪ್ರತಿಪಾದಿಸುತ್ತಿದ್ದ ರೈತ ಸಂಘ, 1983 ರಲ್ಲಿ ತಮ್ಮ ಕೈಗೆ ಬಹುದಾಗಿದ್ದ ಅಧಿಕಾರವನ್ನು ತ್ಯಾಗ ಮಾಡಿ ಜನತಾ ಪಕ್ಷಕ್ಕೆ ಅಧಿಕಾರವನ್ನು ಕೊಡಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದರು, ಇದರಲ್ಲಿ ದಲಿತ ಸಂಘರ್ಷ ಸಮಿತಿಯ ಪಾತ್ರವೂ ತುಂಬಾ ಇದೆ. ಇದರ ಪರಿಣಾಮವಾಗಿ ರಾಜ್ಯ ರಾಜಕೀಯದಿಂದ ದೂರವಿದ್ದು ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ರಾಮಕೃಷ್ಣ ಹೆಗಡೆಯನ್ನು ತಂದು ಮುಖ್ಯಮಂತ್ರಿ ಪಟ್ಟಕ್ಕೆ ಕೂರಿಸಿದರು.

ಇದರ ನಂತರ ಅಳುವ ಪಕ್ಷ ರೈತ ಸಂಘವನ್ನು ಒಡೆಯಲು ಪ್ರಾರಂಭಿಸಿತು. ಸಕಲೇಶಪುರ, ಹಾಸನ ಮತ್ತು ಚಿಕ್ಕ ಮಗಳೂರಿನ ಕಡೆಯ ರೈತ ಸಂಘದವರು ದೇವೇಗೌಡರಿಗೆ ಸಪೋರ್ಟ್ ಮಾಡಿ ಜನತಾದಳವನ್ನು ಸೇರತೊಡಗಿದರು. ಅದರಲ್ಲಿ ಸಕಲೇಶಪುರದ ಶಾಸಕ ಹೆಚ್ ವಿಶ್ವನಾಥ್, ಮಂಜುನಾಥ ದತ್ತ ಮತ್ತವರ ಜೊತೆ ತೊಡಗಿಸಿಕೊಂಡಿದ್ದ ರೈತ ಕಾರ್ಯಕರ್ತರು ಪ್ರಮುಖರಾಗಿದ್ದರು. ಪ್ರೊಫೆಸ್ಸರ್ ನಂಜುಂಡ ಸ್ವಾಮಿ ಕರ್ನಾಟಕದ ವಿಧಾನಸಭೆಗೆ ಎರಡು ಕಡೆ ನಿಂತು ಗೆದ್ದಿದ್ದರು. -ಮುಂದಿನ ಪುಟಕ್ಕೆ...

ರಾಜಕೀಯ ಪಕ್ಷಗಳ ಕುತಂತ್ರದಿಂದ ಮತ್ತು ಸ್ವಯಂಕೃತ ಅವಿವೇಕತನದಿಂದ ರೈತಸಂಘ ಅನೇಕ ಬಣಗಳಾಗಿ ದಾಯಾದಿಗಳಂತೆ ನಡೆದುಕೊಳ್ಳತೊಡಗಿದರು. ಈ ಶಿವ ಮಾತ್ರ ಹಾಸನ ರೈತ ಸಂಘದ ಜೊತೆ ಕೆಲಸ ಮಾಡುತ್ತಿದ್ದರೂ ಪ್ರೊಫೆಸ್ಸರ್ ನಂಜುಂಡ ಸ್ವಾಮಿಯವರ ಹಿಂಬಾಲಕನಾಗಿದ್ದ. ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿ ಒಟ್ಟಾಗಿ ಕೆಲಸ ಮಾಡಬೇಕೆಂದು ಕೊಂಡರೂ ಅಲ್ಲೂ ಜಾತಿ ಸಂಘರ್ಷ ಶುರುವಾಯಿತು. ರೈತಸಂಘ ಮುಖ್ಯವಾಗಿ ಲಿಂಗಾಯಿತರು ಮತ್ತು ಗೌಡರ ಹದ್ದು ಬಸ್ತಿನಲ್ಲಿದ್ದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ದಲಿತ ಸಂಘರ್ಷ ಸಮಿತಿಯ ಚುಕ್ಕಾಣಿ ಹಿಡಿದಿದ್ದರು. ಇವರಿಬ್ಬರೂ ಹೊರಗಡೆ ಒಟ್ಟಾಗಿ ಸೇರುತ್ತಿದ್ದರೂ, ಊರು ಕೇರಿಗಳಲ್ಲಿ ಇವೆರಡು ಗುಂಪುಗಳಲ್ಲಿ ಸಂಘರ್ಷ ಆಗ್ಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ದಲಿತರನ್ನು ಗೌಡರು ಮತ್ತು ಲಿಂಗಾಯಿತರು ತಮ್ಮ ಮನೆಯೊಳಗೇ ಸೇರಿಸಿಕೊಳ್ಳುತ್ತಿರಲಿಲ್ಲ ಮತ್ತು ಅವರ ಮನೆಗೆ ಹೋಗಿ ಊಟವನ್ನೂ ಸೇವಿಸುತ್ತಿರಲಿಲ್ಲ. ಇದು ಮುಖ್ಯವಾಗಿ ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯವರು ಒಗ್ಗೂಡಿ ಕೆಲಸ ಮಾಡಲು ಅಡಚಣೆಯಾಗತೊಡಗಿತು.

ಇವೆಲ್ಲಾ ವಿವಾದ ಮತ್ತು ವೈರುದ್ರ್ಯಗಳ ನಡುವೆ ಶಿವನಿಗೂ ರೈತಸಂಘದಲ್ಲಿ ಆಸಕ್ತಿ ಕಡಿಮೆಯಾಯಿತು. ಊರಲ್ಲಿ ಮಗ ಮೆಜಾರಿಟಿಗೆ ಬಂದಿದ್ದ, ಅವನ ಮದುವೆಯನ್ನೂ ಮಾಡಿದ್ದರು. ತೋಟದ ಕೆಲಸವನ್ನು ಶಿವನ ಮಗ ಮತ್ತು ತಮ್ಮಂದಿರು ನೋಡಿ ಕೊಳ್ಳುತ್ತಿದ್ದುದರಿಂದ ಶಿವನಿಗೆ ಮನೆಯಲ್ಲಿ ಪ್ರಾಶಸ್ತ್ಯ ಕಡಿಮೆಯಾಯಿತು. ಎಲ್ಲಾ ಜವಾಬ್ಧಾರಿಯನ್ನು ಅವರಿಗೆ ವಹಿಸಿ ಸಕಲೇಶಪುರಕ್ಕೆ ಬಂದು ಟಿವಿ ಕೇಬಲ್ ಬಿಸಿನೆಸ್ ಪ್ರಾರಂಭ ಮಾಡಿದ್ದ. ಆಗೆಲ್ಲಾ ಸ್ವತಂತ್ರವಾಗಿ ಡಿಸ್ ಗಳನ್ನೂ ಹಾಕಿ ಕೊಳ್ಳುವುದು ದುಬಾರಿಯಾಗಿತ್ತು ಮತ್ತು ಹಾಕಿಸಿಕೊಂಡರೂ ಕೆಲವೇ ಚಾನಲ್ ಗಳು ಬರುತ್ತಿದ್ದವು. ಕೇಬಲ್ ಆದರೆ ನೂರಕ್ಕೂ ಹೆಚ್ಚು ಚಾನಲ್ ಗಳು ಸಿಗುತ್ತಿದ್ದವು. ಆದ್ದರಿಂದ ಕೇಬಲ್ ಬಿಸಿನೆಸ್ ಆ ಕಾಲಕ್ಕೆ ಒಂದು ಲಾಭದಾಯಕ ಉದ್ಯಮವಾಗಿತ್ತು. ಇದರ ಮಹತ್ವವನ್ನು ಅರಿತ ಶಿವ ಸಕಲೇಶಪುರದಲ್ಲಿ ಕೇಬಲ್ ಬಿಸಿನೆಸ್ ಪ್ರಾರಂಭ ಮಾಡಲು ಕಾರಣವಾಯಿತು.

ಈ ಕೇಬಲ್ ಬಿಸಿನೆಸ್ ಉನ್ನತ ಸ್ಥಿತಿಯಲ್ಲಿ ಇದ್ದಾಗ ಮೂರ್ನಾಲ್ಕು ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ . ಇದರಿಂದ ಶಿವನಿಗೆ ಹೆಚ್ಚು ಸಮಯ ವಿಶ್ರಾಂತಿ ಸಿಗುತ್ತಿತ್ತು. ಆಗ ಅವನಿಗೆ ಯಾಕೋ ಒಂಟಿತನ ಕಾಡತೊಡಗಿತ್ತು. ಅದೇ ವೇಳೆಗೆ ಅವನಿಗೆ ಒಬ್ಬಳು ಹುಡುಗಿಯ ಪರಿಚಯವಾಯಿತು. ವಯಸ್ಸಿನಲ್ಲಿ ಇವರಿಬ್ಬರಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಶಿವ ನಲವತ್ತಾರರ ಆಸುಪಾಸಿನಲ್ಲಿದ್ದರೆ ಆ ಹುಡುಗಿನ್ನೂ ಇಪ್ಪತ್ಮೂರು ವರ್ಷ. ಮನೆಯಲ್ಲಿ ಹೆಂಡತಿ ಇದ್ದಾಳೆ, ಮಗನಿಗೆ ಮದುವೆ ಮಾಡಿ ಆಗಿದೆ, ಕಿರಿಯ ಮಗಳು ಮದುವೆಗೆ ಬಂದಿದ್ದಾಳೆ, ಆದರೂ ಇದು ಹೇಗೆ ಆಯಿತು ಎಂಬುದೇ ವಿಚಿತ್ರ. ಆದರೂ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಈ ಒರಟ ಶಿವನಿಗೆ ಆ ಹುಡುಗಿ ಹೇಗೆ ಬಿದ್ದಳು ಎಂಬುದೇ ಆಶ್ಚರ್ಯ. ಇವನು ಬೆಂಗಳೂರಿಗೆ ಬಂದಿದ್ದಾಗಲೆಲ್ಲಾ ಅವಳಿಗಾಗಿ ಚೂಡಿದಾರ್ ಕೊಳ್ಳುವ ಮೊದಲು ಅವಳಿಗೆ ಫೋನ್ ಮಾಡಿ ಬಣ್ಣ, ಸೈಜು ಕೇಳುತ್ತಿದ್ದ. ಆಕೆ ಬೇಡವೆಂದರೂ ಕೊಂಡು ಕೊಳ್ಳುತ್ತಿದ್ದ. ಬಹುಶಃ ಇದೊಂದು ರೀತಿಯ ಪರಸ್ಪರ ಒಪ್ಪಿಗೆಯ ಗುಟ್ಟಿನ ಪ್ರೀತಿಯಾಗಿತ್ತು. -ಮುಂದಿನ ಪುಟಕ್ಕೆ...

ಶಿವ ಬೆಂಗಳೂರಿನ ಬಸ್ ಸ್ಟ್ಯಾಂಡ್ ಸೇರುವಾಗ ಸಂಜೆ ನಾಲ್ಕು ಘಂಟೆಯಾಗಿತ್ತು. ಬಸ್ಸು ಇಳಿದವನೇ ಆಟೋ ಹಿಡಿದು ಎಸ್ಪಿ ರೋಡಿಗೆ ಹೋದ. ಸಾಮಾನ್ಯವಾಗಿ ಎಸ್ಪಿ ರೋಡಿನ ಅಂಗಡಿಗಳು ಭಾನುವಾರ ಮುಚ್ಚಿರುತ್ತವೆ. ಆದರೆ ಕಾಯಂ ಗಿರಾಕಿಗಳಿದ್ದರೆ ಮಾತ್ರ ಕೆಲವು ಅಂಗಡಿಗಳು ಅರ್ಧ ಬಾಗಿಲು ತೆಗೆದುಕೊಂಡು ಕಾಯುತ್ತಿರುತ್ತಾರೆ. ಶಿವ ನಾಕೋಡ ಶಾಪಿನ ಕಾಯಂ ಗಿರಾಕಿ ಆಗಿದ್ದುದರಿಂದ ಅಂಗಡಿಯ ಹುಡುಗ ಅಲ್ಲೇ ಇದ್ದ. ಅಲ್ಲಿ ತಾನು ಆರ್ಡರ್ ಮಾಡಿದ್ದ ವಸ್ತುಗಳನ್ನು ಚೆಕ್ ಮಾಡಿ ಪ್ಯಾಕ್ ಮಾಡಿಸಿ ಆಟೋಗೆ ಹಾಕಿಸಿಕೊಂಡು ಗಾಂಧಿನಗರಕ್ಕೆ ಬಂದ. ಅಲ್ಲಿ ಕೆಲವೊಮ್ಮೆ ತಾನು ಉಳಿದುಕೊಳ್ಳುವ ಹೋಟೆಲಿಗೆ ಹೋಗಿ ಸಿಂಗಲ್ ರೂಮ್ ಬುಕ್ ಮಾಡಿ ತನ್ನ ಸಾಮಾನುಗಳನ್ನು ಅಲ್ಲಿಟ್ಟ. ಸಕಲೇಶಪುರದಲ್ಲಿ ಕೇಬಲ್ ಸಮಸ್ಯೆ ಇಲ್ಲದಿದ್ದಿದ್ದರೆ ಅವತ್ತು ರಾತ್ರಿ ಬಸ್ಸಿಗೇ ಹೊರಟುಬಿಡುತ್ತಿದ್ದ. ಆದರೆ ಅಲ್ಲಿ ಹೋದರೆ ಕೇಬಲ್ ಕನೆಕ್ಷನ್ ಕೊಟ್ಟವರ ಬಳಿ ಬೈಯಿಸಿಕೊಳ್ಳಬೇಕಾಗುತ್ತದೆಂದು ಮರುದಿದ ಹೊರಡಲು ತೀರ್ಮಾನಿಸಿದ.

ಮರುದಿನ ಸಕಲೇಶಪುರ ಸೇರುವಾಗ ಮದ್ಯಾಹ್ನ ಎರಡು ಗಂಟೆಯಾಗಿತ್ತು. ಲಗೇಜ್ ಗಳನ್ನು ಬಸ್ಸಿನಿಂದ ಇಳಿಸಿ ರೂಮಿಗೆ ತೆಗೆದುಕೊಂಡು ಹೋಗಲು ಆಟೋಗೆ ಹಾಕಿದ. ರಾತ್ರಿಯಾಗಿದ್ದರೆ ಇವನೇ ಹೊತ್ತುಕೊಂಡು ಹೋಗಿ ರೂಮಿಗೆ ಹಾಕುತ್ತಿದ್ದ, ಆದರೆ ಹಗಲು ನೋಡಿದವರು ಏನಂದು ಕೊಂಡಾರೆಂದು ಅವನ ಅಳುಕು. ರೂಮು ಸೇರಿದೊಡನೆ ಸಿಗರೇಟು ಹಚ್ಚಿ ಹೋಗೆ ಬಿಡುತ್ತಾ ಬಾತ್ ರೂಮ್ ಸೇರಿದ. ಹುಡುಗರು ಊರಿನಿಂದ ಬಂದಿರುವುದಕ್ಕೆ ಸಾಕ್ಷಿಯಾಗಿ ಅವರ ಬಟ್ಟೆಗಳು ಅಲ್ಲಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಬಾತ್ ರೂಮ್ ಮುಗಿಸಿ ಹುಡುಗರಿಗೆ ಫೋನ್ ಹಾಕಿದ. ಆಕಡೆಯಿಂದ ಅಣ್ಣಾ, ನಾವು ಕೇಬಲ್ ಸರಿಮಾಡುತ್ತಿದ್ದೀವಿ, ನೀವೆಲ್ಲಿದ್ದೀರಾ ಎಂದು ಕೇಳಿದರು. ತಾನು ರೂಮಿಗೆ ಬಂದಿರುವ ವಿಷಯ ತಿಳಿಸಿ ಅರ್ಧ ಘಂಟೆಯಲ್ಲಿ ಅಲ್ಲಿಗೆ ಬರುವುದಾಗಿ ತಿಳಿಸಿ ಫೋನ್ ಕಟ್ ಮಾಡಿದ.

ಇವನಿಗೆ ಮೊದಲು ಹಿಂದಿನ ದಿನದ ಸಂಜೆ ಗಾಂಧಿನಗರದ ಭರ್ಮಾ ಬಜಾರ್ ನಲ್ಲಿ ಕೊಂಡು ಕೊಂಡಿದ್ದ ಚೂಡಿದಾರ್ ಸೆಟ್ಟನ್ನು ಅವನ ಹುಡುಗಿಗೆ ಕೊಡಬೇಕಿತ್ತು, ಅದಕ್ಕಾಗಿ ಅವಳಿಗೆ ಫೋನ್ ಮಾಡಿದ. ಆ ಕಡೆಯಿಂದ ಸಕಲೇಶಪುರಕ್ಕೆ ಬಂದ್ರಾ ಎಂಬ ಮೆಲುದ್ವನಿ ಬಂದಿತು. ಹೂಂ, ಈಗ ಬಂದೆ, ಅಲ್ಲೇ ಬರ್ತಾ ಇದ್ದೀನಿ, ಎಲ್ಲಿ, ಮನೇಲಿದ್ದಿಯ ಅಂದ. ಹೂಂ, ಮನೇಲೇ ಇದ್ದೀನಿ, ಅವ್ವ ಸಾಯಿಂಕಾಲ ಬರಬಹುದು ಅಂದಳು. ಅವಳ ಅವ್ವ ನಿನ್ನೆ ಭಾನುವಾರವಾದುದರಿಂದ ಹಾಸನದಲ್ಲಿದ್ದ ಅವರ ಚಿಕ್ಕಮ್ಮನ ಮನೆಗೆ ಹೋಗಿದ್ದಳು, ಅಪರೂಪಕ್ಕೆ ಹೋದಮೇಲೆ ಸುಮ್ಮನೆ ಬಿಟ್ಟಾರ, ಒಂದು ವಾರ ಇದ್ದು ಹೋಗಲು ಹೇಳಿದ್ದರು, ಆದರೆ ಅವಳ ಮಗಳು ಒಬ್ಬಳೇ ಮನೆಯಲ್ಲಿದ್ದುದರಿಂದ ಸೋಮವಾರ ಸಂಜೆಗೆ ತನ್ನ ಭೇಟಿಯನ್ನು ಮೊಟಕುಗೊಳಿಸಿ, ಮಗಳಿಗೆ ಸಂಜೆ ಬರುವುದಾಗಿ ವಿಷಯ ಮುಟ್ಟಿಸಿದ್ದಳು. ಶಿವನಿಗೂ ಅವಳನ್ನು ನೋಡಿ ಚೂಡಿದಾರ್ ಸೆಟ್ಟನ್ನು ಅವನ ಹುಡುಗಿಗೆ ಕೊಟ್ಟರೆ ಏನೋ ಸಮಾಧಾನ. ಅವುಗಳನ್ನು ರೂಮಿನಲ್ಲಿ ಇಟ್ಟುಕೊಳ್ಳುವ ಹಾಗೂ ಇಲ್ಲ, ಇಟ್ಟರೆ ಹುಡುಗರು ನೋಡಿ, ಟಾಂ- ಟಾಂ ಮಾಡಿಬಿಟ್ಟರೆ, ತನ್ನ ಗುಟ್ಟು ಬಯಲಾಗುತ್ತದೆಂಬ ಭಯ ಬೇರೆ. -ಮುಂದಿನ ಪುಟಕ್ಕೆ...

ಅವಳ ಮನಗೆ ತಲುಪಿದ ಶಿವ ಮನೆಯ ಬಾಗಿಲು ಬಡಿದಾಗ ವಯ್ಯಾರದಿಂದ ಬನ್ನಿ ಒಳಗೆ ಎಂದಳು. ಒಳಗೆ ಹೋದವನೇ ಹಿಂದಿನಿಂದ ಮೆತ್ತಗೆ ಬಾಗಿಲನ್ನು ತಳ್ಳಿ, ಅವಳನ್ನು ಬಾಹುಗಳಲ್ಲಿ ತಬ್ಬಿಕೊಳ್ಳುತ್ತಾ ಗಟ್ಟಿಯಾಗಿ ಅಪ್ಪಿಕೊಂಡ. ಬುಡಿ, ಇನ್ನೂ ಟೈಮಿದೆ ಅಂದಳು. ಅಪ್ಪುಗೆಯ ಸಡಿಲಿಸಿ ಕೈಯಲ್ಲಿ ಹಿಡಿದುಕೊಂಡಿದ್ದ ಚೂಡಿದಾರ್ ಸೆಟ್ಟನ್ನು ಅವಳಿಗೆ ನೀಡಿದ. ಇದೆಲ್ಲ ಯಾಕೆ ತರುವುದಕ್ಕೆ ಹೋದ್ರಿ, ಅವ್ವ ಕೇಳಿದ್ರೆ ಏನ್ ಹೇಳ್ಲಿ ಎಂದಳು. ಬಟ್ಟೆ ಹೊಲ್ದಿದ್ ದುಡ್ಡಲ್ಲಿ ನೀನೇ ಕೊಂಡುಕೊಂಡೆ ಅಂತ ಹೇಳು ಅಂದ.

ಟೈಲರ್ ಕೆಲಸ ಮಾಡುತ್ತಿದ್ದ ಹುಡುಗಿಯ ಅವ್ವ, ಮಗಳು ಹತ್ತರಲ್ಲಿ ಫೇಲಾದ ಮೇಲೆ ಮನೆಯಲ್ಲೇ ತನ್ನ ಸಹಾಯಕ್ಕೆ ಇಟ್ಟು ಕೊಡದಿದ್ದಳು. ಇವಳು ಓದುವುದರಲ್ಲಿ ಅಷ್ಟೇನು ಚುರುಕಿಲ್ಲವಾದ್ದರಿಂದ ಬೆಳೆದ ಹುಡುಗಿ ಹೊರಗೆ ಹೋಗಿ ದುಡಿಯುವುದರ ಬದಲು ತನಗೇ ಸಹಾಯಗುತ್ತದೆಂದು ಹೊರಗೆಲ್ಲೂ ಕೆಲಸಕ್ಕೆ ಕಳುಹಿಸಿರಲಿಲ್ಲ. ಇಬ್ಬರೂ ಸೇರಿ ತಿಂಗಳಿಗೆ ಹತ್ತರಿಂದ ಹದಿನೈದು ಸಾವಿರ ದುಡಿಯುತ್ತಾರೆ. ಮನೆ ಖರ್ಚು ಕಳೆದು ತಿಂಗಳಿಗೆ ಏಳೆಂಟು ಸಾವಿರ ಬ್ಯಾಂಕಿಗೆ ಕಟ್ಟಿ ಡಿಪಾಸಿಟ್ ಮಾಡುತ್ತಾ ಬರುತ್ತಿದ್ದಾರೆ ಮೂರ್ನಾಲ್ಕು ವರ್ಷದಿಂದ ಎರಡು ಮೂರೂ ಲಕ್ಷ ಕೂಡಿ ಹಾಕಿದ್ದಾರೆ. ಇದು ಮಗಳ ಮದುವೆಗಾಗುತ್ತದೆಂದು ಅವ್ವನ ಅಸೆ.

ಇವಳ ಅಪ್ಪ ಕುಡಿತದ ಚಟದಿಂದ ಕಳೆದ ಡಿಸಂಬರ್ ನಲ್ಲಿ ತೀರಿಕೊಂಡಿದ್ದಾನೆ. ಈ ಚಟದಿಂದಲೇ ಅವನು ಇದ್ದ ಒಂದು ಪ್ರೈವೇಟ್ ಕೆಲಸವನ್ನೂ ಕಳೆದು ಕೊಂಡಿದ್ದ. ಅವನ ಕುಡಿತದ ಚಟ ಬಿಡಿಸಲು ಎರಡು ಮೂರೂ ಸಲ ಮಂಗಳೂರಿಗೆ ಕರೆದು ಕೊಂಡು ಹೋಗಿ ಬಂದರೂ ಉಪಯೋಗವಾಗಲಿಲ್ಲ. ಸ್ವಲ್ಪ ದಿನ ನಿಲ್ಲಿಸಿ ಮತ್ತೆ ಶುರುಮಾಡಿಕೊಳ್ಳುತ್ತಿದ್ದ. ಹೀಗೆ ಕಳೆದ ಡಿಸಂಬರ್ ನಲ್ಲಿ ಕುಡಿದು ರಾತ್ರಿ ಲೇಟಾಗಿ ಬರುವಾಗ ಮೋರಿಗೆ ತಲೆಕೆಳಗಾಗಿ ಬಿದ್ದು ಉಸಿರು ಕಟ್ಟಿ ಶವವಾಗಿದ್ದ. ಯಾರೋ ಇವನ ಕಾಲನ್ನು ಹಿಡಿದು ಮೇಲೆಳೆಯುವ ಹೊತ್ತಿಗೆ ಪ್ರಾಣ ಹೋಗಿತ್ತು. ವಿಷಯ ಮನೆಗೆ ಮುಟ್ಟಿಸಿ, ಪೋಲಿಸಿಗೆ ಫೋನ್ ಮಾಡಿದಾಗ, ಅವರು ಬಂದು ಮಹಜರು ಮಾಡಿ ಕುಡಿದು ಮೋರಿಗೆ ಬಿದ್ದು ಸತ್ತಿದ್ದಾನೆಂದು ಬರಿದುಕೊಂಡು ಬಾಡಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ವಿಷಯ ತಿಳಿದ ಅವ್ವ ಮತ್ತು ಮಗಳು ಅಳುತ್ತಾ ಆಸ್ಪತ್ರೆಗೆ ಓಡಿ ಬಂದು ಡೆಡ್ ಬಾಡಿ ನೋಡಿ ತಲೆಯಮೇಲೆ ಕೈಹೊತ್ತು ಕುಳಿತಿರುವಾಗ, ಪೋಸ್ಟ್ ಮಾರ್ಟಮ್ ನಾಳೆ ಮಾಡುವುದಾಗಿ ಡಾಕ್ಟರು ಹೇಳಿದ ಮೇಲೆ, ಇನ್ನು ಅಲ್ಲಿದ್ದು ಉಪಯೋಗವಿಲ್ಲವೆಂದು ಅವರಿಗೆ ಗೊತ್ತಿರುವವರು ಅವ್ವ ಮತ್ತು ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಅವ್ವ ಮತ್ತು ಮಗಳು ರಾತ್ರಿಯೆಲ್ಲಾ ದೀಪ ಹಚ್ಚಿ ಅದರ ಮುಂದೆ ಕುಳಿತು ಅಳುತ್ತಾ ಕುಳಿತು ಕೊಡಿರುವಾಗ ಅಕ್ಕ ಪಕ್ಕದ ಮನೆಯ ಕೆಲವರು ಇವರೊಂದಿಗೆ ಅಲ್ಲೇ ರಾತ್ರಿ ಕಳೆದಿದ್ದಾರೆ. ಮರುದಿನ ಬೆಳಿಗ್ಗೆ ಎಂಟು ಘಂಟೆಗೆ ಅವ್ವ ಮತ್ತು ಮಗಳೊಂದಿಗೆ ಕೆಲವರು ಆಸ್ಪತ್ರೆಗೆ ಹೋಗಿ ಕೇಳಿದಾಗ, ಡಾಕ್ಟರು ಬರುವುದು ಒಂಬತ್ತೂವರೆಯಾಗುತ್ತದೆ, ಬಂದಮೇಲೆ ಪೋಸ್ಟ್ ಮಾರ್ಟಮ್ ಮಾಡಿ ಹೆಣ ಕೈಗೆ ಸಿಗಲು ಹನ್ನೊಂದು ಘಂಟೆಯಾಗಬಹುದು. ಅಲ್ಲಿಯವರೆಗೆ ಕೆಲವು ಪೇಪರ್ ಗಳಿಗೆ ಸೈನ್ ಮಾಡಬೇಕು, ಅವುಗಳನ್ನು ಮಾಡಿ ಮುಗಿಸಿ ಎಂದು ಸಲಹೆ ನೀಡಿದರು. -ಮುಂದಿನ ಪುಟಕ್ಕೆ...

ಡಾಕ್ಟರು ಮತ್ತು ಪೊಲೀಸ್ ಹತ್ತು ಘಂಟೆಗೆ ಬಂದು ಪೋಸ್ಟ್ ಮಾರ್ಟಮ್ ಶುರು ಮಾಡಿ ಕೊಂಡರು. ಇವನ ಕುಡುಕತನ ಗೊತ್ತಿದ್ದ ಪೊಲೀಸ್ ಹೆಚ್ಚಿನದೇನೂ ಕೇಳಲು ಹೋಗಿಲ್ಲ. ಡಾಕ್ಟರು ಪೋಸ್ಟ್ ಮಾರ್ಟಮ್ ಮುಗಿಸಿ ಅತಿಯಾಗಿ ಕುಡಿದು ಮೋರಿ ನೀರಿಗೆ ಬಿದ್ದು ಉಸಿರುಕಟ್ಟಿ ಸತ್ತಿದ್ದಾನೆಂದು ರಿಪೋರ್ಟ್ ಕೊಟ್ಟಿದ್ದಾರೆ. ಮದ್ಯಾಹ್ನ ಹನ್ನೆರಡು ಘಂಟೆಗೆ ಹೆಣವನ್ನು ಇವರಿಗೆ ಕೊಟ್ಟ ಮೇಲೆ ಆಪೇ ಆಟೋದಲ್ಲಿ ಮನೆಗೆ ಸಾಗಿಸಿ, ಅಲ್ಲಿ ಶಾಸ್ತ್ರ ಸಂಪ್ರದಾಯ ಮುಗಿಸಿ ಸಂಜೆ ಹೆಣ ಸುಡುವ ಮನೆಗೆ ತೆಗೆದುಕೊಂಡು ಹೋಗಿ ಅಂತಿಮ ವಿದಾಯ ಹೇಳಿ ಬಂದಿದ್ದಾರೆ. ಇವರಿಗೆ ಹೆಚ್ಚಾಗಿ ನೆಂಟರಿಷ್ಟರು ಇಲ್ಲದೇ ಇದ್ದುದರಿಂದ ಅಕ್ಕ ಪಕ್ಕದ ಮನೆಯವರೇ ಇವರಿಗೆ ಸಹಾಯ ಮಾಡಿದ್ದಾರೆ. ಇವೆಲ್ಲವೂ ಶಿವ ಸಕಲೇಶಪುರಕ್ಕೆ ಬರುವುದಕ್ಕೆ ಮೊದಲೇ ನಡೆದು ಹೋಗಿದ್ದ ಘಟನೆಯಾಗಿತ್ತು.

ಶಿವನಿಗೆ ಇವರು ಚೆನ್ನಾಗಿ ಪರಿಚಯವಾದ ಮೇಲೆ ತನ್ನ ಮನೆಯವರಿಗೆ ಇಲ್ಲಿಂದಲೇ ಬಟ್ಟೆ ಹೊಲೆಸಿಕೊಂಡು ಹೋಗಬೇಕೆಂದು ಅಂದು ಕೊಂಡಿದ್ದ, ಆದರೆ ಇವರಿಬ್ಬರ ಕನೆಕ್ಷನ್ ವಿಷಯ ಅವರಿಗೇನಾದರೂ ಗೊತ್ತಾದರೆ ಯಾಕೆ ಇಲ್ಲದ ಸಮಸ್ಯೆ ಎಂದು, ಆ ಐಡಿಯಾವನ್ನು ಅಲ್ಲಿಗೆ ಬಿಟ್ಟು ಬಿಟ್ಟಿದ್ದ. ಇವರಿಬ್ಬರ ಲವ್ ಸ್ಟೋರಿ ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ಅವರ ಮನೆಯ ಕೇಬಲ್ ಕನೆಕ್ಷನ್ ಕೊಡಲು ಹೋಗಿ ಶಿವ ಅವಳೊಂದಿಗೆ ಕನೆಕ್ಟ್ ಆಗಿ ಬಿಟ್ಟಿದ್ದ. ಈ ಚಕ್ಕರ್ ನಾಲ್ಕೈದು ತಿಂಗಳಿಂದ ನಡೆಯುತ್ತಾ ಬಂದಿದ್ದರೂ ಅವರ ಅವ್ವನಿಗೆ ಈ ವಿಷಯ ಅಸ್ಪಷ್ಟ. ಏನೋ, ಗೊತ್ತಿರುವವರು, ಫ್ರೀಯಾಗಿ ಕೇಬಲ್ ಕನೆಕ್ಷನ್ ಕೊಟ್ಟಿದ್ದಾರೆಂಬುದಷ್ಟೇ ಅವಳಿಗೆ ಗೊತ್ತಿರುವುದು.

ಊಟ ಮಾಡಿ ಎಂದು ಕೈಗೆ ನೀರು ತಂದು ಕೊಟ್ಟಳು, ಶಿವನಿಗೂ ಹೊಟ್ಟೆ ಚುರುಗುಟ್ಟುತ್ತಿದ್ದುದರಿಂದ, ಏನ್ ಸ್ಪೆಷಲ್ ಎಂದ. ಏನೂ ಸ್ಪೆಷಲ್ ಇಲ್ಲ, ಇವತ್ತು ಸೋಮವಾರವಲ್ವಾ, ಬೇಕಾದ್ರೆ ಆಮ್ಲೆಟ್ ಹಾಕಿ ಕೊಡುತ್ತೇನೆ ಎಂದಳು. ಇವರು ಸೇಂದಿ ಕುಯ್ಯುವ ಬಿಲ್ಲವ ವಂಶದವರು, ಮೊದಲು ಇವರಿಗೆ ಯಾವುದೇ ವಾರ ಇರಲಿಲ್ಲ, ಆದರೆ ಅವರ ಅಪ್ಪ ತೀರಿಕೊಂಡ ಮೇಲೆ ಸೋಮವಾರ ಮತ್ತು ಶನಿವಾರ ನಾನ್ ವೆಜ್ ಮಾಡುವುದು ಕಡಿಮೆ. ಈ ಶಿವನಿಗೆ ಈ ವಾರ, ಘಳಿಗೆ ಅಂತ ಏನೂ ಕಟ್ಟುಪಾಡುಗಳಿಲ್ಲ. ವಾರದ ಯಾವ ದಿನದಲ್ಲಾದರೂ ನಾನ್ ವೆಜ್ ಗೆ ನೋ ಅನ್ನುವುದಿಲ್ಲ. ಅವಳು ಡಬ್ಬಲ್ ಆಮ್ಲೆಟ್ ಹಾಕಿ, ಅನ್ನ, ಮೊಳೆ ಕಟ್ಟಿದ ಹುರುಳಿ ಕಾಳಿನ ಸಾರನ್ನು ತಟ್ಟೆಗೆ ಹಾಕಿ ತಂದು ಕೊಟ್ಟಳು. ಸೈಡಿಗೆ ಉಪ್ಪಿನ ಕಾಯಿಯೂ ಇತ್ತು. ಬೆಳಿಗ್ಗೆ ತಿಂಡಿ ತಿಂದು ಬೆಂಗಳೂರಿಂದ ಬರುವಾಗ ಚೆನ್ನರಾಯಪಟ್ಟಣದಲ್ಲಿ ಬಸ್ಸು ನಿಲ್ಲಿಸಿದ್ದಾಗ ಟೀ ಕುಡಿದದ್ದು ಬಿಟ್ಟರೆ ಶಿವ ಏನ್ನನ್ನೂ ತಿಂದಿರಲಿಲ್ಲ. ಹಸಿದ ಹೊಟ್ಟೆಗೆ ಹಸನ್ಮುಖಿಯಾಗಿ ತುಂಬಿಸ ತೊಡಗಿದ. ಅವನ ಹುಡುಗಿ ನಿಧಾನವಾಗಿ ಊಟ ಮಾಡಿ ಎನ್ನುತ್ತಾ ಉಪ್ಪಿನಕಾಯಿ ಬಡಿಸಿ, ಅದರ ಜೊತೆಗೆ ಹುರಿದ ಮೆಣಸಿನಕಾಯಿ ಬಾಳ್ಕವನ್ನೂ ಅವನ ತಟ್ಟೆಗೆ ಹಾಕಿದಳು. ತನ್ನ ಊಟ ಮುಗಿದ ಮೇಲೆ ಹಡುಗಿಗೆ ಗುಡ್ ಬೈ ಹೇಳಿ ತನ್ನ ಕೇಬಲ್ ಕಚೇರಿ ಕಡೆ ಹೊರಟ. -ಮುಂದಿನ ಪುಟಕ್ಕೆ...

ರೂಮಿನಲ್ಲಿ ಹುಡುಗರು ಇರಲಿಲ್ಲ, ಆದರೆ ಅವರ ಬಟ್ಟೆ ಬ್ಯಾಗುಗಳನ್ನು ನೋಡಿದ ಮೇಲೆ ಬಂದಿರುವುದು ಕನ್ಫರ್ಮ್ ಆಯಿತು. ಅವರ ವಾಸನೆ ಹಿಡಿದು ಕೇಬಲ್ ಬಿದ್ದಿರುವ ಸ್ಥಳದ ಕಡೆ ಹೋಗುವ ಹೊತ್ತಿಗೆ ಹುಡುಗರು ಎಲ್ಲೆಲ್ಲಿ ಕೇಬಲ್ ತುಂಡಾಗಿ ಬಿದ್ದಿದ್ದವೋ ಅವುಗಳಿಗೆ ತಮಗಾದ ಮಟ್ಟಿಗೆ ಜಾಯಿಂಟ್ ಹಾಕಿ ಕನೆಕ್ಷನ್ ಕೊಡುತ್ತಿದ್ದರು. ಎನ್ರೋ, ಅಯ್ತೆನ್ರೋ, ನಾನು ಇವೆಲ್ಲಾ ಕಟ್ಟಾಗಿರದ್ ನೋಡಿ ಇನ್ನೊಂದ್ ನಾಕ್ ದಿನ ಕೆಲ್ಸ ಆಗಕ್ಕಿಲ್ಲ ಅಂತ ಬೆಂಗ್ಳೂರಿಗೆ ಹೋಗಿದ್ದೆ, ಹ್ಯಂಗೂ ಕೇಬಲ್ಲು, ಜಾಯಿಂಟು, ಅವು ಇವು ಬೇಕಿತ್ತಲ್ಲಾ, ತಂದು ರೂಮಲ್ಲಿ ಇಟ್ಟೀನಿ, ಬೇಕಾದ್ರೆ ಹೋಗಿ ತಗ ಬನ್ನಿ ಅಂದ. ಸದ್ಯಕ್ಕೆ ಬ್ಯಾಡ ಶಿವಣ್ಣ, ಆಫಿಸಲಿ ಇದ್ವಲ್ವಾ ಅವುನ್ನೇ ತಂದು ಜಾಯಿಂಟ್ ಹಾಕಿ ಕನೆಕ್ಷನ್ ಕೊಟ್ಟಿವಿ, ಈಗ ಸುಮಾರ್ಕೆ ಆದಂಗೇಯಾ ಎಂದರು ಹುಡುಗರು. ಈ ಹುಡುಗರು ಜಾಯಿಂಟ್ ಮಾಡಿದ ಕೇಬಲ್ ಗಳನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನೆಲದಿಂದ ಮೇಲಕ್ಕೆ ಎತ್ತಿ ಎಳೆದು ಕಟ್ಟಿ, ಕೇಬಲ್ ಸರಿಮಾಡುತ್ತಿದ್ದರು. ಸದ್ಯಕ್ಕೆ ಬಾಗಿದ್ದ ಮತ್ತು ನೆಲಕಚ್ಚಿದ್ದ ಕರೆಂಟ್ ಕಂಬಗಳು ಯಾವಾಗ ರೆಡಿ ಮಾಡುತ್ತಾರೆಂಬ ಐಡಿಯಾ ಇರಲಿಲ್ಲ. ಅದಕ್ಕಾಗಿ ಅಲ್ಲಲ್ಲಿ ಮರಗಳಿಗೆ ಮತ್ತು ಟೆಲೆಫೋನ್ ಕಂಬಗಳನ್ನು ಆಧಾರವಾಗಿಟ್ಟುಕೊಂಡು ಅವುಗಳಿಗೆ ತಂತಿ ಸುತ್ತಿ ತಾತ್ಕಾಲಿಕ ಪರಿಹಾರ ಕಂಡು ಕೊಂಡರು. ಯಾವನೋ ಪುಣ್ಯಾತ್ಮ ಫೋನ್ ಮಾಡಿ, ಕೇಬಲ್ ಬತ್ತಾ ಅದೆ ಶಿವಣ್ಣ, ಆದ್ರೆ ಸಿಗ್ನಲ್ ವೀಕು ಅಂದ, ಅಯ್ತು ಸರಿ ಮಾಡ್ತಾ ಇದ್ದಿವಿ ಎನ್ನುತ್ತಾ ರೂಮಿಗೆ ಹೊರಟ. ಹುಡುಗರು ಕಟ್ಟಾದ ಕೇಬಲ್ ಗಳನ್ನು ಹುಡುಕುತ್ತಾ ಮುಂದೆ ಸಾಗುತ್ತಿದ್ದರು.

ಊರಲ್ಲಿ ಸಾಕಷ್ಟು ಆಸ್ತಿ, ಗತ್ತು, ಗೌರವ ಎಲ್ಲಾ ಇದ್ದರೂ ಸಕಲೇಶಪುರಕ್ಕೆ ಬಂದು ಈ ಕೇಬಲ್ ಬಿಸಿನೆಸ್ ನಡೆಸುವ ವ್ಯವಹಾರಕ್ಕೆ ಈ ಶಿವ ಯಾಕಾದರೂ ಕೈ ಹಾಕಿದನೋ ಸರಿಯಾಗಿ ಗೊತ್ತಿಲ್ಲ. ನಾಲ್ಕು ಜನರ ಮದ್ಯೆ ಇವನ ಹೆಸರು ಸದಾ ಓಡಾಡುತ್ತಿರಬೇಕೆಂಬ ಅಸೆ ಇತ್ತು, ಊರಲ್ಲಿ ರೈತಸಂಘ ನಾಮಕಾವಸ್ಥೆಗೆ ತಲುಪಿದಾಗ ತನ್ನ ಕಾರ್ಯಧರ್ಶಿ ಸ್ಥಾನ ಇದೆಯೋ ಇಲ್ಲವೋ ಅನ್ನುವುದು ಅವನಿಗೇ ಗೊತ್ತಾಗಲಿಲ್ಲ. ಹೋರಾಟವೇ ಇಲ್ಲದ ಮೇಲೆ ಹುದ್ದೆ ಎಲ್ಲಿಂದ ಬರಬೇಕು. ಸೋಮವಾರಪೇಟೆಯ ರೈತಸಂಘ ಅಸ್ತಿತ್ವ ಕಳೆದು ಕೊಂಡಂತಾಗಿತ್ತು. ಯಾವುದೇ ಮೀಟಿಂಗ್ ಗಳು ನಡೆಯುತ್ತಿರಲಿಲ್ಲ. ರೈತಸಂಘ ಉತ್ತುಂಗದಲ್ಲಿದ್ದಾಗ ಮಾಡುತ್ತಿದ್ದ ಗುಂಡಾಗಿರಿ, ದವಲತ್ತುಗಳು ಈಗ ನಡೆಯುತ್ತಿರಲಿಲ್ಲ. ಮನೆಯೊಳಗೂ ಇವನ ಮಾತು ಅಷ್ಟಾಗಿ ನಡೆಯುತ್ತಿರಲಿಲ್ಲ. ಇವೆಲ್ಲದರ ಪರಿಣಾಮವೇ ಈ ಕೇಬಲ್ ನೆಟ್ ವರ್ಕ್ ಬಿಸಿನೆಸ್ ಇದ್ದಿರಬೇಕು. ಸಕಲೇಶಪುರಕ್ಕೆ ಬಂದ ಮೇಲೆ ಉತ್ತುಂಗದ ಸ್ಥಿತಿಯಲ್ಲಿದ್ದ ಕೇಬಲ್ ನೆಟ್ವರ್ಕ್ ಬಿಸಿನೆಸ್ ನಿಂದ ರಾಜ್ಯ ಕೇಬಲ್ ನೆಟ್ವರ್ಕ್ ಅಸೋಸಿಯೇಷನ್ ನಲ್ಲಿ ಸದಸ್ಯನೂ ಆದ. ಆಗಾಗ ಬೆಂಗಳೂರಿನ ಕೊರಮಂಗಲದಲ್ಲಿದ್ದ ಕಚೇರಿಯಲ್ಲಿ ನಡೆಯುತ್ತಿದ್ದ ಮೀಟಿಂಗ್ ಗಳಲ್ಲೂ ಭಾಗವಹಿಸುತ್ತಿದ್ದ.

ತನ್ನ ವಿಸಿಟಿಂಗ್ ಕಾರ್ಡ್ ಜೊತೆಗೆ ಅಸೋಸಿಯೇಷನ್ ಸದಸ್ಯತ್ವದ ವಿಸಿಟಿಂಗ್ ಕಾರ್ಡೂ ಪ್ರಿಂಟ್ ಹಾಕಿಸಿಕೊಂಡಿದ್ದ. ಕ್ರಮೇಣ ಸಕಲೇಶಪುರದಲ್ಲಿ ಇನ್ನೂ ಒಂದಿಬ್ಬರು ತಮ್ಮದೇ ಕೇಬಲ್ ನೆಟ್ವರ್ಕ್ ಪ್ರಾರಂಭ ಮಾಡಿದರು. ಯಾವಾಗ ಏರ್ಟೆಲ್, ಸನ್ ನೆಟ್ವರ್ಕ್, ಟಾಟಾ ಸ್ಕೈ ನಂತಹವರು ಮನೆ ಮನೆಗೆ ಬೇಕಾದ ಡಿಷ್ ಅಂಟೆನಾಗಳನ್ನು ಮಾರ್ಕೆಟಿಗೆ ಪರಿಚಯಿಸಿದರೋ, -ಮುಂದಿನ ಪುಟಕ್ಕೆ...

ಆಗ ಈ ಕೇಬಲ್ ನೆಟ್ವರ್ಕ್ ದಂದೆಗೆ ಕಡಿವಾಣ ಬೀಳತೊಡಗಿತು. ಶಿವ ತನ್ನ ಕೇಬಲ್ ನೆಟ್ವರ್ಕ್ ಬೇರೆಯವರಿಗೆ ಮಾರಿ, ಡಿಷ್ ಆಂಟೆನಾ ಸೇಲ್ಸ್ ಅಂಡ್ ಸರ್ವಿಸ್ ಅಂಗಡಿ ತೆರೆದ. ಇದು ಕೆಲವು ವರ್ಷ ನಡೆಯಿತು. ಆ ವೇಳೆಗೆ ಅಲ್ಲಿನ ಎಲ್ಲಾ ಹೋಮ್ ಅಪ್ಪ್ಲೈಯೆನ್ಸ್ ಅಂಗಡಿಗಳಲ್ಲಿ ಟಿವಿ ತೆಗೆದುಕೊಂಡವರಿಗೆ ಡಿಸ್ಕೌಂಟ್ ನಲ್ಲಿ ಡಿಷ್ ಮತ್ತು ಸೆಟಪ್ ಬಾಕ್ಸ್ ಗಳನ್ನು ನೀಡಲು ಶುರು ಮಾಡಿದರು. ಅಲ್ಲಲ್ಲಿ ಆನ್ ಲೈನ್ ಸರ್ವಿಸ್ ಕೂಡಾ ಪ್ರಾರಂಭವಾದವು.

ಶಿವನ ಈಗಿನ ಬಿಸಿನೆಸ್ ಅಷ್ಟೇನೂ ಲಾಭದಾಯಕವಾಗಿರಲಿಲ್ಲ. ಪ್ರಾರಂಭದಲ್ಲಿ ಜನರನ್ನು ಸೆಳೆಯಲು ಅನೇಕರಿಗೆ ಸಾಲದ ರೂಪದಲ್ಲಿ ಡಿಷ್ ಮತ್ತು ಸೆಟಪ್ ಬಾಕ್ಸ್ ಗಳನ್ನು ನೀಡಿದ್ದ, ಅದರಲ್ಲಿ ಕೆಲವರು ಇವತ್ತು ನಾಳೆ ಅಂತ ದುಡ್ಡು ಕೊಡದೆ ಸತಾಯಿಸ ತೊಡಗಿದರು. ಇದರಿಂದ ಅಸಲೂ ಸಿಗದೇ ನಷ್ಟವಾಗ ತೊಡಗಿತು. ಇವೆಲ್ಲದರ ಪರಿಣಾಮ ಶಿವ ಸಕಲೇಶ ಪುರ ಬಿಟ್ಟು ಊರಿಗೆ ಮರಳಲು ನಿರ್ಧರಿಸಿದ. ತನ್ನ ಅಂಗಡಿಯನ್ನು ಮಾರಲು ಪ್ರಯತ್ನ ಪಟ್ಟರೂ ಅದನ್ನು ಕೊಂಡು ಕೊಳ್ಳಲು ಯಾರೂ ರೆಡಿ ಇರಲಿಲ್ಲ. ಇವನ ಕೇಬಲ್ ನೆಟ್ವರ್ಕ್ ತೆಗೆದುಕೊಂಡಿದ್ದ ಹುಡುಗರಿಗೆ ಗುತ್ತಿಗೆ ಆಧಾರದಲ್ಲಿ ನೀಡಿ ಪ್ರತಿ ತಿಂಗಳು ಇಂತಿಷ್ಟು ಕೊಡಬೇಕೆಂದು ತೀರ್ಮಾನಿಸಲಾಯಿತು. ಅಂಗಡಿಗೆ ನೀಡಿದ್ದ ಅಡ್ವಾನ್ಸ್ ಮತ್ತು ಅಂಗಡಿಯನ್ನು ಇಡಲು ಖರ್ಚು ಮಾಡಿದ್ದ ಹಣ ಮತ್ತು ಅಂಗಡಿಯಲ್ಲಿದ್ದ ಸಾಮಾನುಗಳನ್ನು ಲೆಕ್ಕ ಹಾಕಿದಾಗ ಸುಮಾರು ಮೂರೂ ಲಕ್ಷದಷ್ಟು ಆಯಿತು. ಅಷ್ಟು ಹಣವನ್ನು ಆ ಹುಡುಗರು ಒಟ್ಟಾಗಿ ನೀಡಲು ಸಾಧ್ಯವಿಲ್ಲದೆ ಇದ್ದುದರಿಂದ ಗುತ್ತಿಗೆಗೆ ತೆಗೆದು ಕೊಂಡು ಪ್ರತೀ ತಿಂಗಳಿಗೆ ಹತ್ತು ಸಾವಿರ ವನ್ನು ನೀಡಲು ಒಪ್ಪಿಕೊಂಡು, ಬಾಡಿಗೆಯನ್ನು ಅಂಗಡಿಯನ್ನು ವಹಿಸಿಕೊಂಡವರೇ ನೀಡಬೇಕೆಂದು ತೀರ್ಮಾನಿಸಲಾಯಿತು. ಅದಕ್ಕೆ ಬೇಕಾದ ಕರಾರು ಪತ್ರವನ್ನೂ ಮಾಡಿಕೊಂಡರು.

ಈಗ ಶಿವನಿಗೆ ಊರು ಬಿಟ್ಟು ಹದಿನೈದು ವರ್ಷ ಸಕಲೇಶಪುರದ ಒಂಟಿ ಜೀವನನಕ್ಕೆ ಆಸರೆಯಾಗಿದ್ದ ಎಲ್ಲಾ ಕೊಂಡಿಗಳನ್ನು ಕಳಚಿಕೊಂಡು ಹೊರಡುವ ಸಮಯ ಬಂದಿತ್ತು. ಅವನ ಹುಡುಗಿಯ ಮನೆಗೆ ಹೋಗಿ ಆಗಾಗ ಬರುವುದಾಗಿ ತಿಳಿಸಿದ, ಅವಳು ಒಳಗೆ ದುಃಖವನ್ನೂ ನುಂಗಿಕೊಂಡು ತಲೆಯಲ್ಲಾಡಿಸಿದಳು. ಕೊನೆಯ ಬಾರಿಯೋ ಎಂಬತ್ತೆ ಗಟ್ಟಿಯಾಗಿ ಅಪ್ಪಿಕೊಂಡ. ಅವಳು ಕೊಸರಾಡಲಿಲ್ಲ. ಇವನ ಬಂಧನದಿಂದ ಬಿಡಿಸಿಕೊಂಡು ಬಂದ ಕಣ್ಣೀರನ್ನು ಒರೆಸಿಕೊಂಡಳು. ಹುಷಾರಿಲ್ಲದೆ ರೂಮಿನಲ್ಲಿ ಮಲಗಿದ್ದ ಹುಡುಗಿಯ ಅವ್ವನಿಗೆ ಇದ್ಯಾವುದರ ಪರಿವೇ ಇರಲಿಲ್ಲ. ಶಿವ ರೂಮಿಗೆ ಬಂದವನೇ, ತನ್ನ ಬಟ್ಟೆ ಬರೆಗಳನ್ನು ಪ್ಯಾಕ್ ಮಾಡಿಕೊಂಡು ಊರಿನ ಬಸ್ ಹತ್ತಲು ರೆಡಿಯಾದ. ಕೇಬಲ್ ರಾಜನಂತೆ ಮೆರೆದ ಶಿವ ಮನೆಗೆ ವಾಪಸು ಹೋಗಲು ಮುಖ್ಯ ಕಾರಣ ಅವನ ಮಗನಿಗೆ ಲಕ್ವ ಹೊಡೆದಿದ್ದು ಎಂದು ಆಮೇಲೆ ಎಲ್ಲರಿಗೂ ತಿಳಿಯಿತು. ಕೆಳಗಿನ ಗೂಡಂಗಡಿಗೆ ಹೋಗಿ ಎರಡು ಪ್ಯಾಕು ಸಿಗರೇಟು ಕೊಂಡು, ಹಳೆಯ ಲೆಕ್ಕವನ್ನೆಲ್ಲ ಚುಕ್ತ ಮಾಡಿ ಅದರ ಜೊತೆಗೆ ಈಗಾಗಲೇ ಲೆಕ್ಕ ಬರೆಸಿದ್ದ ಅನೇಕ ಅಂಗಡಿಗಳ ಲೆಕ್ಕವನ್ನು ಚುಕ್ತಾ ಮಾಡಿದ. -ಮುಂದಿನ ಪುಟಕ್ಕೆ...

ತಾನು ಊರಿಗೆ ಹೊರಡುವ ವಿಷಯವನ್ನು ಅಂಗಡಿಯವನಿಗೆ ತಿಳಿಸಲಿಲ್ಲ. ಅಲ್ಲಿಂದ ಬಸ್ ಸ್ಟ್ಯಾಂಡಿಗೆ ಬಂದು ಊರಿನ ಬಸ್ಸು ಹತ್ತಿ ಕಿಟಿಕಿ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಹೊರಗೆ ನೋಡ ತೊಡಗಿದ. ಮಳೆಗಾಲವಾದುದರಿಂದ ಜನರ ರಷ್ಷು ಅಷ್ಟಾಗಿ ಇರುವುದಿಲ್ಲ, ಬಸ್ ಡ್ರೈವರ್ ಗಾಡಿ ಸ್ಟಾರ್ಟ್ ಮಾಡಿ, ಹಾರ್ನ್ ಹಿಸುಕುತ್ತಾ ಪೊಂ ಪೊಂ ಅಂತ ಸೌಂಡ್ ಮಾಡತೊಡಗಿದ, ಅಷ್ಟರಲ್ಲಿ ಕಂಡೆಕ್ಟರ್ ಬಸ್ ಹ್ವರ್ಡ್ತು, ಹತ್ತೊರೆಲ್ಲಾ ಹತ್ಗ್ಯಳಿ ಅಂತ ಬಾಗಿಲು ಜೋರಾಗಿ ಹಾಕಿ, ವಿಷಲ್ ಊದಿ ರೈಟ್ ರೈಟ್ ಅನ್ನುತ್ತಿದ್ದಂತೆ ಡ್ರೈವರ್ ಫಸ್ಟ್ ಗೇರ್ ಗೆ ಹಾಕಿ ಗಾಡಿ ಮುಂದೆ ಸರಿಸಿದ, ಅಷ್ಟರಲ್ಲಿ ಬಸ್ಸಿನ ಮುಂದುಗಡೆಯಿಂದ ಓಡಿ ಬಂದ್ ಒಂದಿಬ್ಬರು ಬಸ್ಸನ್ನು ಅಡ್ಡ ಹಾಕಿದರು. ಡ್ರೈವರ್ ಬ್ರೇಕ್ ಹಾಕಿ ಗಾಡಿ ನಿಲ್ಲಿಸಿಕೊಂಡ, ಆ ಕಡೆಯಿಂದ ಓಡಿ ಬಂದ ಅವರಿಬ್ಬರನ್ನು ಬಸ್ ಗೆ ಹತ್ತಿಸಿಕೊಂಡ ಕಂಡೆಕ್ಟರ್ ಮತ್ತೊಮ್ಮೆ ವಿಷಲ್ ಊದಿ ರೈಟ್ ರೈಟ್ ಅಂದ, ಬಸ್ ಹೊರಟಿತು..

ಬಸ್ಸಿನ ಹೊರಗೆ ತುಂತುರು ಮಳೆಯ ಹನಿಗಳು ಜೋರಾಗತೊಡಗಿದವು. ಗಾಳಿ ಬೀಸಿದ ರಭಸಕ್ಕೆ ಬಸ್ಸಿನ ಕಿಟಿಕಿಯಿಂದ ಎರಚಲು ಹೊಡೆಯಲು ಪ್ರಾರಂಭವಾಯಿತು. ಅರ್ಧ ತೆರೆದಿದ್ದ ಕಿಟಿಕಿ ಗ್ಲಾಸನ್ನು ಪೂರ್ಣ ಮುಚ್ಚಿ ಸೀಟಿನ ಹಿಂದಕ್ಕೆ ತಲೆ ಒರಗಿಸಿ ಕಣ್ಣು ಮುಚ್ಚಿ ನಿದ್ರಿಸಲು ಪ್ರಯತ್ನಿಸಿದ, ಆದರೆ ನಿದ್ರೆ ದೂರದ ಮಾತಾಗಿತ್ತು. ಶಿವ ತಿಂಗಳಿಗೊಮ್ಮೆಯಾದರೂ ಊರಿಗೆ ಹೋಗಿ ಬರುತ್ತಿದ್ದ, ಆದರೆ ಈ ಬಾರಿ ಶಾಶ್ವತವಾಗಿ ಅಲ್ಲೇ ನೆಲೆಸಲು ಹೊರಟಿದ್ದಾನೆ. ನೂರಾರು ಆಲೋಚನೆಗಳು ಕಣ್ಣ ಮುಂದೆ ಸಾಗಿದಂತೆ...... ತೋಟದ ಕೆಲಸ ಮಾಡ ಬೇಕಿದ್ದ ಮಗ ಲಕ್ವಾ ಹೊಡೆದು ಹಾಸಿಗೆಯಲ್ಲೇ ಮಲಗಿಕೊಂಡಿದ್ದಾನೆ, ಊರಲ್ಲಿ ಮತ್ತೆ ತೋಟದ ಕೆಲಸಕ್ಕೆ ಅಣಿಯಾಗಬೇಕು. ಮನೆಯವರೊಂದಿಗೆ ಬೆರೆತು ಜೀವನ ನಡೆಸಬೇಕು. ಉಳಿದ ತಮ್ಮಂದಿರು ಬೇರೆ ಮನೆ ಮಾಡಲು ಆಗಲೇ ಮನೆ ಕಟ್ಟಿಸುತ್ತಿದ್ದಾರೆ, ತನ್ನ ಎಪ್ಪತ್ತು ವರ್ಷದ ಮನೆಯ ಮುಂದೆಯೇ ತನ್ನ ಕುಟುಂಬಕ್ಕಾಗಿ ಹೊಸ ಮನೆ ಕಟ್ಟಲು ಅಡಿಪಾಯ ಹಾಕಿದ್ದಾರೆ, ಅದನ್ನು ಪೂರ್ತಿಗೊಳಿಸ ಬೇಕು, ಹೀಗೆ ಹತ್ತು ಹಲವು ಯೋಚನೆಗಳಿಗೆ ಓಡುವ ಬಸ್ಸು ಆಗಾಗ ಬ್ರೇಕು ಹಾಕುತ್ತಿರುತ್ತದೆ. ಆಗ ಯೋಚನೆಯಿಂದ ಹೊರಗಡೆ ಬಂದು ಬಸ್ಸಿನ ಕಿಟಿಕಿಯ ಮೂಲಕ ಹೊರಗಿನ ಪ್ರಕೃತಿ ಮಳೆಯೊಂದಿಗೆ ನೆನೆಯುತ್ತಾ ನಗುತ್ತಿರುವುದನ್ನು ನೋಡುತ್ತಾನೆ, ಆದರೆ ಶಿವನಿಗೆ ಅಲ್ಲಲ್ಲಿ ಉರುಳಿ ಬಿದ್ದ ಮರಗಳು, ಮುರಿದು ಬಿದ್ದ ಕೊಂಬೆಗಳು ಮತ್ತು ವಿದ್ಯುತ್ ಕಂಬಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಬಸ್ಸು ಊರಿನ ಹತ್ತಿರ ತಲುಪುತ್ತಿರಬೇಕಾದರೆ ಶಿವನಿಗೆ ಏನೋ ಕಳೆದು ಕೊಂಡಂತೆ, ಏನೋ ಗಳಿಸಿಕೊಂಡಂತೆ, ಮನಸ್ಸು ಹೊಸ ಪಯಣಕ್ಕೆ ಹಾತೊರೆಯುತೊಡಗುತ್ತದೆ. -ಕೊಡಗಿನ ಗಣೇಶ್ 18/10/2023

-ಮುಂದಿನ ಪುಟಕ್ಕೆ...

ನನ್ನೊಳಗಿನ ಕವಿತೆಗಳು

ಕೊಡಗಿನ ಗಣೇಶ್

My Poem Book

Kodagina Ganesh
bloggers image ಮುಂದೆ ಹೋಗಿ →

ಮೋಹಕ ಕಾಫಿ!

Poem image coffee

1. ಬದುಕು ಶೂನ್ಯವೆನಿಸದಾಗ

ಒಮ್ಮೆ ನಕ್ಕು ಬಿಡಿ !

ಮನಸು ಹಗುರವಾದೀತು

ಚಿಕೋರಿ ಹಾಕದ ಸ್ಟ್ರಾಂಗ್

ಕಾಫಿ ಮಾಡಿ ಕುಡಿಯಿರಿ

ಮೂಗಿನ ಹೊಳ್ಳೆಗಳಿಂದ

ಮೆದುಳೊಳಗೆ ಹೊಕ್ಕ

ಕಾಫಿಯ ಆಹ್ಲಾದತೆಯನ್ನು

ಅನುಭವಿಸಿ

ಅದು

ನೀವೇ ಹುರಿದು

ಪುಡಿಮಾಡಿದ

ಕಾಫಿ ಬೇಳೆಯದ್ದಾಗಿದ್ದರೆ

ಅದರ ಮಜಾನೇ ಬೇರೆ

ಹೊರಗೆ ಮೋಡ

ಮಳೆಯ ಸಿಂಚನ

ಕುಳಿರ್ ಗಾಳಿ

ಮಧ್ಯಮ ಮಳೆ ಗಾಳಿಗೆ

ಊರೆಲ್ಲಾ ಸ್ಥಬ್ಧ

ಹಾಕಿದ ಬಟ್ಟೆಯೊಳಗೆ

ಹೊದ್ದ ಕಂಬಳಿಯ ದಾಟಿ

ಒಳನುಗ್ಗಲೆತ್ನಿಸುವ

ಈ ಚಳಿ ಗಾಳಿಗೆ

ಹಗಲು ರಾತ್ರಿಗಳೆಂಬ

ಭೇದವಿಲ್ಲ

ಇಲ್ಲಿ

ಮಳೆಯಲ್ಲಿ

ಇಪ್ಪತ್ನಾಲ್ಕು ಘಂಟೆಯು

ಚಳಿ ಚಳಿ ಚಳಿ

ಹಾಲಿದ್ದರೆ ಒಂತರ ಮಜಾ

ಸಕ್ಕರೆ ಬೆಲ್ಲವಿದ್ದರೆ

ಇನ್ನೊಂಥರ ಮಜಾ

ಇವೆರಡೂ ಇಲ್ಲದಿದ್ದರೆ

ಕರಿ ಕಾಫಿ

ಬಹುತ್ ಮಜಾ

ಆಗಲೇ ನೆನಪಾಗುವುದು

ಈ ಗೊಡ್ಡು ಕಾಫಿ

ಕರಿ ಕಾಫಿ

ಲೆಸ್ಸು

ಇವು ಸೇರದಿದ್ದರೆ

ಹಾಲು ಸಕ್ಕರೆಗಳ ಮಿಲಾವಟ್ಟು

ವಾವ್

ಕಾಫಿ ಕುಡಿಯದವರಿಗೇನು ಗೊತ್ತು

ಇದರ ಗಮ್ಮತ್ತು!

-ಕೊಡಗಿನ ಗಣೇಶ್

21/08/2026

← ಹಿಂದೆ ಹೋಗಿ
3
ಮುಂದೆ ಹೋಗಿ →

2. ಮುಚ್ಚಿಬಿಡಿ ಕ್ಷುದ್ರ ಮನಸ್ಸುಗಳನ್ನು!

Poem image wall

ಎಲ್ಲರೂ, ಬಣ್ಣ ಬಣ್ಣವೆಂದು

ಆಡತೊಡಗಿದ್ದಾರೆ ಆಟವ

ಮುಖ

ಮೈಮೇಲೆ

ಪಿಚಕಾರಿಯ ಬಣ್ಣದ ನೀರಿನಲ್ಲಿ

ಆಟವಾಡುತ್ತಿದ್ದಾರೆ

ಬಣ್ಣದ ಆಟ

ಹೋಳಿಯಾಟ

ಅಲ್ಲೆಲ್ಲೋ ಮಸೀದಿಗಳಿಗೆ ಬಟ್ಟೆ ಕಟ್ಟಿದ್ದಾರಂತೆ

ಮಸೀದಿಯ ಬಣ್ಣ ಮಾಸ ಬಾರದೆಂದೋ

ಅಥವಾ

ಮಸೀದಿಗೆ ಬಣ್ಣ ತಾಗದಿರಲೆಂದೋ

ಆಗೊಮ್ಮೆ

ಅವನ್ಯಾರೋ ದೊರೆಯಂತೆ

ನಮ್ಮೂರ ಚಂದ ಕಾಣಲು ಬಂದಿದ್ದಾಗ

ನಮ್ಮೂರ ಗುಡಿಸಲುಗಳಿಗೆ

ಗೋಡೆ ಕಟ್ಟಿ

ಮರೆ ಮಾಚಿದ್ದರು

ಬಡವರ ಬದುಕನ್ನು

ಇದೇನು ಕಣ್ಣಾಮುಚ್ಚಾಲೆ ಆಟವೇ

ಎಲ್ಲರ ಬಳಿಯೂ

ಯಾಂತ್ರಿಕ ದುರ್ಭಿನುಗಳಿವೆ

ಮುಚ್ಚಿಟ್ಟೊಷ್ಟು

ಕೆದಕಿ ತೆಗೆದು

ಜಗದ ಮುಂದೆ ಹರಾಜು ಹಾಕುತ್ತಾರೆ

ನಿಮ್ಮ ಮಾನವ!

‘ಹೋಳಿ’ಗೆ ಗೊತ್ತಿರುವುದು

ಬರೀ ಬಣ್ಣ ಬಣ್ಣ ಬಣ್ಣ

ಅದಕ್ಕೆ ಮಂದಿರ ಮಸೀದಿ

ಜಾತಿ-ಧರ್ಮಗಳೆಂಬ

ಭೇದವಿಲ್ಲ

ಮಸೀದಿ-ಮಂದಿರಗಳ

ತೆರೆದರೂ-ಮುಚ್ಚಿದರೂ

ಹೋಳಿ ನಿಲ್ಲುವುದಿಲ್ಲ

ಮೊದಲು ನಿಮ್ಮ ಮನಸಿನಲ್ಲಡಗಿರುವ

ಮುಸುಕನ್ನು ಸರಿಸಿರಿ

ಮುಚ್ಚಬೇಕಾದದ್ದು

ಮಸೀದಿ-ಮಂದಿರಗಳನ್ನಲ್ಲ

ನಿಮ್ಮ ಕ್ಷುದ್ರ ಮನಸ್ಸುಗಳನ್ನು!

-ಕೊಡಗಿನ ಗಣೇಶ್

21/08/2026

← ಹಿಂದೆ ಹೋಗಿ
4
ಮುಂದೆ ಹೋಗಿ →

3. ಆಸೆಯೊಂದಿಗೆ ನರ್ತಿಸುವ ನೆರಳು!

Poem image matahari

ಸೂರ್ಯೋದಯದ ಚಿನ್ನದ ರೇಷ್ಮೆಯಲ್ಲಿ ಅವಳು ಚಲಿಸಿದಳು,

ಬೆಳಕಿಗೆ ನೇಯ್ದ ಪಿಸುಮಾತು,

ಎರವಲು ಪಡೆದ ಹೆಸರುಗಳಿಂದ ಹುಟ್ಟಿದ ನರ್ತಕಿ,

ರಾತ್ರಿಯಿಡೀ ಹಾರುವ ಪ್ರೇತ,

ಅವಳೇ ಮಾತಾ ಹರಿ.

ದೂರದ ತೀರಗಳಿಂದ ಅವಳ ಕಥೆ ಏರಿತು

ವಿದೇಶಿ ಮಬ್ಬಿನಲ್ಲಿ ಮರುಜನ್ಮ ಪಡೆದ ಹುಡುಗಿ,

ಕಮಲ ಪುರಾಣಗಳು ಮತ್ತು ದೇವಾಲಯದ ಹೊಗೆಯಲ್ಲಿ

ಅವಳು ಬೆಳೆಸಲು ಕಲಿತ ಮುಖವಾಡಗಳಾದವು.

ಪುರುಷರು ಅವಳನ್ನು ಉತ್ತರಿಸಿದ ಪ್ರಾರ್ಥನೆಯಂತೆ ನೋಡಿದರು,

ಅವಳ ಕರಗಿದ ಕೃಪೆಯಿಂದ ಮೋಡಿ ಮಾಡಲ್ಪಟ್ಟರು;

ಅವಳು ತನ್ನ ಕೈಯಲ್ಲಿ ರಹಸ್ಯಗಳೊಂದಿಗೆ ನೃತ್ಯ ಮಾಡಿದಳು,

ಅವಳ ಮುಖದ ಮೇಲೆ ಹೊಳೆಯುವ ಅರ್ಧಸತ್ಯ.

ಆದರೆ ಯುರೋಪ್ ಯುದ್ಧ ಮತ್ತು ಭಯದಿಂದ ಸುಟ್ಟುಹೋಯಿತು,

ಮತ್ತು ವದಂತಿಯು ಪ್ರತಿ ಉಸಿರನ್ನು ತೀಕ್ಷ್ಣಗೊಳಿಸಿತು;

ಅವರು ಹೊಗೆಯಲ್ಲಿ ಖಳನಾಯಕನನ್ನು ಹುಡುಕಿದರು.

ಅವಳ ಪ್ರಕಾಶಮಾನವಾದ ಹಿನ್ನೆಲೆಯಲ್ಲಿ;

ನಿರ್ಬಂಧಿತ ಬೆಳಕಿನಲ್ಲಿ ಗೋಚರಿಸುವ;

ಯಾವುದೋ ಒಂದು ಗಾಢ ಆಕಾರ

ಮತ್ತು ರೂಪರೇಷೆಯನ್ನು ಕಂಡುಕೊಂಡರು.

ವೇಶ್ಯೆ? ಕುತಂತ್ರಿ ಗೂಢಚಾರಿಣಿ?

ತನ್ನ ಕಲೆಗಾಗಿ ಶಿಕ್ಷೆಗೊಳಗಾದ ಮಹಿಳೆ?

ಕೇವಲ ದಂತಕಥೆ, ಪುರುಷರು ಪುನಃ ಬರೆದರು

ತಮ್ಮ ಹೃದಯದಲ್ಲಿ ನಡುಕವನ್ನು ಮರೆಮಾಡಲು?

ಮುಂಜಾನೆ ಅವಳು ತನ್ನ ಅದೃಷ್ಟಕ್ಕೆ ಕಾಲಿಟ್ಟಳು

ಸ್ಥಿರ ಹೆಜ್ಜೆಗಳೊಂದಿಗೆ, ಮುಖವಾಡವಿಲ್ಲದೆ, ಬಗ್ಗದೆ

ಅಂತಿಮ ಕ್ರಿಯೆ, ಶಾಂತ ಜ್ವಾಲೆ,

ಜನಸಮೂಹದಿಂದ ನುಂಗಿದ ಜೀವನ.

ಆದರೂ ಅವಳ ಹೆಸರು ವರ್ಷಗಳಲ್ಲಿ ತೇಲುತ್ತದೆ,

ಸಂಜೆ ಮತ್ತು ಬೆಂಕಿಯಲ್ಲಿ ಸುತ್ತುವರಿದ ಸಂಕೇತ.

ಮಾತಾ ಹರಿ: ಪುರಾಣ ಮತ್ತು ಮಹಿಳೆ,

ಆಸೆಯೊಂದಿಗೆ ನರ್ತಿಸುವ ನೆರಳು.

-ಕೊಡಗಿನ ಗಣೇಶ್

21/08/2026

← ಹಿಂದೆ ಹೋಗಿ
5
ಮುಂದೆ ಹೋಗಿ →

4. ಎಲ್ಲಿ ಕಾಣುವೆ ನಿನ್ನ ದೇವರ?

Poem image god

ಎಲ್ಲಾ ದೇವರ ಹುಡುಕುವಿಯೇನು

ಇಲ್ಲೇ ಹುಡುಕು ಎಲ್ಲರನ್ನು

ಮನದಲಿ ಮೂಡುವ ದೇವರುಗಳಿಗೆ

ಪಟವನು ಬರೆದು ಪೂಜುವೆಯೇನು

ಹಚ್ಚುವ ಹಣತೆಯ ಜ್ಯೋತಿಯಲ್ಲಿ

ದೇವರ ಕಿರಣ ಅಡಗಿದೆಯೇನು

ಕರ್ಪೂರಾರತಿ ತಟ್ಟೆಯ ಒಳಗೆ

ದೇವರ ಪಾದವ ಕಂಡಿಹೆಯೇನು

ಎಲ್ಲಾ ದೇವರ ಹುಡುಕುವಿಯೇನು

ಇಲ್ಲೇ ಹುಡುಕು ಎಲ್ಲರನ್ನು

ಪಟದೊಳಗಿರುವ ದೇವರ ಛಾಯೆಗೆ

ಮೂರ್ತ ಸ್ವರೂಪ ಕೊಟ್ಟಿರುವಿಯೇನು

ಹೂವನು ಮುಡಿಸಿ ಕಾಯನು ಒಡೆದು

ಆಲಾಪನೆಯ ಜಪಿಸುವಿಯೇನು

ಎಲ್ಲಾ ದೇವರ ಹುಡುಕುವಿಯೇನು

ಇಲ್ಲೇ ಹುಡುಕು ಎಲ್ಲರನ್ನು

ಕಲ್ಲ ದೇವರ ಕಡೆದವನಿನ್ನೂ

ಬಡವನಾಗೇ ಉಳಿದಿಹನಲ್ಲಾ

ಪೂಜೆಯ ಮಾಡುವ ಅರ್ಚಕನಿನ್ನೂ

ಸೇವಕನಾಗೇ ಉಳಿದಿಹನಲ್ಲ

ಎಲ್ಲಾ ದೇವರ ಹುಡುಕುವಿಯೇನು

ಇಲ್ಲೇ ಹುಡುಕು ಎಲ್ಲರನ್ನು

ಬಡವನ ಮನೆಗೆ ಬಾರದ ದೇವರು

ಉಳಿದೇ ಬಿಟ್ಟನು ಧನಿಕರ ಮನೆಯಲಿ

ಬಡವರು ಬೇಡಿ ಕೈಯನು ಮುಗಿದರೂ

ನೀಡಲಿಲ್ಲವೇ ಬೇಡಿದ ವರವನು

ಎಲ್ಲಾ ದೇವರ ಹುಡುಕುವಿಯೇನು

ಇಲ್ಲೇ ಹುಡುಕು ಎಲ್ಲರನ್ನು

ದೇವರ ಸೃಷ್ಟಿಸಿ ದೇವರ ಮೂಡಿಸಿ

ಮರೆತಿಹರೆಲ್ಲಾ ಬದುಕಿನ ಪರಿಯ

ಸಾವಿಗು ಅಂಜದ ಮನುಜರೆಲ್ಲಾ

ದೇವರ ಕಾಣಲು ಸಾಯುವರಲ್ಲಾ

ಎಲ್ಲಾ ದೇವರ ಹುಡುಕುವಿಯೇನು

ಇಲ್ಲೇ ಹುಡುಕು ಎಲ್ಲರನ್ನು

ಮನದಲಿ ಮೂಡುವ ದೇವರುಗಳಿಗೆ

ಪಟವನು ಬರೆದು ಪೂಜುವೆಯೇನೂ.....

-ಕೊಡಗಿನ ಗಣೇಶ್

13/01/2025

← ಹಿಂದೆ ಹೋಗಿ
6
ಮುಂದೆ ಹೋಗಿ →

5. ಕಲ್ಪನೆಗೂ ಮಿತಿಯಿರಲಿ

Poem image god

ಅವನು-ಅವಳು-ನಾನು

ಈ ತ್ರಿಕೋನ ಸ್ಪರ್ಧೆಯಲ್ಲಿ

ಗೆಲ್ಲುವವರಾರು?

ಅವನು ಹಾಡುಗಾರ

ಅವಳು ಕವಿಯತ್ರಿ

ನಾನು ಕತೆಗಾರ

ಅವನು ಹಾಡುವುದು ಅವಳ ಕವಿತೆಯನ್ನು

ಅವಳು ಓದುವುದು ನನ್ನ ಕತೆಯನ್ನು

ನಾನು ಮೆಚ್ಚುವುದು ಇಬ್ಬರನ್ನೂ

ಅವನ ಕಂಠ ಸುಶ್ರಾವ್ಯ

ಅವಳ ಕವಿತೆ ಮುಧುರ

ನನ್ನ ಕತೆ ಕಾಲ್ಪನಿಕ

ಅವಳು ಬರೆಯುತ್ತಾ ಬರೆಯುತ್ತಾ

ಹಾಡತೊಡಗಿದಳು

ಅವಳ ಧ್ವನಿಗೆ ಮಧುರವಿಲ್ಲ

ಅವನು ಹಾಡುತ್ತಾ ಹಾಡುತ್ತಾ

ಬರೆಯತೊಡಗಿದ

ಅದು ಕವಿತೆಯೂ ಆಗಲಿಲ್ಲ

ಕತೆಯೂ ಆಗಲಿಲ್ಲ

ನಾನು ಇಬ್ಬರನ್ನೂ ನೋಡತೊಡಗಿದೆ

ಹೊಸ ಕತೆಗೆ ವಿಷಯ ಸಿಕ್ಕಿತು

ಅವಳು ಬರೆಯುತ್ತಾ ಹಾಡುತ್ತಾ

ಮೈಮರೆಯ ತೊಡಗಿದಳು

ಅವನು ಹಾಡುತ್ತಾ ಬರೆಯುತ್ತಾ

ಲಯ ತಪ್ಪ ತೊಡಗಿದ

ನಾನು

ಎರಡು ಭುಜಗಳನ್ನು ಹಿಡಿದು

ಅಳ್ಳಾಡಿಸತೊಡಗಿದೆ

ಕಲ್ಪನೆಯಿಂದ ಹೊರಬಂದಾಗ

ಆ ಭುಜಗಳು

ನನ್ನವಾಗಿದ್ದವು

ಹಾಡುಗಾರ

ಕವಿಯತ್ರಿ

ಆನಂದದ ಹುಸಿನಗೆಯ ಬೀರಿ

ನನ್ನ ನೋಡ ತೊಡಗಿದರು

ನಸು ನಕ್ಕು ಬರೆಯತೊಡಗಿದೆ

ಹೊಸ ಶೀರ್ಷಿಕೆಯ ಹೆಸರು

"ಕಲ್ಪನೆಗೂ ಮಿತಿಯಿರಲಿ"!

-ಕೊಡಗಿನ ಗಣೇಶ್

12/10/2023

← ಹಿಂದೆ ಹೋಗಿ
7
ಮುಂದೆ ಹೋಗಿ →

6. ಅಪಶಕುನದ ಅನಾಮಿಕ ಬೆಕ್ಕು

Poem image god

ನೋಡಿ,

ನಾ ಹೊರಟ ಘಳಿಗೆಯೇ ಸರಿಗಿಲ್ಲ

ಹೊರಟು ಮನೆ ಗೇಟು ತೆರೆದೊಡನೆ,

ಎದುರಿಗೆ ಬಂದ ಕರಿ ಬೆಕ್ಕು

ಬಲದಿಂದ ಎಡಕ್ಕೆ

ಓಡುತ್ತಾ ಕಣ್ಮರೆಯಾದರೆ,

ಶಕುನಿ ಅಂತಾನೆ….

ಹತ್ತು ನಿಮಿಷ ಬಿಟ್ಟು ಹೊರಡು!

ಬೆಕ್ಕು ನಮ್ಮದ್ದೇ ಆಗಿದ್ದಿದ್ದರೆ,

ಮುದ್ದು ಮಾಡಿ ಕಳಿಸಬಹುದಿತ್ತು

ಇದು ಅನಾಮಿಕ ಬೆಕ್ಕು,

ಅದೂ ಕರೀದು.

ಲೇ ಬೆಕ್ಕೇ ನೀನೇಕೆ ಕಪ್ಪು

ನಿನ್ನ ಕಂಡವರೆಲ್ಲಾ

ಅಪಶಕುನ ಅಂತಾರೇಕೆ?

ನಿಧಾನಿಸಿ ಹೊರಟರೆ

ಮತ್ತೊಂದು ಬೆಕ್ಕು ಅಡ್ಡ ಬಂದರೆ

ನಮ್ಮ ಮನೆ ಸುತ್ತಾ ಮುತ್ತಾ

ಬೆಕ್ಕುಗಳು ಓಡಾಡುತ್ತವೆ

ಮನೆಯೊಳಗೂ ಸೀದಾ ಬಂದು

ಅದೂ ಇದೂ ಹುಡುಕುತ್ತವೆ

ನನ್ನ ಕಂಡೊಡನೆ ಪೇರಿ ಕೀಳುತ್ತವೆ

ರಾತ್ರಿ ಕಿಟಿಕಿ ಮುಚ್ಚದಿದ್ದರೆ

ಒಳನುಗ್ಗಿ ದಾಂದಲೆ ಮಾಡಿ

ಕುಳಿತು ಮಲಗಿ ಮಾಡುತ್ತವೆ

ಸೋಫಾ ಮೆಲೇ ಪಾಯಿಕಾನೆ

ಥೋ, ಯಂತ ಅವಸ್ಥೆ!

ಗುಳ್ಳೆ ನರಿ ಕಂಡರೆ ಅದೃಷ್ಟವಂತೆ

ನಮ್ಮೂರಲ್ಲಿ ತೋಟದಲ್ಲಿ ಓಡಾಡುತ್ತಾ

ರಾತ್ರಿಯೆಲ್ಲಾ ಊಳಿಡುತ್ತಿದ್ದವು

ಈಗ ಸಿಟಿಯ ಮೃಗಾಲಯದಲ್ಲಷ್ಟೇ

ಅವುಗಳ ಧರ್ಶನ!

ಗೂಬೆ ರಾತ್ರಿಯಲ್ಲಿ

ಕಾಗೆ ಹಗಲಿನಲ್ಲಿ ಕೂಗಿದರೆ

ಅದುವೇ ಅಪಶಕುನ

ಇವು ಬೆಕ್ಕಿನಷ್ಟಲ್ಲ, ಸ್ವಲ್ಪ ಕಮ್ಮಿ

ಈಗ ಹೊರಡುವಾಗ

ಮತ್ತದೇ ಕರಿ ಬೆಕ್ಕು!

ಎಡದಿಂದ ಬಲಕ್ಕೆ

ಒಂದೇ ಓಟ!

ಇಪ್ಪತ್ತು ನಿಮಿಷ ಕಾಯಲಾರೆ

ಹೊರಟ ಮೇಲೆ ಮರೆತದ್ದು ನೆನಪಾಗಿ

ಮನೆಯೊಳಗೆ ದೌಡಾದೆ

ಪರ್ಸು, ಮೊಬೈಲು, ಲಂಚ್ ಬಾಕ್ಸು

ಅಲ್ಲಲ್ಲೇ ನಗಾಡುತ್ತಿದ್ದವು

ಬಡ್ಡಿ ಮಕ್ಳಾ ಅಂತ ಬಯ್ಯಾಲಾರೆ

ಮರೆತದ್ದು ನಾನಲ್ಲವೇ

ಹೊರಬಂದು

ಸ್ಕೂಟರ್ ಸ್ಟಾರ್ಟ್ ಮಾಡಿ ಹೊರಟಾಗ

ಹತ್ತು ನಿಮಿಷ ಕಳೆದೆ ಹೋಗಿತ್ತು

ಮುಂದೆ ಬೆಕ್ಕೂ ಇಲ್ಲಾ, ಪಕ್ಕೂ ಇಲ್ಲಾ

ಎಲ್ಲಾ ಮಾಯಾ!

ಅಪಶಕುನಕ್ಕೊಂದು ತಿಲಾಂಜಲಿ ಇಟ್ಟು

ಹೊರಟೇ ಬಿಟ್ಟೆ,

ಮುಂದೇನು ಕಾದಿದೆಯೋ?

ಬಲ್ಲವರೇ ಬಲ್ಲರು!

-ಕೊಡಗಿನ ಗಣೇಶ್

28/01/2026

← ಹಿಂದೆ ಹೋಗಿ
8
ಮುಂದೆ ಹೋಗಿ →

7. ಕನಸೇ ನನ್ನ ಸಂಗಾತಿ

Poem image god

ನಿಶೆಯ ಮೌನದಲ್ಲಿ ನಕ್ಷತ್ರಗಳು ನುಡಿದಾಗ

ಮನದೊಳಗೊಂದು ಮಿಂಚು ಮೂಡಿ ಹೇಳಿತು

“ನಿನ್ನ ಹಾದಿ ನಿನಗೇ ಗೊತ್ತು

ಹೋದವರ ನೆರಳಲ್ಲಿ ನಿಂತುಕೊಳ್ಳಬೇಡ!”

ಕನಸು ನನ್ನ ಜೊತೆ ನಡೆದುಬಂತು

ಅದು ಮಾತನಾಡಲಿಲ್ಲ

ಸುಮ್ಮನೆ ಆಲಿಸುತ್ತಿತ್ತು

ನನ್ನ ಕಣ್ಣಿನ ಹನಿಯಲ್ಲಿ ಅದರ ನಗು

ನನ್ನ ಬದುಕಿನ ಬೆಳಕಾಯಿತು

ಏಕಾಂತವೇ ನನ್ನ ಮೊದಲ ಗುರು

ಮೌನವೇ ನನ್ನ ಪ್ರಥಮ ಪಾಠಶಾಲೆ

ಜನರ ಮಾತುಗಳಲ್ಲಿ ಶಬ್ದ ಇದ್ದರೂ

ನನ್ನ ಹೃದಯದಲ್ಲಿ ಅರ್ಥವಿತ್ತು

ಬಾಳು ಅಳೆದು ನೋಡುವ ಕಲೆಯ ಕಲಿಸಿತು

ಬರಹದ ಶಬ್ದವು ನನ್ನ ಶ್ವಾಸದ ಧ್ವನಿಯಾಯಿತು

ನೋವು ಬಂತು, ಕಾಗದ ನೆನೆಯಿತು

ಅಕ್ಷರಗಳು ಮಾತ್ರ ನಗುತ್ತಿದ್ದುವು

ಕಾಗದದ ಬಿಳಿ ಎಲೆಯೇ ನನ್ನ ಹೃದಯದ ಹಾಳೆ

ಮಸಿಯ ಹನಿ ನನ್ನ ಆತ್ಮದ ಉಸಿರು

ಲೇಖನಿ ಕೈಯಲ್ಲಿಡಿದಾಗ ದೈವದ ಸ್ಪರ್ಶವೆನಿಸಿತು

ಶಬ್ದ ಹುಟ್ಟಿದಾಗ ಜೀವವೇ ಹೊಸದಾಯಿತು

ಹಗಲು ಕನಸಿನ ಕಲ್ಲು ಒಡೆಯುತ್ತಿದ್ದೆ

ರಾತ್ರಿ ಅಕ್ಷರಗಳನ್ನು ಶಿಲ್ಪಿಸುತ್ತಿದ್ದೆ

ಜನರು ನಿದ್ದೆ ಮಾಡುವಾಗ

ನಾನು ಕನಸನ್ನು ಹೂವಾಗಿ ಬೆಳೆಸುತ್ತಿದ್ದೆ

ಅವುಗಳಲ್ಲಿ ದುಂಬಿಗಳು ಝೇಂಕರಿಸುತ್ತಿದ್ದವು!

ಕನಸು ನನ್ನ ಮಾತು ಕೇಳಿತು

ಬರಹ ನನ್ನ ಕಣ್ಣೀರು ಒರೆಸಿತು

ಮಾತುಗಳಿಲ್ಲದ ಮಿತ್ರತೆ

ಇದಕ್ಕಿಂತ ಶುದ್ಧವಾದ ಸ್ನೇಹ ಯಾವುದು?

ಬದುಕು ಎಂದರೆ ಕೇವಲ ಉಸಿರಲ್ಲ

ಅಕ್ಷರಗಳ ಹುಡುಕಾಟ

ಪ್ರತಿ ಸಾಲು ನನ್ನ ಹೆಜ್ಜೆ ಗುರುತು

ಪ್ರತಿ ಪದ್ಯ ನನ್ನ ಪ್ರಾಣದ ಚಿಹ್ನೆ

ಜನ ಕೇಳುತ್ತಾರೆ, ನಿನ್ನ ಸಂಗಾತಿ ಯಾರು?

ನಾನು ನಕ್ಕು ಹೇಳಿದೆ

ಕನಸೇ ನನ್ನ ಸಂಗಾತಿ

ಬರವಣಿಗೆಯೇ ನನ್ನ ಸ್ನೇಹಿತ

ಅವರು ಆಲಿಸಿದರು, ತಲೆಯಾಡಿಸಿದರು

ಆದರೆ ಅವರಿಗೆ ಗೊತ್ತಿರಲಿಲ್ಲ

ಈ ಶಬ್ದಗಳ ಹಿಂದೆ ಎಷ್ಟು ಜೀವವಿದೆ

ಈ ಅಕ್ಷರಗಳ ಒಳಗೆ ಮೌನ ಮಾತನಾಡಿದೆ

ಕನಸುಗಳು ಬಂದು ಹೋಗುತ್ತವೆ

ಆದರೆ ನಾನು ಅವುಗಳ ಪಳೆಯುಳಿಕೆ ಮೂಡಿಸಿದ್ದೇನೆ

ಮಳೆ ಬಂದು ಪಳೆಯುಳಿಕೆ ತೊಳೆದರೂ

ಅದರ ಛಾಪು ನನ್ನ ಹೃದಯದಲ್ಲಿ ಉಳಿಯುತ್ತದೆ

ದಿನ ಕಳೆದಂತೆ

ಅಕ್ಷರಗಳ ನದಿಯಂತಾಗಿ

ಭಾವನೆಗಳ ಹಾದಿಯಾಗಿ

ಪ್ರತಿ ರಾತ್ರಿ ನಾನು ನನ್ನನ್ನು ಮರು ಬರೆದಿದ್ದೆ

ಪ್ರತಿ ಬೆಳಿಗ್ಗೆ ಹೊಸ ಕಥೆ ಹುಟ್ಟುತ್ತಿತ್ತು

ಅಂತ್ಯವೆಂಬುದಿಲ್ಲ ಈ ಪಯಣಕ್ಕೆ

ಕವಿಯ ಹೃದಯಕ್ಕೆ ನಿದ್ರೆ ಇಲ್ಲ

ಅಕ್ಷರಗಳ ಶಾಶ್ವತ ನೃತ್ಯದಲ್ಲಿ

ನಾನು ಹುಡುಕುತ್ತಿದ್ದೇನೆ ನನ್ನ ಅಸ್ತಿತ್ವ

ಕನಸೇ ನನ್ನ ಸಂಗಾತಿ

ಅದು ನನ್ನ ಉಸಿರಿನ ಸಂಗೀತ

ಬರವಣಿಗೆಯೇ ನನ್ನ ಸ್ನೇಹಿತರು

ಅದು ಹರಿಯುತ್ತಿರುವ ನೀರಿನಂತೆ

ನಾನು ಒಂಟಿಯಲ್ಲ

ನನ್ನ ಶಬ್ದಗಳೇ ನನ್ನ ಜನ

ನನ್ನ ಕನಸುಗಳೇ ನನ್ನ ದೈವ

-ಕೊಡಗಿನ ಗಣೇಶ್

13/01/2025

← ಹಿಂದೆ ಹೋಗಿ
9
ಮುಂದೆ ಹೋಗಿ →

8. ಜಡತ್ವ!

Poem image god

ಬರೆದಷ್ಟು ಮುಗಿಯದ ಈ ಕತೆಗೆ

ವಯಸ್ಸಾಗುತ್ತಲೇ ಇಲ್ಲ

ಮಗುವಿನಂತೆ ಮಕ್ಕಳಾಟವಾಡುತ್ತಿದೆ

ಅಂಬೆಗಾಲೇನೋ ಇಟ್ಟಿತು

ಎದ್ದು ನಡೆವ ಸಾಹಸವೂ ಆಯಿತು

ಹೊಸಿಲು ದಾಟುತ್ತಿಲ್ಲ

ಅಲ್ಲೇ ಕುಕ್ಕುರು ಬಡಿದು ಕೊಂಡಿದೆ

ಕೈಹಿಡಿದು ಎಳೆದೆ

ಕೈ ಮಾತ್ರ ಮೇಲೆತ್ತುತ್ತಿದೆ

ದೇಹವೆಲ್ಲಾ ಅಲ್ಲೇ ಕುಳಿತ

ಸೋಂಬೇರಿ

ಕೋಳಿಗಾದರೆ

ಸೂಜಿ ಮದ್ದಲ್ಲಿ

ಬಹು ಬೇಗ ಬೆಳೆಸ ಬಹುದು

ನೆನಪುಗಳು

ಹಸಿಹಸಿಯಾಗಿರಬೇಕು

ಮಿಂಚುವ ಬಣ್ಣ

ಲಯ

ಸ್ವಾದ

ದೃಢತೆ

ಜನ ಮೆಚ್ಚುವ

ಪದಪುಂಜಗಳಿರಬೇಕು

ನೆನಪುಗಳು

ಹಸಿಹಸಿಯಾಗಿರಬೇಕು

ಮಿಂಚುವ ಬಣ್ಣ

ಲಯ

ಸ್ವಾದ

ದೃಢತೆ

ಜನ ಮೆಚ್ಚುವ

ಪದಪುಂಜಗಳಿರಬೇಕು

ಸಾಹಿತ್ಯ

ಓದುಗನ ಮನ ಮೀಟುವಂತಿರಬೇಕು

ಸಪ್ಪೆ ಸೋಡಾ ಕುಡಿಯಲು ಹಿತವೆನಿಸುವುದಿಲ್ಲ

ಬ್ರಾಂಧಿ-ವಿಸ್ಕಿಗೆ

ಹೇಳಿ ಮಾಡಿಸಿದ್ದು

ಮಕ್ಕಳಾದರೆ

ಕೊಂಪ್ಲೇನ್ ಕೊಡ ಬಹುದು

ಕತೆ ಬೆಳೆಯಲು

ಮನಸ್ಸು ಹಗುರಾಗಿರ ಬೇಕು

ಮುದಗೊಂಡಿರಬೇಕು

ಇತಿಮಿತಿಗಳ ಮೀರಿ ಬರೆದರೆ

ಸಂಸ್ಕಾರದ ಗೋಡೆ

ಅಡ್ಡ ನಿಲ್ಲುತ್ತದೆ

ಜನರಿಗೆ

ಸಂಸ್ಕಾರ ಮುಖ್ಯ ನೋಡಿ!

ಮೊದಲೆಲ್ಲಾ

ಒಪ್ಪಿಕೊಳ್ಳುವ ಜನರಿದ್ದರು

ಇಂದು

ಮೊಸರಲ್ಲಿ ಕಲ್ಲು ಹುಡುಕುವವರು

ತುಂಭಾ ಮಂದಿ

ಅಕ್ಷರಗಳ

ಹಿಸುಕಿ ಹಿಸುಕಿ

ವ್ಯಾಖ್ಯಾನಿಸುತ್ತಾರೆ

ಮುನ್ನುಡಿ

ಹಿನ್ನುಡಿ

ಬರೆಯುವವವರು

ನಾಳೆಗಳನ್ನು ಮಾಡುವವರೇ

ತೀಡಿ ತಿದ್ದುವವರು

ಹಣೆಬರಹ ನಿನ್ನದೆನ್ನುತ್ತಾರೆ

ಮುಗಿಯದ ಕತೆಯನ್ನೇ

ಕತ್ತರಿಸಿ ಕತ್ತರಿಸಿ

ಹನಿಗವನ ಮಾಡಲೆಂದರೆ

ಮಹಲಿನಿಂದ ಮನೆಗೆ ಹೋದಂಗಲ್ಲವೇ !

ಲೋ ಮಗು

ಎದ್ದು ನಡೆ

ಊಟ ನಿದ್ರೆಯ ಬಿಟ್ಟು

ನಿನ್ನ ಬೆಳೆಸುತ್ತೇನೆ

ಮುಗಿಯದ ಸಾರಿಗೆ

ಮತ್ತೆ ಒಗ್ಗರಣೆ ಹಾಕುತ್ತೇನೆ

ಸ್ವಲ್ಪ ಘಮ್ಮೆನ್ನಲಿ

ನಡೆ ಮುಂದೆ ನಡೆ ಮುಂದೆ

ಅಕ್ಷರಗಳ ಸಾಲ ಹಿಡಿದು

ಪುಟ ಪುಟಗಳ

ತುಂಬಿ ತುಳುಕಿಸಿ

ಬರೆದು ಮುಗಿಸೇ ಬಿಡು

ಬವಣೆ ಹೊತ್ತ ಕತೆಯ

ಹನಿಗವನ ಮಾಡಲಂತೂ

ಬಿಡುವುದಿಲ್ಲ

ಹಾಂ! ಅಗೊಳ್ಳಿ

ಮಗು ಹೊಸಿಲು ದಾಟುತ್ತಿದೆ!

-ಕೊಡಗಿನ ಗಣೇಶ್, 25/09/2025

← ಹಿಂದೆ ಹೋಗಿ
10
ಮುಂದೆ ಹೋಗಿ →

9. ಆಸೆ ಎ೦ಬ ಬಿಸಿಲು ಕುದುರೆ

Poem image god

ಬಯಕೆಗಳಿವೆ ನನಗೆ

ಬದುಕ ಕಟ್ಟಿಕೊಂಡು

ಬದುಕ ಬೇಕೆಂದು,

ಆಸೆಗಳಿವೆ

ಆಕಾಸದೆತ್ತರಕ್ಕೆ,

ಎಟುಕಲೊಲ್ಲದು

ನನ್ನೀ ಏಣಿ,

ಛಲವಿದೆ.

ಬಲವಿದೆಯಾ

ಪ್ರಯತ್ನಿಸಿ ನೋಡ ಬೇಕು,

ಮೂಳೆ ಮಾಂಸದ ತಡಿಕೆಯ

ಈ ದೇಹ

ಬಯಕೆಗಳ ಹೊರ ಸೂಸುತ್ತಿರುತ್ತದೆ.

ಈಡೇರಿಸಿಕೊಳ್ಳುವ

ದಾವಂತದಲ್ಲಿ

ಹತ್ತಿರುವ ಏಣಿ

ಅಲುಗಾಡುತ್ತಿರುವುದ

ಮರೆತು ಬಿಡುತ್ತದೆ

ಈ ಮರ್ಕಟ ಮನಸ್ಸು.

ಎಲಾ ಬಯಕೆಗಳಾ!

ಬೇಗೆಯಲ್ಲಿ ಬಸವಳಿದು

ಬಿದ್ದರೆ

ಏಳಲಾರದು ದೇಹ.

ದೇಹ

ವಯಸ್ಸು

ಮನಸ್ಸು

ಒಂದಕ್ಕೊಂದು ಬೆಸೆದು ಕೊಂಡರೂ,

ಒಂದೊಂದಕ್ಕೆ

ಒಂದೊಂದು ಬಯಕೆ

ಭುವಿಯೊಳು

'ನಾ'ನೆಂಬ ಅಹಂ

ಈ ಮನಸಿಗೆ!

ದೇಹ

ಕಟ್ಟು ಮಸ್ತಾಗಿದ್ದರೆ

ಕಲ್ಲ ಪುಡಿ ಮಾಡುವ ಹಂಬಲ!

ವಯಸ್ಸು

ಸುಳ್ಳು ಪುರುಕ!

ನಿಜ ಹೇಳಲಾರದು

ಮುವ್ವತ್ತು-ನಲವತ್ತಕ್ಕೆ

'ಆಂಟಿ-ಅಂಕಲ್ಲೆಂ”ದರೆ

ಎಲ್ಲಿಲ್ಲದ ಕೋಪ!

ಅರವತ್ತಕ್ಕೆ

ಅರುಳೋ-ಮರುಳೋ

ಎಂದರೆ

ಬಿಟ್ಟಾರೇ?

ರಾಜಕಾರಣಿ-ಸೆಲೆಬ್ರಿಟಿಗಳಿಗೆ

ಎಪ್ಪತ್ತು-ಎಂಬತ್ತಕ್ಕೆ

ಮುದುಕರೆನ್ನಿ!

ಕೊಂದು ಬಿಟ್ಟಾರು ನಿಮ್ಮನ್ನು!

ಹುಷಾರಾಗಿರ ಬೇಕು

ವಯಸು ಕೇಳುವಾಗ!

ಯಾರದ್ದು?

ನಿಮಗೆ ಬಿಟ್ಟಿದ್ದೇನೆ!

"ಆಸೆ ಎಂಬ ಬಿಸಿಲು ಕುದುರೆ ಏಕೆ ಏರುವೇ?

ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೇ?"

ಲ ಲಾ ಲ ಲಾ ಲ ಲಾ

ಲ ಲಾ ಲ ಲಾ ಲ ಲಾ ....

-ಕೊಡಗಿನ ಗಣೇಶ್

27/02/2024

← ಹಿಂದೆ ಹೋಗಿ
11
ಮುಂದೆ ಹೋಗಿ →

ಮೊಗ್ಗಿನೊಳಗಿನ ಪಕಳೆಗಳು

Poem image god

ಮೊಗ್ಗಿನೊಳಗಿನ ಪಕಳೆಗಳು

ನಗಲಾರಂಭಿಸಿದಾಗ

ಹೂವಾಗಿ ಅರಳುತ್ತವಂತೆ

ಅದರ ಸುವಾಸನೆಯೇ

ಕವಿತೆಯ ಸಾಲುಗಳು

ಕವಿ

ಅವುಗಳ ಜನನಿ!

(ನಿಮ್ಮಂತೆ......)

ಅವಳು ಅರಳುತ್ತಾಳೆ

ಸಾಲುಗಳಲ್ಲಿ

ಅದು ಕವಿತೆಯಂತೆ

ಅರಳುವ ಸುವಾಸನೆ

ಕವಿತೆಯ ಸಾಲುಗಳಲ್ಲಿದ್ದರೆ

ಅದು ಅವಳ ನಗುವಂತೆ

ನಗು

ಮಂದಹಾಸದ್ದೇ

ರೋಮಾಂಚನದ್ದೇ

ಹಾಗಿದ್ದರೆ

ನಿಮ್ಮ ಮನೆಯ ಪಡಸಾಲೆ

ಅದರಿಂದಾಚೆಗಿರುವ

ಒಳಕೋಣೆ

ಅಡುಗೆ ಮನೆ

ಇಲ್ಲೆಲ್ಲಾ ಬಿಟ್ಟು ಕೊಳ್ಳಿ

ನಿಮ್ಮ ಮನ-ಮನೆ ತುಂಬಿಸಿಕೊಳ್ಳಿ

ಮೈಲಿಗೆ ಎಂಬ ಪದವ

ನಿಮ್ಮ ಮನಸ್ಸಿನ ಶಬ್ದ ಕೋಶದಿಂದ

ಅಳಿಸಿ ಹಾಕಿ

ನಮ್ಮ ಮನೆಯೊಳಗೆ

ಬಾಗಿಲ ಹಿಂದೆ

ಗಮ್ಯ ಸ್ಥಾನವ

ಮುಟ್ಟಿ ಮುತ್ತಿಕ್ಕುವಾಗ

ಮಾಯವಾಗುವ ಮೈಲಿಗೆ

ನಿಮ್ಮ ಮನೆಯೊಳಗೇಕೆ

ಥಕ-ಥೈ ಕುಣಿಯುತ್ತದೆ

ಕಾಲು ದಾರಿಯಲ್ಲಿ ನಡೆಯಬಲ್ಲವರು

ಹೆದ್ದಾರಿ ಸೇರೇ ಸೇರುತ್ತಾರೆ

ತೆವಳುವವರು

ನಡೆಯುವವರು

ಓಡುವವರು

ತಲುಪುವುದು ಮಾತ್ರ

ಜೀವನದ ಕೊನೆಗೆ!

ಒಂದು ಚಂದದ ಪದ

ಕಟ್ಟುತ್ತೇನೆ

ತೀಡಿ

ತಿದ್ದಿ

ಹಾಡಿಗೆ ಅಣಿಗೊಳಿಸುತ್ತೇನೆ

ಶೃತಿಗೆ ಒಪ್ಪವಾಗಿ

ತಾಳಕ್ಕೆ ತಕ್ಕನಾಗಿ

ರಾಗಕ್ಕೆ ಸರಿಸಮನಾಗಿ

ಹಾಡುವ ಗಂಟಲಿಗಾಗಿ ಹುಡುಕುತ್ತೇನೆ

ನನ್ನದೇ ಕಂಠಕ್ಕೆ

ಶೃತಿ, ಲಯಗಳಿಲ್ಲ

ಅದು

ಸಂಗೀತದ

ಗಂಧ-ಗಾಳಿ ಕಂಡಿಲ್ಲ

ಕೋಗಿಲೆಯ ಕರಸಲೇ

ಅದಕ್ಕೆ

ನನ್ನ ಪದ ಗೊತ್ತಿಲ್ಲ

ಹಾಡುಗಾರರನ್ನು ಕೇಳಲೇ

ಅವರಿಗೂ

ಸಂಗೀತ ನುಡಿಸುವವರಿರಬೇಕು

ಪದ ಕಟ್ಟುವುದು ಸುಲಭ

ತಲುಪುವವರಿಗೆ ತಲುಪಲು

ನೂರಾರು ಮೆಟ್ಟಿಲುಗಳಿವೆ

ಪ್ರತೀ ಮೆಟ್ಟಿಲಲ್ಲೂ

ಹಿಡಿತವಿರಬೇಕು

ಎಚ್ಚರಿಕೆಯ ಹೆಜ್ಜೆಯಿಡಬೇಕು

-ಕೊಡಗಿನ ಗಣೇಶ್

03/01/2026

← ಹಿಂದೆ ಹೋಗಿ
12
ಮುಂದೆ ಹೋಗಿ →

ಓದುಗರೇ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ

ನನ್ನ ಕತೆ, ಕವನ ಮತ್ತು ಲೇಖನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿದು ಕೊಳ್ಳಲು ಉತ್ಸುಕನಾಗಿದ್ದೇನೆ, ಕೆಳಗಿನ ಬಟನ್ ಒತ್ತಿ ಇಮೇಲ್ ಕಳುಹಿಸಿ ಕೊಡಿ, ನಾನೇ ಖುದ್ದಾಗಿ ಉತ್ತರಿಸುತ್ತೇನೆ. ಧನ್ಯವಾದಗಳು..

-ಕೊಡಗಿನ ಗಣೇಶ್

We are here.....